ದೇಶಾದ್ಯಂತ ಟೊಮೊಟೊ ಬೆಲೆ ಗಗನಕ್ಕೆ ಏರಿಕೆ ಕಂಡಿದೆ. ಸೇಬಿಗಿಂತ ಬೆಲೆ ಹೆಚ್ಚಾಗುತ್ತಿದ್ದಂತೆ ಕಳ್ಳರ ಕಾಟ ಕೂಡ ಜೋರಾಗುತ್ತಿದೆ. ಹೀಗಾಗಿ ಟೊಮೆಟೋವನ್ನು ಚಿನ್ನವನ್ನು ಕಾಪಾಡಿದಂತೆ ಕಾಪಾಡುತ್ತಿದ್ದಾರೆ. ಹೀಗಾಗಿ ಮಾರಾಟಗಾರರೊಬ್ಬರು ಬೌನ್ಸರ್ ಗಳನ್ನು ನೇಮಕ ಮಾಡಿದ್ದಾರೆ.
ವಾರಣಾಸಿಯ ಲಂಕಾ ಪ್ರದೇಶದ ತರಕಾರಿ ಮಾರಾಟಗಾರರೊಬ್ಬರು ಇಬ್ಬರು ಬೌನ್ಸರ್ ಗಳನ್ನು ನಿಯೋಜಿಸಿದ್ದಾರೆ.
ಸಮಾಜವಾದಿ ಪಕ್ಷದ ಕಾರ್ಯಕರ್ತರಾಗಿರುವ ಅಜಯ್ ಫೌಜಿ ಈ ರೀತಿ ಬೌನ್ಸರ್ ನೇಮಿಸಿಕೊಂಡಿದ್ದಾರೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಹುಟ್ಟು ಹಬ್ಬದಂದು ಟೊಮೆಟೊ ಆಕಾರದ ಕೇಕ್ ಕತ್ತರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಪಿಟಿಐ ಸುದ್ದಿಸಂಸ್ಥೆ ಜೊತೆಗೆ ಮಾತನಾಡಿದ ಫೌಜಿ, ಟೊಮೆಟೊ ದರದ ಬಗ್ಗೆ ಜನರಲ್ಲಿ ವಾದಗಳನ್ನು ಕೇಳುತ್ತಲೇ ಇದ್ದೇನೆ. ಅಂಗಡಿಯಲ್ಲಿಯೂ ಜನರು ಚೌಕಾಸಿ ಮಾಡಲು ಪ್ರಯತ್ನಿಸಿದ್ದಾರೆ. ಹೀಗಾಗಿ ವಾದಗಳನ್ನು ಕೊನೆಗೊಳಿಸಲು ಬೌನ್ಸರ್ಗಳನ್ನು ನಿಯೋಜಿಸಲು ನಿರ್ಧರಿಸಿದ್ದಾಗಿ ತಿಳಿಸಿದರು. ಟೊಮೆಟೊವನ್ನು ಕೆಜಿಗೆ 140-160 ರೂ.ಗೆ ಮಾರಾಟ ಮಾಡುತ್ತಿರುವ ಫೌಜಿ, ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ತಮ್ಮ ಅಂಗಡಿಯಲ್ಲಿ ಬೌನ್ಸರ್ಗಳನ್ನು ನಿಯೋಜಿಸಿದ್ದಾರೆ.