ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಮಳೆಯ (Rain) ಪ್ರಮಾಣ ತಗ್ಗಿದ್ದು, ಹವಾಮಾನ ಸುಧಾರಣೆ ಕಂಡಿದೆ ಹೀಗಾಗಿ ಬಾಲ್ಟಾಲ್ ಬೇಸ್ನಿಂದ ಮತ್ತೆ ಅಮರನಾಥ ಯಾತ್ರೆ (Amarnath Yatra) ಆರಂಭವಾಗಿದೆ. ಅಲ್ಲದೇ, ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಹೆಲಿಕಾಪ್ಟರ್ ಸೇವೆ ಆರಂಭಿಸಲಾಗಿದೆ.
ಪಹಲ್ಗಾಮ್ ಬೇಸ್ನಿಂದ ಯಾತ್ರೆಯನ್ನು ಭಾನುವಾರದಿಂದ ಆರಂಭಿಸಲಾಗಿದೆ. ಹವಾಮಾನ ಪರಿಸ್ಥಿತಿ ಸೂಕ್ತವಾಗಿದ್ದ ಹಿನ್ನೆಲೆಯಲ್ಲಿ 6491 ಜನ ಯಾತ್ರಾರ್ಥಿಗಳು ಪವಿತ್ರ ಗುಹೆಯ ದರ್ಶನ ಪಡೆದರು. ಈಗ ಬಾಲ್ಟಾಲ್ ಭಾಗದಲ್ಲೂ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
116 ಸಾಧುಗಳು, 6 ಸಾಧ್ವಿಗಳು ಸೇರಿದಂತೆ ಇಲ್ಲಿಯವರೆಗೂ 93,929 ಯಾತ್ರಾರ್ಥಿಗಳು ಪವಿತ್ರ ಗುಹೆಯ ದರ್ಶನ ಪಡೆದಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹಿರಿಯ ಅಧಿಕಾರಿಗಳು ಮತ್ತು ಅಮರನಾಥ ಯಾತ್ರಾ ಆಡಳಿತ ಮಂಡಳಿಯ ಜೊತೆಗೆ ಸಭೆ ನಡೆಸಿದ್ದು, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮತ್ತು ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ಕುರಿತು ಚರ್ಚಿಸಿದ್ದಾರೆ.