ಅಸ್ಸಾಂ – ಮಿಜೋರಾಂ ಹಿಂಸಾಚಾರ : ಗಡಿ ಮರುವಿಂಗಡಣೆಯೇ ಪರಿಹಾರ-ಬಿಜೆಪಿ
ಅಸ್ಸಾಂ : ಅಸ್ಸಾಂ ಮತ್ತು ಮಿಜೋರಾಂ ಗಡಿಯಲ್ಲಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಗಲಭೆಯಲ್ಲಿ 5 ಪೊಲೀಸರು, ಓರ್ವ ನಾಗರೀಕ ಮೃತಪಟ್ಟಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.. ಈ ನಡುವೆ ಪೊಲೀಸರು, ನಾಗರೀಕರ ಸಾವಿಗೆ ಸಂತಾಪ ಸೂಚಿಸಿರುವ ಅಸ್ಸಾಂ ಸಿಎಂ ರಾಜ್ಯದಾದ್ಯಂತ 3 ದಿನಗಳ ಶೋಕಾಚರಣೆ ಘೋಷಣೆ ಮಾಡಿದ್ದಾರೆ. ಈ ನಡುವೆ ಅಸ್ಸಾಂ ಜತೆ ಗಡಿ ಹಂಚಿಕೊಂಡಿರುವ ರಾಜ್ಯಗಳ ಗಡಿಗಳನ್ನು ಮರುವಿಂಗಡಣೆ ಮಾಡುವುದೇ ಪರಿಹಾರ ಎಂದು ಬಿಜೆಪಿ ಮುಖಂಡ , ಮಿಜೋರಾಂನ ಬಿಜೆಪಿ ಉಸ್ತುವಾರಿಯೂ ಆಗಿರುವ ಎಂ.ಕಿಕೋನ್ ಹೇಳಿದ್ದಾರೆ.
ಅಲ್ಲದೇ ಅಸ್ಸಾಂ ರಾಜ್ಯವು ತನ್ನೊಂದಿಗೆ ಗಡಿ ಹಂಚಿಕೊಂಡಿರುವ ಮಿಜೋರಾಂ, ಮೇಘಾಲಯ ಮತ್ತು ನಾಗಾಲ್ಯಾಂಡ್ಗಳ ಜತೆ ಗಡಿ ತಕರಾರು ಹೊಂದಿದೆ. ಈ ಎಲ್ಲಾ ರಾಜ್ಯಗಳು ತಮ್ಮ ಗಡಿಯನ್ನು ಒತ್ತುವರಿ ಮಾಡಿವೆ ಎಂದು ಅಸ್ಸಾಂ ಆರೋಪಿಸಿದೆ. ಈ ಸಂಬಂಧ ಈ ಮೂರೂ ರಾಜ್ಯಗಳ ಜತೆಗೆ ಅಸ್ಸಾಂ ಸಂಘರ್ಷ ನಡೆಸಿದೆ. ಇದೇ ಮೇನಲ್ಲಿ ಅಸ್ಸಾಂ-ನಾಗಾಲ್ಯಾಂಡ್ ಗಡಿಯಲ್ಲಿ ಸಂಘರ್ಷ ನಡೆದಿತ್ತು. ಈ ಸಂಘರ್ಷದಲ್ಲಿ ಎರಡೂ ಕಡೆಯ ಹಲವು ಪೊಲೀಸರು ಗಾಯಗೊಂಡಿದ್ದರು. ಮೇಘಾಲಯದ ಜತೆ ಸೋಮವಾರ ಬೆಳಿಗ್ಗೆ ಅಸ್ಸಾಂ ಪೊಲೀಸರು ಘರ್ಷಣೆ ನಡೆಸಿದ್ದಾರೆ. ಈ ಎಲ್ಲಾ ಸಂಘರ್ಷಗಳನ್ನು ಕೊನೆಹಾಡಲು, ಗಡಿ ಮರುವಿಂಗಡಣೆಯೇ ಉಳಿದಿರುವ ಏಕೈಕ ಮಾರ್ಗ ಎಂದು ಕಿಕೋನ್ ಪ್ರತಿಪಾದಿಸಿದ್ದಾರೆ.
ಗಡಿ ಸಮಸ್ಯೆ ಕುರಿತು ಈ ಎಲ್ಲಾ ರಾಜ್ಯಗಳ ಪ್ರತಿನಿಧಿಗಳ ಜತೆಗೆ ಶನಿವಾರವಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶಾಂತಿ ಮಾತುಕತೆ ನಡೆಸಿದ್ದರು. ಮಾತುಕತೆ ನಡೆದ ಎರಡು ದಿನಗಳ ನಂತರ ಅಸ್ಸಾಂ ಪೊಲೀಸರು ಮತ್ತು ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮಿಜೋರಾಂ ಮತ್ತು ಮೇಘಾಲಯ ಗಡಿಗಳಲ್ಲಿ ಒತ್ತುವರಿ ಆಗಿದೆ ಎನ್ನಲಾದ ಪ್ರದೇಶಗಳನ್ನು ಮರಳಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹೋಗಿದ್ದರು. ಈ ವೇಳೆ ಮಿಜೋರಾಂ ಪೊಲೀಸರೊಂದಿಗೆ ನಡೆದ ಸಂಘರ್ಷದಲ್ಲಿ ಅಸ್ಸಾಂ ಪೊಲೀಸ್ನ ಆರು ಸಿಬ್ಬಂದಿ ಮೃತಪಟ್ಟಿದ್ದಾರೆ.
ಮುಗಿದ ರಾಮುಲು ವನವಾಸ.. ಕಾರಜೋಳಗೆ ಜಾಕ್ ಪಾಟ್.. ಸಾಮ್ರಾಟರಿಗೆ ಪಟ್ಟ..
ಮಿಜೋರಾಂ ಜತೆ ಗಡಿ ಹಂಚಿಕೊಂಡಿರುವ ಅಸ್ಸಾಂನ ಗಡಿ ಜಿಲ್ಲೆಗಳ ಜನರು ಮಿಜೋರಾಂಗೆ ಆರ್ಥಿಕ ದಿಗ್ಬಂಧನದ ಬೆದರಿಕೆ ಒಡ್ಡಿವೆ. ಹಲವು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಈಗಾಗಲೇ ಆರ್ಥಿಕ ದಿಗ್ಬಂಧನ ಘೋಷಿಸಿವೆ. ಎರಡೂ ರಾಜ್ಯಗಳ ನಡುವೆ ಸಾರ್ವಜನಿಕ ಸಾರಿಗೆ ಬಸ್ಗಳು, ಖಾಸಗಿ ವಾಹನಗಳು ಮತ್ತು ಸರಕು ಸಾಗಣೆ ವಾಹನಗಳ ಸಂಚಾರವನ್ನು ಅಸ್ಸಾಂ ಗಡಿ ಜಿಲ್ಲೆಗಳ ಜನರು ತಡೆದು ನಿಲ್ಲಿಸಿದ್ದಾರೆ. ಹೀಗಾಗಿ ಎರಡೂ ರಾಜ್ಯಗಳ ನಡುವೆ ರಸ್ತೆ ಸಂಪರ್ಕ ಸ್ಥಗಿತವಾಗಿದೆ. ಪೆಟ್ರೋಲ್-ಡೀಸೆಲ್, ಅಡುಗೆ ಅನಿಲ, ಆಹಾರ ಸಾಮಗ್ರಿ ಮತ್ತಿತರ ಅತ್ಯವಶ್ಯಕ ವಸ್ತುಗಳಿಗಾಗಿ ಮಿಜೋರಾಂ ಅಸ್ಸಾಂ ರಾಜ್ಯವನ್ನು ಅವಲಂಬಿಸಿದೆ. ಸಂಚಾರ ಸ್ಥಗಿತವಾದರೆ ಮಿಜೋರಾಂನಲ್ಲಿ ಈ ವಸ್ತುಗಳ ಕೊರತೆ ಉಂಟಾಗಲಿದೆ. ಮಿಜೋರಾಂ ಮೇಲೆ ಒತ್ತಡ ಹೇರುವ ತಂತ್ರವಾಗಿ ಅಸ್ಸಾಂ ಪ್ರಾದೇಶಿಕ ಪಕ್ಷಗಳು ಆರ್ಥಿಕ ದಿಗ್ಬಂಧನ ಹೇರಿವೆ.
ಜಮ್ಮು ಕಾಶ್ಮೀರದಲ್ಲಿ ಮೇಘಸ್ಫೋಟ – 5 ಮಂದಿ ಸಾವು, 40 ಮಂದಿ ನಾಪತ್ತೆ
ಇನ್ನೂ ಅಸ್ಸಾಂ ಸರ್ಕಾರ 3 ದಿನಗಳ ಶೋಕಾಚರಣೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ, ಈ ಅವಧಿಯಲ್ಲಿ ಸಾರ್ವಜನಿಕ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ನಿಯಮಿತವಾಗಿ ಹಾರಿಸಲಾಗುವ ಸರ್ಕಾರದ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗುವುದು ಎಂದು ತಿಳಿಸಲಾಗಿದೆ. ಅಸ್ಸಾಂ ಮತ್ತು ಮಿಜೋರಾಂ ನಡುವಣ ಗಡಿ ಸಂಘರ್ಷದ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಅಸ್ಸಾಂನ ಆರು ಮಂದಿ ಪೊಲೀಸರು ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 60ಕ್ಕಿಂತಲೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಗೃಹ ಸಚಿವ ಅಮಿತ್ ಶಾ ಅವರು ಅಸ್ಸಾಂ , ಮಿಜೋರಾಮ್ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದು, ಶಾಂತಿ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ಹಿಂಸಾಚಾರದಲ್ಲಿ ಮೃತಪಟ್ಟ ಐವರು ಪೊಲೀಸರಿಗೆ ಅಸ್ಸಾಂನ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಅವರು ಗೌರವ ಸಲ್ಲಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರವ ಅವರು, ಹಿಂಸಾಚಾರದಲ್ಲಿ ಪೊಲೀಸರು ಜೀವ ಕಳೆದುಕೊಂಡಿರುವುದು ಬಹಳಷ್ಟು ನೋವು ತಂದಿದೆ. ಸಿಲ್ಚಾರ್’ಗೆ ಭೇಟಿ ನೀಡಿ ಹುತಾತ್ಮರಾದ ಐವರು ಪೊಲೀಸರಿಗೆ ಗೌರವ ಸಲ್ಲಿಸಿದೆ ಎಂದು ತಿಳಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಾರಾಂತ್ಯದಲ್ಲಿ ಈ ಪ್ರದೇಶಕ್ಕೆ ಎರಡು ದಿನಗಳ ಭೇಟಿ ನೀಡಿ ಮೇಘಾಲಯದಿಂದ ಹಿಂದಿರುಗಿದ ನಂತರ ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದರು. ಇದಾದ ನಂತರ ಉಭಯ ರಾಜ್ಯಗಳ ನಡುವೆ ಘರ್ಷಣೆ ನಡೆದಿತು.
ಗುಡ್ ನ್ಯೂಸ್ : ಕೋವಿಶೀಲ್ಡ್ ಲಸಿಕೆಯಿಂದ ಶೇ.93ರಷ್ಟು ರಕ್ಷಣೆ..!
ಅಸ್ಸಾಂ ಮತ್ತು ಮೇಘಾಲಯದ ನಡುವಿನ ಗಡಿ ವಿವಾದ ಹಲವು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಎರಡು ದಿನಗಳ ಹಿಂದೆ ಶಿಲ್ಲಾಂಗ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ನಡುವಿನ ಸಭೆಯಲ್ಲಿಯೂ ಈ ವಿಷಯದ ಚರ್ಚೆ ನಡೆದಿತ್ತು. ಅಷ್ಟಾದರೂ, ಸೋಮವಾರ ಘರ್ಷಣೆ ನಡೆದಿದೆ.