ಬೆಂಗಳೂರು: ರಾಜಧಾನಿಯ ಕೋಗಿಲು ಬಡಾವಣೆಯ ಒತ್ತುವರಿ ತೆರವು ಕಾರ್ಯಾಚರಣೆಯು ಇದೀಗ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸ್ಫೋಟಕ ತಿರುವು ನೀಡಿದ್ದಾರೆ. ನಿವಾಸಿಗಳು ತಾವು ಕಳೆದ 20 ವರ್ಷಗಳಿಂದ ಇಲ್ಲೇ ನೆಲೆಸಿದ್ದೇವೆ ಎಂದು ಹೇಳುತ್ತಿರುವ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಅವರು, ಇದೊಂದು ಕಾಂಗ್ರೆಸ್ ಪ್ರಾಯೋಜಿತ ಅಕ್ರಮ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2023ರ ಗೂಗಲ್ ಮ್ಯಾಪ್ ಮತ್ತು ಸ್ಯಾಟಲೈಟ್ ಚಿತ್ರಗಳನ್ನು ಸಾಕ್ಷ್ಯವಾಗಿ ಪ್ರದರ್ಶಿಸಿ, ಕಳೆದ 6 ತಿಂಗಳ ಹಿಂದೆಯಷ್ಟೇ ಇಲ್ಲಿ ಅಕ್ರಮವಾಗಿ ಶೆಡ್ ಮತ್ತು ಮನೆಗಳನ್ನು ನಿರ್ಮಿಸಲಾಗಿದೆ ಎಂದು ದಾಖಲೆ ಸಮೇತ ವಿವರಿಸಿದರು.
2023ರಲ್ಲಿ ಜಾಗ ಖಾಲಿ ಇತ್ತು: ಗೂಗಲ್ ಮ್ಯಾಪ್ ಸಾಕ್ಷ್ಯ
ತಮ್ಮ ವಾದಕ್ಕೆ ಪೂರಕವಾಗಿ 2023ರ ಸ್ಯಾಟಲೈಟ್ ಚಿತ್ರಗಳನ್ನು ಬಿಡುಗಡೆ ಮಾಡಿದ ಆರ್. ಅಶೋಕ್, ಕೋಗಿಲು ಗ್ರಾಮದ ಸರ್ವೆ ನಂಬರ್ 99ರಲ್ಲಿರುವ ಜಾಗ 2023ರಲ್ಲಿ ಸಂಪೂರ್ಣ ಖಾಲಿಯಾಗಿತ್ತು. ಆಗ ಅಲ್ಲಿ ಪಾಚಿ ಕಟ್ಟಿದ ಮತ್ತು ಕೆಸರು ತುಂಬಿದ ಹೊಂಡಗಳು ಮಾತ್ರ ಇದ್ದವು. ಮನುಷ್ಯರ ಸಂಚಾರವೇ ಇಲ್ಲದ ಜಾಗದಲ್ಲಿ ಕಳೆದ ಆರು ತಿಂಗಳಿಂದ ಏಕಾಏಕಿ ಮನೆಗಳು ತಲೆ ಎತ್ತಿವೆ. ಹೀಗಿರುವಾಗ 20 ವರ್ಷಗಳಿಂದ ವಾಸವಿದ್ದೇವೆ ಎನ್ನುವುದು ಹಸಿ ಸುಳ್ಳು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮವಾಗಿ ಆಧಾರ್ ಕಾರ್ಡ್ ಮತ್ತು ಭೂ ಹಗರಣ
ಈ ಪ್ರಕರಣದಲ್ಲಿ ದೊಡ್ಡ ಮಟ್ಟದ ಹಣಕಾಸಿನ ದಂಧೆ ನಡೆದಿದೆ ಎಂದು ಆರೋಪಿಸಿದ ಅಶೋಕ್, ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳದ ಮೂಲಕ ಬರುವ ವಲಸಿಗರಿಗೆ ಕೇವಲ 20 ಸಾವಿರ ರೂ. ನೀಡಿದರೆ ಆಧಾರ್ ಕಾರ್ಡ್ ಮಾಡಿಕೊಡಲಾಗುತ್ತಿದೆ. ಸ್ಥಳೀಯ ಕಾಂಗ್ರೆಸ್ ಮುಖಂಡ ವಾಸಿಂ ಎಂಬುವವರು ಪ್ರತಿಯೊಬ್ಬರಿಂದ ತಲಾ 4 ಲಕ್ಷ ರೂ. ಪಡೆದು ಈ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನೆಲೆಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
100 ಕೋಟಿ ರೂ. ಯೋಜನೆಯ ಜಾಗವಿದು
ಒತ್ತುವರಿಯಾಗಿರುವ ಜಾಗದ ಕುರಿತು ಮಾಹಿತಿ ನೀಡಿದ ಅವರು, ಕೋಗಿಲು ಗ್ರಾಮದ ಸರ್ವೆ ನಂಬರ್ 99ರಲ್ಲಿ ಒಟ್ಟು 14 ಎಕರೆ 38 ಗುಂಟೆ ಸರ್ಕಾರಿ ಜಮೀನಿತ್ತು. ಇದರಲ್ಲಿ 5 ಎಕರೆಯನ್ನು ಬಿಬಿಎಂಪಿಗೆ ನೀಡಲಾಗಿದೆ. ಉಳಿದ 9 ಎಕರೆ 38 ಗುಂಟೆ ಜಾಗದಲ್ಲಿ 100 ಕೋಟಿ ರೂ. ವೆಚ್ಚದ ಸ್ಯಾನಿಟರಿ ಬರ್ನಿಂಗ್ ಪಾಯಿಂಟ್ (ಘನತ್ಯಾಜ್ಯ ವಿಲೇವಾರಿ ಘಟಕ) ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಹಿಂದೆ ಕಲ್ಲು ಕ್ವಾರಿಯಾಗಿದ್ದ ಈ ಜಾಗದಲ್ಲಿ ಹೊಂಡ ಬಿದ್ದಿತ್ತು. ಇದೀಗ ಕಸ ಹಾಕುವ ಜಾಗದಲ್ಲಿ ಕಾಂಗ್ರೆಸ್ ಬೆಂಬಲಿತರು ಮನೆ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.
ಜಮೀರ್ ಅಹ್ಮದ್ ಖಾನ್ ವಿರುದ್ಧ ಕಿಡಿ
ಈ ಅಕ್ರಮದ ಹಿಂದೆ ಪ್ರಭಾವಿ ಸಚಿವರ ಕೈವಾಡವಿದೆ ಎಂದು ದೂರಿದ ಅಶೋಕ್, ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಅವರ ವಿಶೇಷ ಅಧಿಕಾರಿ ಸರ್ಪರಾಜ್ ಖಾನ್ ಅವರು ಅಕ್ರಮ ನಿವಾಸಿಗಳ ಪರವಾಗಿ ನಿಂತಿದ್ದಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡರು ರಾಜ್ಯಾದ್ಯಂತ ಒತ್ತುವರಿ ತೆರವು ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಇಲ್ಲಿ ನೋಡಿದರೆ ಸರ್ಕಾರಿ ಜಮೀನಿನಲ್ಲಿ ಕಾಂಗ್ರೆಸ್ಸಿಗರೇ ಅಕ್ರಮವಾಗಿ ಬಡಾವಣೆ ನಿರ್ಮಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಕೇರಳದ ಸಂಸದರು ಮತ್ತು ಶಾಸಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಮೂಲಕ ಕೋಗಿಲು ಪ್ರಕರಣವನ್ನು ಅಂತಾರಾಷ್ಟ್ರೀಯ ಸುದ್ದಿಯನ್ನಾಗಿ ಮಾಡಲಾಗಿದೆ. ಆದರೆ ವಾಸ್ತವದಲ್ಲಿ ಇದು ಸಂಪೂರ್ಣವಾಗಿ ಸರ್ಕಾರಿ ಜಮೀನಾಗಿದ್ದು, ಇದನ್ನು ಕಬಳಿಸಲು ವ್ಯವಸ್ಥಿತ ಸಂಚು ರೂಪಿಸಲಾಗಿದೆ ಎಂದು ಅಶೋಕ್ ಸ್ಪಷ್ಟಪಡಿಸಿದರು.
ಅಧಿಕಾರಿಗಳ ಪತ್ರ ವ್ಯವಹಾರ
ಈ ಅಕ್ರಮದ ಬಗ್ಗೆ ತಹಸೀಲ್ದಾರ್ ಹಾಗೂ ಬಿಬಿಎಂಪಿ ಅಧಿಕಾರಿಗಳ ನಡುವೆ ಪತ್ರ ವ್ಯವಹಾರಗಳು ನಡೆದಿವೆ. 2023 ಮತ್ತು 2024ರಲ್ಲಿ ಇಲ್ಲಿ ಅನಧಿಕೃತ ಮನೆ ನಿರ್ಮಾಣವಾಗುತ್ತಿರುವ ಬಗ್ಗೆ ಮತ್ತು ಸರ್ಕಾರಿ ನಿವೇಶನ ಒತ್ತುವರಿ ಮಾಡಿ ಸೈಟ್ ಮಾಡುತ್ತಿರುವ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುವಂತೆ ಪತ್ರ ಬರೆದಿದ್ದಾರೆ. ಈ ಎಲ್ಲಾ ದಾಖಲೆಗಳು ಅಕ್ರಮವನ್ನು ಸಾಬೀತುಪಡಿಸುತ್ತವೆ ಎಂದು ಆರ್. ಅಶೋಕ್ ವಿವರಿಸಿದರು.








