ಬಾಂಬೈ ಟೀಂ ಆಟ ಶುರು : ರಾಜೀನಾಮೆಗೆ ಮುಂದಾದ್ರಾ ವಲಸಿಗರು..?
ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ. ಜುಲೈ 26ಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆ ಮಹತ್ವದ ಬೆಳವಣಿಗೆ ಒಂದು ನಡೆದಿದ್ದು, ಕೇವಲ ಬಿ.ಎಸ್.ಯಡಿಯೂರಪ್ಪ ಅವರನ್ನು ನಂಬಿ ಪಕ್ಷಕ್ಕೆ ಬಂದಿದ್ದ ವಲಸಿಗರು ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸಚಿವರಾದ ಕೆ.ಸುಧಾಕರ್, ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್, ಬಿ.ಸಿ.ಪಾಟೀಲ್ ಸೇರಿದಂತೆ ಬಾಂಬೈ ತಂಡದ ಎಲ್ಲರು ಒಂದೇ ರೀತಿಯ ಪತ್ರಗಳನ್ನು ಹಿಡಿದು ಸಿಎಂ ಕಚೇರಿಯತ್ತ ಹೊರಟಿದ್ದಾರೆ. ಅವು ರಾಜೀನಾಮೆ ಪತ್ರಗಳೆಂದು ಹೇಳಲಾಗುತ್ತಿದೆ.
ಮೈತ್ರಿ ಸರ್ಕಾರಕ್ಕೆ ಪತನಕ್ಕೆ ಕಾರಣವಾಗಿದ್ದ ಈ 17 ಮಂದಿ ಕೇವಲ ಬಿ.ಎಸ್.ಯಡಿಯೂರಪ್ಪ ಅವರನ್ನು ನಂಬಿ ಬಿಜೆಪಿಗೆ ಬಂದಿದ್ದರು. ಅನೇಕ ಬಾರಿ ಈ ನಾಯಕರು ಇದನ್ನೇ ಒತ್ತಿ ಹೇಳದ್ದಾರೆ. ಇದೀಗ ಸಿಎಂ ಬದಲಾವಣೆ ಖಚಿತವಾಗಿದ್ದು, ಒಂದು ವೇಳೆ ಸಿಎಂ ಬದಲಾದರೇ ನಮ್ಮ ಗತಿ ಏನು ಎಂಬ ಆತಂಕ ವಲಸೆ ನಾಯಕರಲ್ಲಿ ಕಾಡುತ್ತಿದೆ.
ಇದೇ ಕಾರಣಕ್ಕೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು, ಆ ಮೂಲಕ ಎಲ್ಲವನ್ನೂ ಯಡಿಯೂರಪ್ಪನವರ ನಿರ್ಧಾರಕ್ಕೆ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.