ಅರಸು ಮಾರ್ಗದಲ್ಲಿ ನಡೆಯುತ್ತಿದ್ದೇನೆ ಎಂಬ ಆತ್ಮವಂಚನೆ ಮಾತು ನಿಲ್ಲಿಸಿ : ಸಿದ್ದುಗೆ ಬಿಜೆಪಿ ಟಾಂಗ್
ಬೆಂಗಳೂರು : ಮಾನ್ಯ ಸಿದ್ದರಾಮಯ್ಯನವರೇ, ನಾನು ದೇವರಾಜ ಅರಸು ಮಾರ್ಗದಲ್ಲಿ ನಡೆಯುವವನು ಎಂಬ ಆತ್ಮವಂಚನೆಯ ಮಾತುಗಳನ್ನು ಇನ್ನಾದರೂ ನಿಲ್ಲಿಸಿ ಎಂದು ರಾಜ್ಯ ಬಿಜೆಪಿ ಘಟಕ ಕುಟುಕಿದೆ.
ಕೃಷಿಭೂಮಿ ಖರೀದಿಗೆ ಇದ್ದ ರು.25 ಲಕ್ಷ ಆದಾಯದ ಮಿತಿಯನ್ನು ರದ್ದುಗೊಳಿಸಿ ಕೃಷಿಕರಲ್ಲದವರು ಕೂಡಾ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಲು, ಭೂ ಸುಧಾರಣಾ ಕಾಯ್ದೆ 1961ರ ಸೆಕ್ಷನ್ 80 ಮತ್ತು 79 ಎಬಿಸಿಗಳನ್ನು ರದ್ದು ಮಾಡಿರುವ ಬಿಜೆಪಿ ಸರ್ಕಾರ ರೈತರನ್ನು ಬೀದಿಪಾಲು ಮಾಡಲು ಹೊರಟಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ..
ಮಾನ್ಯ ಸಿದ್ದರಾಮಯ್ಯನವರೇ, ನಾನು ದೇವರಾಜ ಅರಸು ಮಾರ್ಗದಲ್ಲಿ ನಡೆಯುವವನು ಎಂಬ ಆತ್ಮವಂಚನೆಯ ಮಾತುಗಳನ್ನು ಇನ್ನಾದರೂ ನಿಲ್ಲಿಸಿ. ಕೃಷಿ ಭೂಮಿ ಖರೀದಿಗಿದ್ದ ಆದಾಯ ಮಿತಿಯನ್ನು ಮೊದಲು ಸಡಿಲಿಸಿದ ಮಹಾನುಭಾವ ಯಾರು? ಭೂಗಳ್ಳರಿಗೆ ಅನುಕೂಲವಾಗಲಿ ಎಂದು ಆದಾಯ ಮಿತಿ ಸಡಿಲಿಸಿದ್ದೇ?
ದೇವರಾಜ್ ಅರಸು ಜನ್ಮ ಶತಮಾನೋತ್ಸವ ವರ್ಷದಲ್ಲಿ ಕೃಷಿ ಭೂಮಿ ಖರೀದಿಯ ಆದಾಯದ ಮಿತಿಯನ್ನು ಸಡಿಲಗೊಳಿಸಿತ್ತು. ಆದರೆ, ಕೃಷಿ ಭೂಮಿ ಖರೀದಿಯ ಮಿತಿಯನ್ನು 2 ಲಕ್ಷದಿಂದ 25 ಲಕ್ಷಕ್ಕೆ ಏರಿಸುವ ನಿರ್ಧಾರ ತೆಗೆದುಕೊಂಡಿದ್ದು ಸಿದ್ದರಾಮಯ್ಯ ಸರ್ಕಾರ. ಆಗ ಸ್ವಪಕ್ಷೀಯರೇ ಇದನ್ನು ವಿರೋಧಿಸಿದ್ದರೂ #ಬುರುಡೆರಾಮಯ್ಯ ಟವೆಲ್ ಕೊಡವಿಕೊಂಡು ನಡೆದಿದ್ದರು.
ರಾಜ್ಯ ಸರ್ಕಾರ ಭೂ ಸುಧಾರಣಾ ವಿಧೇಯಕವನ್ನು ಸದನದಲ್ಲಿ ಮಂಡಿಸಿದಾಗ ಸಭಾತ್ಯಾಗ ಮಾಡಿ ನಿಮ್ಮ ಸದಸ್ಯರ ಜೊತೆ ಎದ್ದು ಹೋಗಿದ್ದೇಕೆ? ಅಂದು ಮೌನಕ್ಕೆ ಜಾರಿದ ನೀವು ಇಂದು ವಿರೋಧಿಸುತ್ತಿರುವುದು ರಾಜಕೀಯ ಕಾರಣಕ್ಕಾಗಿಯಲ್ಲವೇ?
ಮೈತ್ರಿ ಸರ್ಕಾರದಲ್ಲಿ ಭೂ ಸುಧಾರಣಾ ಕಾಯ್ದೆಯನ್ನು ಗಾಳಿಗೆ ತೂರಲಾಗಿತ್ತು.ಕೈಗಾರಿಕಾ ಉದ್ದೇಶಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಟ್ಟು ಉದ್ಯಮಿಗಳು ನೇರವಾಗಿ ಖರೀದಿಸಲು ಅವಕಾಶ ಮಾಡಿಕೊಡಲಾಗಿತ್ತು.ಆಗ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಿದ್ದು #ಬುರುಡೆರಾಮಯ್ಯ, ಅಂದರೆ ಸಿದ್ದರಾಮಯ್ಯ ಮಾರ್ಗದರ್ಶನದಲ್ಲೇ ಕಾಯ್ದೆ ಮುರಿದಿದ್ದು ನಿಜವಲ್ಲವೇ ಎಂದು ಪ್ರಶ್ನಿಸಿದೆ.









