ಮಾಸ್ಕೋ: ರಷ್ಯಾ ಸೇನೆಯಲ್ಲಿ ಸಿಲುಕಿದ್ದ ಭಾರತೀಯ ಯುವಕ ದುರಂತ ಸಾವು ಕಂಡಿದ್ದಾನೆ.
ವಂಚನೆಯ ಜಾಲಕ್ಕೆ ಸಿಕ್ಕಿ ರಷ್ಯಾದ ವ್ಯಾಗ್ನರ್ ಪಡೆಯಲ್ಲಿ ಭಾರತದ ಹೈದರಾಬಾದ್ ನ ಯುವಕ ಸೇರಿದ್ದ. ಸದ್ಯ ಈತ ಉಕ್ರೇನ್ನಲ್ಲಿ ದುರಂತ ಸಾವಿಗೀಡಾಗಿದ್ದಾನೆ ಎಂದು ರಷ್ಯಾದಲ್ಲಿನ ಭಾರತೀಯ ರಾಯಭಾರ ಕಚೇರಿ ಹೇಳಿದೆ. ಆದರೆ, ಆತನ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಯುವಕನನ್ನು ಮೊಹಮ್ಮದ್ ಅಸ್ಫಾನ್ ಎಂದು ಗುರುತಿಸಲಾಗಿದೆ.
ಯುವಕನ ಕುಟುಂಬಸ್ಥರು ಪಾರ್ಥೀವ ಶರೀರವನ್ನು ರಷ್ಯಾದಿಂದ ತರಿಸಿಕೊಡುವಂತೆ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರಿಗೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪಾರ್ಥೀವ ಶರೀರವನ್ನು ಭಾರತಕ್ಕೆ ಕಳುಹಿಸಿಕೊಡಲು ಅಧಿಕಾರಿಗಳು ತಯಾರಿ ನಡೆಸುತ್ತಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.
ಕುಟುಂಬದೊಂದಿಗೆ ಸಂಪರ್ಕ ಸಾಧಿಸುತ್ತಿರುವ ರಷ್ಯಾದ ಅಧಿಕಾರಿಗಳು, ಭಾರತೀಯ ಪ್ರಜೆ ಮೊಹಮ್ಮದ್ ಅಸ್ಫಾನ್ ಅವರ ದುರಂತ ಸಾವಿನ ಕುರಿತು ತಿಳಿದುಕೊಂಡಿದ್ದೇವೆ. ಅಸ್ಫಾನ್ ಅವರನ್ನು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಸೇನೆಯ ಸಹಾಯಕರನ್ನಾಗಿ ನೇಮಿಸಿಕೊಳ್ಳಲಾಗಿತ್ತು ಎಂದು ರಷ್ಯಾ ಅಧಿಕಾರಿ ತಿಳಿಸಿದ್ದಾರೆ.
ಉದ್ಯೋಗ ವಂಚನೆಯ ಜಾಲಕ್ಕೆ ಸಿಲುಕಿದ್ದ ಭಾರತೀಯ ಮೂಲದ ಯುವಕ, ರಷ್ಯಾದ ವ್ಯಾಗ್ನರ್ ಪಡೆಯಲ್ಲಿ ಸಿಲುಕಿದ್ದರು. ತೆಲಂಗಾಣ, ಗುಜರಾತ್, ಕರ್ನಾಟಕ (ಕಲಬುರಗಿ ಜಿಲ್ಲೆಯ ಮೂವರು), ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳ 20ಕ್ಕೂ ಅಧಿಕ ಯುವಕರು ಸೇನೆಯಲ್ಲಿ ಸಿಲುಕಿದ್ದಾರೆ. ಅವರನ್ನು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ವೀಡಿಯೋವೊಂದರಲ್ಲಿ ಹೇಳಿಕೊಂಡಿದ್ದರು.