ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ವಂಚನೆ : ಸಿಬಿಐ ತನಿಖೆಗೆ ಒತ್ತಾಯ
ಬೆಂಗಳೂರು : ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ವಂಚನೆ ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣೆ ವೇದಿಕೆ ವತಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಹಿತ ರಕ್ಷಣ ವೇದಿಕೆಯ ಮುಖ್ಯ ಪೋಷಕರಾದ ಡಾ. ಶಂಕರ ಗುಹಾ ದ್ವಾರಕಾನಾಥ್ ಬೆಳ್ಳೂರು ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಆರ್ ಬಿಐ ಮಧ್ಯ ಪ್ರವೇಶಿಸಿ ವಂಚನೆಗೆ ಒಳಗಾದರಿಗೆ ನ್ಯಾಯ ಕೊಡಿಸಬೇಕು ಹಾಗೇ ಈ ಪ್ರಕರಣವನ್ನು ಸರ್ಕಾರ ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಶಂಕರ ಗುಹಾ ದ್ವಾರಕಾನಾಥ್ ಬೆಳ್ಳೂರು, ಕಳೆದ ಒಂದು ವರ್ಷದಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಇದು ರಾಜ್ಯ ಸರ್ಕಾರ ಗಮನಕ್ಕೆ ಇಲ್ವಾ ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು. ಯಾಕೆಂದರೆ ದುಡ್ಡು ತಿಂದಿರುವ ಕಳ್ಳರು ಮನೆಯಲ್ಲಿ ನೆಮ್ಮದಿಯಿಂದ ಇದ್ದಾರೆ. ಈಗಾಗಲೇ ಹಣ ಕಳೆದುಕೊಂಡು ಮೂವರು ಸಾವನ್ನಪ್ಪಿದ್ದಾರೆ. ಕಳ್ಳರ ಪರವಾಗಿ ದೊಡ್ಡವರು ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬ್ಯಾಂಕ್ ನ ಹಗರಣ ಬೆಳಕಿಗೆ ಬಂದು ಎರಡು ವರ್ಷಗಳಾಗಿವೆ. ಆದ್ರೂ ಹಗರಣದ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಯುತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳಾದ ಶಾಸಕ ರವಿ ಸುಬ್ರಮಣ್ಯ ಹಾಗೂ ಸಂಸದರಾದ ತೇಜಸ್ವಿ ಸೂರ್ಯ ಅವರು ಕೂಡ ಬ್ಯಾಂಕ್ ಹಗರಣದ ಆರೋಪಿಗಳ ಪರವಾಗಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಜನಪ್ರತಿನಿಧಿಗಳು ಈ ಹಗರಣದ ಬಗ್ಗೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ರಾಜ್ಯ ಸರ್ಕಾರ ಸಿಐಡಿ ತನಿಖೆ ನಡೆಸುತ್ತಿದ್ರೂ ಪ್ರಭಾವಿಗಳ ಕೈವಾಡದಿಂದ ತನಿಖೆಯ ಹಾದಿ ತಪ್ಪುತ್ತಿದೆ. ಹೀಗಾಗಿ ಈ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ತಪ್ಪಿತಸ್ಥರಿಗೆ ಕಡ್ಡಾಯವಾಗಿ ಶಿಕ್ಷೆಯಾಗಲೇಬೇಕು. ಎಂಬುದು ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣೆ ವೇದಿಕೆಯ ಆಗ್ರಹವಾಗಿದೆ.
ಠೇವಣಿ ದಾರರಿಗೆ ಸರಿಯಾದ ನ್ಯಾಯ ದೊರಕಿಸುವುದರಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ. ಡಿಐಸಿಜಿಸಿ ಮಸೂದೆಯ ತಿದ್ದುಪಡಿಯಿಂದ ಐದು ಲಕ್ಷ ರೂಪಾಯಿ ಠೇವಣಿದಾರರಿಗೆ ಸಿಗುತ್ತದೆ ಆದರೆ ಐದು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಠೇವಣಿ ಮಾಡಿರುವವರಿಗೆ ಯಾವ ರೀತಿಯಲ್ಲಿ ಪರಿಹಾರ ಸಿಗುವುದೆಂದು ಸರ್ಕಾರದಲ್ಲಿ ಅಧಿಕಾರಿಗಳಾಗಲಿ ಅಥವಾ ಸ್ಥಳೀಯ ಶಾಸಕರು ಹಾಗೂ ಸ್ಥಳೀಯ ಲೋಕಸಭಾ ಸಂಸದರು ಮಾತನಾಡುತ್ತಿಲ್ಲ.
ಡಿಐಸಿಜಿಸಿ ಇನ್ಸೂರೆನ್ಸ್ ಹಣ ಬರುತ್ತಿರುವುದು ದೇಶಾದ್ಯಂತ ಒಟ್ಟಾರೆ 32 ಇಂತಹ ಸಂಸ್ಥೆಗಳಿಗೆ ಮಾತ್ರ. ಕೇವಲ ಗುರುರಾಘವೇಂದ್ರ ಕ್ರೆಡಿಟ್ ಕೋಆಪರೇಟಿವ್ ಬ್ಯಾಂಕಿಗೆ ಸೀಮಿತವಲ್ಲ. ಅವರ ದುಡ್ಡನ್ನು ಅವರಿಗೆ ಕೊಡಿಸುವುದರಲ್ಲಿ ಸರ್ಕಾರ ವಿಫಲವಾಗಿದೆ. ರಾಜಕೀಯ ಪ್ರತಿನಿಧಿಗಳು ತಪ್ಪು ಲೆಕ್ಕಾಚಾರ ಹಾಕುತ್ತಿದ್ದಾರೆ. ಡಿಐಸಿಜಿಸಿ ಹಣ ಬಂದ ಕೂಡಲೇ ಜನ ಮರೆತು ಹೋಗುತ್ತಾರೆ ಎನ್ನುವ ಊಹೆ ಯಲ್ಲಿದ್ದಾರೆ. ಡಿಐಸಿಜಿಸಿ ಹಣ ಬಂದ ನಂತರ ಸುಮಾರು ಜನ ಹೊರ ಬರುತ್ತಾರೆ. ಅಂತಿಮವಾಗಿ ಉಳಿದುಕೊಳ್ಳುವವರು 10 ಸಾವಿರ ಮಂದಿ. ಈ ರೀತಿಯ ಲೆಕ್ಕಚಾರನೂ ನಡೆಯುತ್ತಿದೆ.
ಆದ್ರೆ ಇಂಥ ಭ್ರಮೆಯಿಂದ ಆಚೆ ಬಂದು ನಿಜ ಪರಿಸ್ಥಿತಿಯನ್ನು ಗಮನಕ್ಕೆ ತೆಗೆದುಕೊಂಡು ಜನಪ್ರತಿನಿಧಿಗಳು ಜನರ ಪರವಾಗಿ ನಿಲ್ಲಬೇಕು. ಠೇವಣಿ ದಾರರಿಗೆ ಅಸಲು ಹಾಗೂ ಬಡ್ಡಿ ಸೇರಿಸಿ ತಕ್ಷಣದಲ್ಲೇ ಹಣವನ್ನು ಪಾವತಿಸಬೇಕು. ಒಂದು ವೇಳೆ ನಮ್ಮ ಬೇಡಿಕೆಗಳನ್ನು ತಕ್ಷಣವೇ ಈಡೇರಿಸದಿದ್ದರೆ ನಿರಂತರ ಹೋರಾಟ ಮುಂದುವರಿಸುವುದಾಗಿ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣೆ ವೇದಿಕೆ ಎಚ್ಚರಿಕೆ ನೀಡಿದೆ.
ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ನಿಂದ ಅಖಿಲ ಕರ್ನಾಟಕ ಮಹಾಸಭಾಗೆ ಮೋಸ…!
ಇನ್ನೊಂದೆಡೆ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ , ಗುರುಸಾರ್ವಭೌಮ ಕ್ರಿಕೆಟ್ ಕೋಆಪರೇಟಿವ್ ಸೊಸೈಟಿ ಹಾಗೂ ವಸಿಷ್ಠ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಈ ಮೂರು ಸಂಸ್ಥೆಗಳಿಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಾಜಿ ಅಧ್ಯಕ್ಷರು ಮತ್ತು ಮಹಾಸಭಾದ ಮಾಜಿಗಳು ನೇರ ನೇರ ಸಂಪರ್ಕವಿದೆ. ಶ್ರೀ ಕೆ ಎನ್ ವೆಂಕಟನಾರಾಯಣ ಅವರು ಅಧ್ಯಕ್ಷರಾಗಿದ್ದರೆ ರಾಮಕೃಷ್ಣ ಅವರು ಖಜಾಂಚಿ ಗಳಾಗಿದ್ದರು ಇಲ್ಲಿ ಯಾರು ಗುರು ಯಾರು ಶಿಷ್ಯ ಎಂಬುದು ಗೊತ್ತಾಗಬೇಕು. ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ನಿಂದ ಮಹಾಸಭಾಗೆ ಒಂದು ಕೋಟಿ ರೂಪಾಯಿ ವಂಚನೆಯಾಗಿದೆ.