ಕೋಲ್ಕತ್ತಾ: ಮಸೀದಿಗೆ ತೆರಳುತ್ತಿದ್ದ ರಾಜಕೀಯ ನಾಯಕನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ನಡೆದಿದೆ.
ತೃಣಮೂಲ ಕಾಂಗ್ರೆಸ್ (TMC) ನಾಯಕನನ್ನು ಕೆಲವು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ (West Bengal) ನಡೆದಿದೆ. ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಬಮಂಗಾಚಿ ಪಂಚಾಯತ್ ಸದಸ್ಯ ಹಾಗೂ ಟಿಎಂಸಿ ಪ್ರದೇಶದ ಅಧ್ಯಕ್ಷ ಸೈಫುದ್ದೀನ್ ಲಷ್ಕರ್ (43) ಹತ್ಯೆಯಾದ ನಾಯಕ ಎನ್ನಲಾಗದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗಿದೆ. ಸಿಪಿಎಂ ಗೂಂಡಾಗಳು ಬಿಜೆಪಿಯೊಂದಿಗೆ ಕೈಜೋಡಿಸಿ ಸೈಫುದ್ದೀನ್ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ.
ಬೆಳಗಿನ ಜಾವ ಮಸೀದಿಗೆ ತೆರಳುತ್ತಿದ್ದ ಬಮಂಗಚಿ ಪಂಚಾಯತ್ ಅಧ್ಯಕ್ಷೆ ಪತಿ ಸೈಫುದ್ದೀನ್ ಮೇಲೆ ಐವರ ತಂಡ ದಾಳಿ ನಡೆಸಿದೆ. ಭುಜಕ್ಕೆ ಗುಂಡು ಬಡಿದ ನಂತರ ಸೈಫುದ್ದೀನ್ ರಸ್ತೆಯಲ್ಲಿ ಕುಸಿದುಬಿದ್ದರು. ಗುಂಡಿನ ಸದ್ದು ಕೇಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿದಾಗ ಸೈಫುದ್ದೀನ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಸೈಫುದ್ದೀನ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.