ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ವೀರೇಂದ್ರ ಸೆಹ್ವಾಗ್
2020ನೇ ಸಾಲಿನ ಪ್ರತಿಷ್ಠಿತ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಆಯ್ಕೆ ಸಮಿತಿಗೆ ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರನ್ನು ಭಾರತ ಸರ್ಕಾರದ ಕ್ರೀಡಾ ಸಚಿವಾಲಯ ನೇಮಕ ಮಾಡಿದೆ. ಸೆಹ್ವಾಗ್ ಅವರೊಂದಿಗೆ ಭಾರತ ಹಾಕಿ ತಂಡದ ಸ್ಟಾರ್ ಆಟಗಾರನಾಗಿದ್ದ ಸರ್ದಾರ್ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ. ಒಟ್ಟು ಈ ಪ್ರಶಸ್ತಿ ಆಯ್ಕೆ ಕಮಿಟಿಯಲ್ಲಿ 12 ಸದಸ್ಯರಿದ್ದಾರೆ.
ಕಳೆದ ವರ್ಷದಂತೆ ಈ ವರ್ಷವೂ ಕ್ರೀಡಾ ಸಚಿವಾಲಯವು ಒಂದೇ ಸಮಿತಿಯನ್ನು ರಚಿಸಿದೆ. ಕ್ರೀಡಾಪಟುಗಳನ್ನು ಮತ್ತು ತರಬೇತುದಾರರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಇದ್ರ ನೇತೃತ್ವವನ್ನು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶ ಮುಕುಂದಕಂ ಶರ್ಮಾ ಅವರು ವಹಿಸಲಿದ್ದಾರೆ.
ಕಳೆದ ವರ್ಷದಂತೆ ಒಂದೇ ಸಮಿತಿಯನ್ನು ರಚಿಸಿದ್ದೇವೆ. ಒಂದೇ ಸಮಿತಿಯನ್ನು ರಚಿಸಿದಾಗ ಯಾವುದೇ ವಿವಾದಗಳು ಉಂಟಾಗುವುದಿಲ್ಲ. ಹಲವಾರು ಸಮಿತಿಗಳು ಇದ್ದಾಗ ಅನೇಕ ವಿವಾದಗಳಿಗೆ ಕಾರಣವಾಗುತ್ತದೆ. ಅದಕ್ಕಾಗಿ ಒಂದೇ ಸಮಿತಿಯನ್ನು ರಚಿಸಿ ಅರ್ಹರಿಗೆ ಪ್ರಶಸ್ತಿಗಳನ್ನು ನೀಡುವ ಉದ್ದೇಶವನ್ನು ಹೊಂದಿದೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ.
12 ಸದಸ್ಯರ ಸಮಿತಿಯಲ್ಲಿ ಪ್ಯಾರಾ ಒಲಿಂಪಿಯನ್ ದೀಪಾ ಮಲಿಕ್, ಮಾಜಿ ಟೇಬಲ್ ಟೆನಿಸ್ ಆಟಗಾರ್ತಿ ಮೊನಾಲಿಸಾ ಬರುರ್ವಾ ಮೆಹ್ತಾ, ಬಾಕ್ಸರ್ ವೆಂಕಟೇಶ್ ದೇವರಂಜನ್, ಕ್ರೀಡಾ ವಿಶ್ಲೇಷಕ ಮನೀಷ್ ಬಟಾವಿಯಾ ಮತ್ತು ಪತ್ರಕರ್ತ ಅಲೋಕ್ ಸಿನ್ಹಾ ಹಾಗೂ ನೀರೂ ಭಾಟಿಯಾ ಮೊದಲಾದವರು ಇದ್ದಾರೆ. ಇನ್ನು ಸಮಿತಿಯಲ್ಲಿ ಕ್ರೀಡಾ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರದ ನಿರ್ದೇಶಕ ಸಂದೀಪ್ ಪ್ರಧಾನ್, ಕ್ರೀಡಾ ಅಭಿವೃದ್ದಿಯ ಜಂಟಿ ಕಾರ್ಯದರ್ಶಿ ಎಲ್.ಎಸ್. ಸಿಂಗ್ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ನ ಮುಖ್ಯಸ್ಥ ರಾಜೇಶ್ ರಾಜಗೋಪಾಲ್ ಕೂಡ ಇದ್ದಾರೆ.
ಹಾಕಿ ದಂತ ಕಥೆ ಧ್ಯಾನ್ ಚಾಂದ್ ಅವರ ಹುಟ್ಟು ಹಬ್ಬದ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನಾಚರಣೆ ಎಂದು ಕರೆಯಲಾಗುತ್ತದೆ. ಆಗಸ್ಟ್ 29ರಂದು ದೇಶದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳನ್ನು ನೀಡಲಾಗುವುದು. ಕೋವಿಡ್-19ನಿಂದಾಗಿ ಈ ಬಾರಿಯ ಪ್ರಶಸ್ತಿ ಆಯ್ಕೆ ಸ್ವಲ್ಪ ಮಟ್ಟಿಗೆ ವಿಳಂಬವಾದ್ರೂ ಆಗಬಹುದು.