MS Dhoni : ಧೋನಿ ಕ್ಯಾಪ್ಟನ್ಸಿ ಬಗ್ಗೆ ಹಾರ್ದಿಕ್ ಹೇಳಿದ್ದೇನು..?
ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ನ ಆರಂಭದ ದಿನಗಳಲ್ಲಿ ಟೀಂ ಇಂಡಿಯಾದ ಲೆಜೆಂಡರಿ ನಾಯಕ ಮಹೇಂದ್ರ ಸಿಂಗ್ ಧೋನಿ ನನ್ನ ಬೆಂಬಲಕ್ಕೆ ನಿಂತಿದ್ದರು ಎಂದು ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನೆನಪಿಸಿಕೊಂಡಿದ್ದಾರೆ. ಅಲ್ಲದೇ ಎಷ್ಟೋ ಮಂದಿ ಯುವ ಆಟಗಾರರು ವಿಶ್ವದ ಶ್ರೇಷ್ಠ ಆಟಗಾರರನ್ನಾಗಿ ಧೋನಿ ತಿದ್ದಿದ್ದಾರೆ ಎಂದು ಹಾರ್ದಿಕ್ ತಿಳಿಸಿದ್ದಾರೆ.
ಧೋನಿ ಸಾರಥ್ಯದಲ್ಲಿ 2016ರಲ್ಲಿ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಅಲ್ಲದೇ ತುಂಬಾ ಕಡಿಮೆ ಅವಧಿಯಲ್ಲಿಯೇ ಟೀಂ ಇಂಡಿಯಾದಲ್ಲಿ ಸ್ಟಾರ್ ಆಲ್ ರೌಂಡರ್ ಆಗಿ ಬೆಳೆದರು. ಆದ್ರೆ ಇಂಜೂರಿ ಸಮಸ್ಯೆ ಮತ್ತು ಫಾರ್ಮ್ ಕೊರತೆಯಿಂದಾಗಿ ಟೀಂ ಇಂಡಿಯಾದಿಂದ ಹೊರಗುಳಿದರು.
ಇದಾದ ಬಳಿಕ ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಅಚ್ಚರಿ ಎಂಬಂತೆ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತಂಡದ ನಾಯಕರಾದರು. ಕೇವಲ ಕ್ಯಾಪ್ಟನ್ ಆಗಿದ್ದು ಮಾತ್ರವಲ್ಲದೇ ಗುಜರಾತ್ ತಂಡವನ್ನು ಚೊಚ್ಚಲ ಬಾರಿಯೇ ಚಾಂಪಿಯನ್ ಮಾಡಿದರು. ಜೊತೆಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿದರು. ಈ ಹಿನ್ನೆಲೆಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತೆ ಟೀಂ ಇಂಡಿಯಾಗೆ ವಾಪಸ್ ಆಗಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಕಂ ಬ್ಯಾಕ್ ಬಗ್ಗೆ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ನಾನು ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟಾಗ ಸುರೇಶ್ ರೈನಾ, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ ಯಂತಹ ಸ್ಟಾರ್ ಆಟಗಾರರು ತಂಡದಲ್ಲಿದ್ದರು.
ಮೊದಲ ಪಂದ್ಯದಲ್ಲಿ ನಾನು ಸ್ವಲ್ಪ ಒತ್ತಡಕ್ಕೆ ಗುರಿಯಾಗಿದ್ದೆ. ನಾನು ಮಾಡಿದ ಮೊದಲ ಓವರ್ ನಲ್ಲಿ ಏಕಾಏಕಿ 21 ರನ್ ಗಳನ್ನ ನೀಡಿದ್ದೆ. ಆಗ ನಾನು ಇದೇ ನನ್ನ ಕೊನೆಯ ಓವರ್ ಎಂದುಕೊಂಡಿದ್ದೆ. ಆದ್ರೆ ಮಹಿ ಭಾಯ್ ನನ್ನ ಮೇಲೆ ನಂಬಿಕೆ ಇಟ್ಟು ಮತ್ತೆರಡು ಓವರ್ ಗಳನ್ನು ಹಾಕಲು ಅವಕಾಶ ಮಾಡಿಕೊಟ್ಟರು. ಆ ಪಂದ್ಯದಲ್ಲಿ ನಾನು ಮೂರು ಓವರ್ ಗಳನ್ನು ಎಸೆದು 37 ರನ್ ಎರಡು ವಿಕೆಟ್ ಪಡೆದಿದ್ದೆ ಎಂದು ತಮ್ಮ ಮೊದಲ ಪಂದ್ಯವನ್ನು ಹಾರ್ದಿಕ್ ಪಾಂಡ್ಯ ನೆನಪು ಮಾಡಿಕೊಂಡಿದ್ದಾರೆ.
ಇನ್ನು ಈ ಸೀರಿಸ್ ಮುಗಿದ ಬಳಿಕ ವಿಶ್ವಕಪ್ ನಲ್ಲಿ ನೀನು ಇರ್ತೀಯಾ ಅಂತಾ ಧೋನಿ ಹೇಳಿದ್ದನ್ನ ಕೇಳಿ ನನಗೆ ಅಚ್ಚರಿಯಾಯ್ತು. ಯಾಕೆಂದೆ ನಾನು ಆಗಿನ್ನೂ ಕೇವಲ ಮೂರು ಪಂದ್ಯಗಳನ್ನ ಮಾತ್ರ ಅಂತರಾಷ್ಟ್ರೀಯ ಆಡಿದ್ದೆ. ನಿಜವಾಗಿಯೂ ಧೋನಿ ನಾಯಕತ್ವದಲ್ಲಿ ಆಡಿದ್ದು, ನನ್ನ ಅದೃಷ್ಠ ಎಂದು ಭಾವಿಸುತ್ತೇನೆ ಎಂದು ಹಾರ್ದಿಕ್ ಹೇಳಿಕೊಂಡಿದ್ದಾರೆ.








