ಬಳ್ಳಾರಿ : ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದ 81 ಆರೋಪಿಗಳನ್ನು ಬೆಂಗಳೂರಿನಿಂದ ಬಳ್ಳಾರಿ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ಮೂರು ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಎರಡು ಭದ್ರತಾ ವಾಹನದ ಸರ್ಪಗಾವಲಿನ ಜೊತೆ ಆರೋಪಿಗಳನ್ನ ಇಂದು ಬೆಳ್ಳಂಬೆಳಗ್ಗೆ ಕರೆತರಲಾಯಿತು.
ನಿನ್ನೆ ಪ್ರಕರಣದ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಸಿಸಿಬಿ ಪೊಲೀಸರು ಹಾಜರು ಪಡಿಸಿದ್ದರು. ಈ ವೇಳೆ ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 81 ಆರೋಪಿಗಳನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ. 81 ಆರೋಪಿಗಳ ಕೊರೊನಾ ವರದಿ ನೆಗೆಟಿವ್ ಬಂದಿದೆ. ಇಂದು ಮತ್ತೊಂದು ಸುತ್ತಿನ ಆರೋಗ್ಯ ತಪಾಸಣೆ ನಡೆಸುವ ಸಾಧ್ಯತೆ ಇದೆ.
ಸದ್ಯ ಆರೋಪಿಗಳನ್ನು ಬ್ಯಾರಕ್ ನಂಬರ್ 9 ರಲ್ಲಿ ಹಾಕಲಾಗಿದ್ದು. ಒಟ್ಟು ಇಪ್ಪತ್ತು ಕೋಣೆಗಳನ್ನು ಮೀಸಲಿಡಲಾಗಿದೆ. ಪ್ರತಿ ಕೋಣೆಯಲ್ಲಿ ತಲಾ ನಾಲ್ವರು ಆರೋಪಿಗಳನ್ನು ಇಟ್ಟಿದ್ದಾರೆ. ಜೊತೆಗೆ ಕಾರಾಗೃಹದ ಸುತ್ತ ಹೆಚ್ಚಿನ ಭದ್ರತೆ ಸಹ ಮಾಡಲಾಗಿದೆ.