ನವದೆಹಲಿ: ಅನುದಾನದ ವಿಷಯ ಮುಂದಿಟ್ಟುಕೊಂಡು ಕಾಂಗ್ರೆಸ್ ದೇಶ ವಿಭಜಿಸುವ ಯತ್ನ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ ನ ಬಜೆಟ್ ಅಧಿವೇಶನದ ರಾಜ್ಯಸಭೆ ಕಲಾಪದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಪಕ್ಷವು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ತೆರಿಗೆ ಹಂಚಿಕೆ ಹಾಗೂ ಅನುದಾನದ ವಿಷಯವಾಗಿ ನನ್ನ ತೆರಿಗೆ ನನ್ನ ಹಣ ಎನ್ನುತ್ತಿದ್ದಾರೆ ಇದು ಯಾವ ಭಾಷೆ? ಎಂದು ಪ್ರಶ್ನಿಸಿದ್ದಾರೆ.
ದೇಶದ ಶತ್ರುಗಳಿಗೆ ಕಾಂಗ್ರೆಸ್ ಭೂಮಿಯನ್ನು ಬಿಟ್ಟು ಕೊಟ್ಟಿದೆ. ಈಗ ಆಂತರಿಕ ಭದ್ರತೆ ಕುರಿತು ನಮಗೆ ಉಪದೇಶ ಮಾಡುತ್ತಿದೆ. ದೇಶ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಗೆ ಅರಿವಿತ್ತು. ಆದರೆ ಅದನ್ನು ಬಗೆಹರಿಸುವುದಕ್ಕೆ ಏನನ್ನೂ ಮಾಡಲಿಲ್ಲ ಎಂದು ಮೋದಿ ಆರೋಪಿಸಿದ್ದಾರೆ.
ಚಿಂತನೆಗಳು ಅಪ್ರಸ್ತುತವಾದಂತೆ ಅವರು ತಮ್ಮ ಕೆಲಸವನ್ನು ಹೊರಗುತ್ತಿಗೆ ನೀಡಿದ್ದಾರೆ. ಕಾಂಗ್ರೆಸ್ ಇಂದು ಕುಸಿದಿದೆ. ಕಾಂಗ್ರೆಸ್ ಬಗ್ಗೆ ಸಹಾನುಭೂತಿ ಇದೆ, ರೋಗಿಯೇ ಸುಧಾರಣೆ ಬಯಸದಿದ್ದಾಗ ವೈದ್ಯರೇನು ಮಾಡಬೇಕು ಎಂದು ಲೇವಡಿ ಮಾಡಿದ್ದಾರೆ.