ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣಿಗೆ ಶರಣಾದ ಕೇಂದ್ರ ಕಾರಾಗೃದ ವಾರ್ಡನ್
ಶಿವಮೊಗ್ಗ : ಕೇಂದ್ರ ಕಾರಾಗೃಹದ ವಾರ್ಡನ್ ಆಗಿದ್ದ ವ್ಯಕ್ತಿಯೋರ್ವ ಕೌಟಿಂಬಿಕ ಕಲಹ ಹಿನ್ನೆಲೆ ಪತ್ನಿಗೆ ವಿಡಿಯೋ ಕರೆ ಮಾಡಿ ನೇಣಿಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಕೇಂದ್ರ ಕಾರಾಗೃಹದ ವಸತಿ ಗೃಹದಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಅಸ್ಪಾಕ್ ತಗಡಿ (24) ಎಂದು ಗುರುತಿಸಲಾಗಿದೆ. ಅಸ್ಪಾಕ್ ತಗಡಿ ಮೂಲತಃ ಬೆಳಗಾವಿ ಜಿಲ್ಲೆ ಹುಕ್ಕೇರಿ ಮೂಲದ ನಿವಾಸಿ. ಇವರು ಕಳೆದ ಎರಡೂವರೆ ವರ್ಷದಿಂದ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ವಾರ್ಡನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ವಿವಾಹವಾಗಿದ್ದ ಅಸ್ಪಾಕ್ ತಗಡಿಗೆ ಒಂದೂವರೆ ತಿಂಗಳ ಮಗುವಿದ್ದು, ಪತ್ನಿ ಬಾಣಂತನಕ್ಕೆ ತವರು ಮನೆಗೆ ತೆರಳಿದ್ದರು.
ವಿವಾಹವಾದ ಎರಡು ಮೂರು ತಿಂಗಳ ನಂತರದಿಂದಲೇ ಸಣ್ಣ ಪುಟ್ಟ ವಿಷಯಕ್ಕೆ ಪತಿ ಪತ್ನಿ ಇಬ್ಬರು ಜಗಳ ಆಡುತ್ತಿದ್ದರು ಎನ್ನಲಾಗಿದೆ. ಬುಧವಾರ ರಾತ್ರಿ ಸಹ ಪತ್ನಿಗೆ ವೀಡಿಯೋ ಕರೆ ಮಾಡಿದ್ದ ಅಸ್ಪಾಕ್ ತಗಡಿ ಈ ವೇಳೆಯೂ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಅಲ್ಲದೇ ಅತ್ತೆ ಮಾವನೊಂದಿಗೂ ಸಹ ಜಗಳವಾಡಿದ್ದಾನೆ ಎನ್ನಲಾಗಿದೆ. ಜಗಳ ಆಡುತ್ತಿರುವಾಗಲೇ ನೇಣು ಹಾಕಿಕೊಳ್ಳುವ ದೃಶ್ಯವನ್ನು ಪತ್ನಿಗೆ ತೋರಿಸಿದ್ದಾನೆ. ಪತಿಯ ಆತ್ಮಹತ್ಯೆ ನಿರ್ಧಾರಕ್ಕೆ ಕಂಗಾಲಾದ ಪತ್ನಿ ನಂತರ ಕಾರಾಗೃಹದ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿದು ಇತರೆ ಸಿಬ್ಬಂದಿ ವಸತಿಗೃಹಕ್ಕೆ ತೆರಳಿ ನೋಡುವಷ್ಟರಲ್ಲಿ ಅಸ್ಪಾಕ್ ತಗಡಿ ಕೊನೆಯುಸಿರು ಎಳೆದಿದ್ದಾನೆ. ಘಟನಾ ಸ್ಥಳಕ್ಕೆ ತುಂಗಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.