ನಾಲ್ವರು ರೋಗಿಗಳ ಸಾವು ಪ್ರಕರಣ : ಕಲಬುರಗಿ ಡಿಸಿ ಸುದ್ದಿಗೋಷ್ಠಿ
ಕಲಬುರಗಿ : ಅಫಜಲಪುರ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ನಾಲ್ವರು ರೋಗಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಡಿಸಿ ವಿವಿ ಜ್ಯೋತ್ಸ್ನಾ ಸುದ್ದಿಗೋಷ್ಟಿ ನಡೆಸಿದ್ದು, ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದು ಹೇಳಿದ್ದಾರೆ.
ಆಕ್ಸಿಜನ್ ಕೊರತೆಯಿಂದ ರೋಗಿಗಳು ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ತುರ್ತು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿಗಳು, ಅಫಜಲಪುರ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಲ್ಲ ಎಂದು ಸ್ಪಷ್ಟಪಿಸಿದರು. ಈ ವೇಳೆ ಮಾಧ್ಯಮದವರು, ಆಕ್ಸಿಜನ್ ಕೊರತೆ ಇಲ್ಲದಿದ್ದಲ್ಲಿ ಮಾಧ್ಯಮಗಳಲ್ಲಿ ವರದಿ ಪ್ರಸಾರದ ನಂತರ ತರಾತುರಿಯಲ್ಲಿ ಆಕ್ಸಿಜನ್ ಪೂರೈಕೆ ಯಾಕೆ ಮಾಡಲಾಗಿತ್ತು ಎಂದು ಪ್ರಶ್ನಿಸಿದರು. ಇದಕ್ಕೆ ಗಲಿಬಿಲಿಗೊಂಡ ಜಿಲ್ಲಾಧಿಕಾರಿ ವಿ ವಿ ಜ್ಯೋತ್ಸ್ನಾ, ಸದ್ಯ ಅಫಜಲಪುರ ಆಸ್ಪತ್ರೆಯಲ್ಲಿ 8 ಜನ ಕೊವಿಡ್ ರೋಗಿಗಳಿದ್ದಾರೆ. ಅವರಲ್ಲಿ ನಾಲ್ವರು ರೋಗಿಗಳು ಆಕ್ಸಿಜನ್ ಮೇಲೆ ಇದ್ದಾರೆ. ಈಗಾಗಲೇ ಆಸ್ಪತ್ರೆ ವೈದ್ಯಾಧಿಕಾರಿ, ತಹಶಿಲ್ದಾರ್, ಎಸಿ ರನ್ನ ಸಂಪರ್ಕಿಸಲಾಗಿದೆ. ನಿನ್ನೆಯಿಂದ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದರು.
ಇನ್ನು ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದು ಪುನರುಚ್ಚರಿಸಿದ ಜಿಲ್ಲಾಧಿಕಾರಿಗಳು, ತಪ್ಪು ಮಾಹಿತಿಯಿಂದ ಮಾಧ್ಯಮಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ ಅಂತಾ ಸುದ್ದಿ ಆಗಿದೆ. ಮೃತಪಟ್ಟ ರೋಗಿಗಳು ವಿವಿಧ ಕಾರಣಗಳಿಂದ ಮೃತಪಟ್ಟಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಆಡಳಿತ ಮತ್ತು ತಾಲೂಕಾಸ್ಪತ್ರೆಯಲ್ಲಿ ಯಾವುದೇ ವೈಫಲ್ಯ ಇಲ್ಲ ಎಂದು ಹೇಳಿದರು.
ಆದ್ರೆ ಈ ಘಟನೆ ಸಂಬಂಧ ಸುದ್ದಿಮಾಧ್ಯಮದೊಂದಿಗೆ ಮಾತನಾಡಿದ್ದ ಅಫಜಲಪುರ ವೈದ್ಯಾಧಿಕಾರಿ ಆಕ್ಸಿಜನ್ ಖಾಲಿಯಾಗಿರೋ ಬಗ್ಗೆ ಒಪ್ಪಿಕೊಂಡಿದ್ದರು.










