ಕಾನೂನು ಮತ್ತು ಟ್ವಿಟರ್ ಸಮರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ
ಹೊಸದಿಲ್ಲಿ, ಅಗಸ್ಟ್ 7: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತೊಮ್ಮೆ ಚೀನಾ ಭಾರತ ಗಡಿ ಸಮಸ್ಯೆಯ ಕುರಿತು ಟ್ವೀಟ್ನಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.
ರಕ್ಷಣಾ ಸಚಿವಾಲಯವು ತನ್ನ ವೆಬ್ಸೈಟ್ನಲ್ಲಿ ಒಂದು ದಾಖಲೆಯನ್ನು ಪ್ರಕಟಿಸಿತ್ತು, ಆದರೆ ಎರಡು ದಿನಗಳ ನಂತರ ರಾಜಕೀಯ ಕೋಲಾಹಲದಿಂದಾಗಿ ಈ ದಾಖಲೆ ಕಾಣೆಯಾಗಿದೆ. ಪ್ರಧಾನಿ ಮೋದಿ ಅವರ ಹೆಸರನ್ನು ಹೇಳುವ ಧೈರ್ಯ ಯಾರಿಗೂ ಇಲ್ಲ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಕಳೆದ ಕೆಲವು ವಾರಗಳಿಂದ ರಾಹುಲ್ ಗಾಂಧಿ ಚೀನಾ ದೇಶದ ಆಕ್ರಮಣ ನೀತಿಯ ವಿರುದ್ಧ ದೇಶದ ಪ್ರಧಾನಿಯ ಮೇಲೆ ವಾಗ್ದಾಳಿ ನಡೆಸುತ್ತಿದ್ದು ಅನೇಕ ಸಂದೇಹಕ್ಕೆ ಕಾರಣವಾಗಿದೆ
ಈತನ್ಮದ್ಯೆ ಕಳೆದ ಆಗಸ್ಟ್ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್ಸಿ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ನಡುವೆ ಬೀಜಿಂಗ್ನಲ್ಲಿ ಸಹಿ ಹಾಕಿದರೆನ್ನಲಾದ ಒಪ್ಪಂದಕ್ಕೆ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ನಲ್ಲಿ ವಕೀಲ ಸುಶಾಂತ್ ಶೇಖರ್ ಜಾ ಮತ್ತು ಪತ್ರಕರ್ತ ಸವಿಯೊ ರೊಡ್ರಿಗಸ್ ಅವರು ಸಲ್ಲಿಸಿದ್ದ ಪಿಐಎಲ್ ಪರಿಶೀಲಿಸಿದ ನ್ಯಾಯಾಲಯ ಮುಖ್ಯ ನ್ಯಾಯಮೂರ್ತಿ ರಾಜಕೀಯ ಪಕ್ಷವು ಬೇರೆ ದೇಶದೊಂದಿಗೆ ಅಂತಹ ಒಪ್ಪಂದಕ್ಕೆ ಸಹಿ ಹಾಕಲು ಹೇಗೆ ಸಾಧ್ಯ? ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಬಗ್ಗೆ ಸೂಕ್ತ ದಾಖಲೆ ನೀಡದಿದ್ದಲ್ಲಿ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ನ್ಯಾಯಾಧೀಶರು ಎಚ್ಚರಿಸಿದರಲ್ಲದೆ ಸಂಬಂಧ ಪಟ್ಟ ಹೈ ಕೋರ್ಟ್ ನಲ್ಲಿ ಸೂಕ್ತ ದಾಖಲೆ ನೀಡಲು ಹೇಳಿದರು.
ಏನಿದು ಒಪ್ಪಂದ ?
ಒಪ್ಪಂದವು ಐಎನ್ಸಿ ಮತ್ತು ಸಿಪಿಸಿ ನಡುವೆ ಉನ್ನತ ಮಟ್ಟದ ಮಾಹಿತಿ ಮತ್ತು ಸಹಕಾರವನ್ನು ವಿನಿಮಯ ಮಾಡಿಕೊಳ್ಳಲು ಸಂಬಂಧಿಸಿದೆ. ಆದರೆ ಅರ್ಜಿಯಲ್ಲಿ ಚೀನಾದೊಂದಿಗೆ ಪ್ರತಿಕೂಲ ಸಂಬಂಧಗಳ ಹೊರತಾಗಿಯೂ, ಕಾಂಗ್ರೆಸ್ ಪ್ರತಿನಿಧಿ ರಾಹುಲ್ ಗಾಂಧಿ ಒಕ್ಕೂಟದ ಭಾಗವಾಗಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು ಎಂದು ಆಪಾದಿಸಲಾಗಿದೆ.
ಈ ಒಪ್ಪಂದವು ರಾಷ್ಟ್ರದ ಭದ್ರತೆಗೆ ಮಾರಕ ಎಂದು ಅರ್ಜಿದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದು ಒಪ್ಪಂದದ ಸಂಗತಿಗಳು ಮತ್ತು ವಿವರಗಳನ್ನು ಪರಿಶೀಲಿಸಬೇಕಾಗಿದೆ ಎಂದು ಅರ್ಜಿಯಲ್ಲಿ ನಮೂದಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಪ್ರಧಾನಿ ಮತ್ತು ಅವರ ಪಕ್ಷದ ವಿರುದ್ಧದ ಆರೋಪಗಳ ಸುರಿಮಳೆ ಸುರಿಸಿದರೆ ಅತ್ತ ನ್ಯಾಯಾಲಯದಲ್ಲಿ ಒಳ ಒಪ್ಪಂದದ ತನಿಖೆ ನಡೆಸಲು ಪಿ ಐ ಲ್ ಸಲ್ಲಿಸಿದ್ದು ಒಟ್ಟಿನಲ್ಲಿ ಎಲ್ಎಸಿ ನಿಲುಗಡೆಗೆ ಸಂಬಂಧಿಸಿದ ರಾಜಕೀಯ ಕೆಸರಾಟ ಸದ್ಯಕ್ಕೆ ಕೊನೆಗೊಳ್ಳುವ ಲಕ್ಷಣಗಳಿಲ್ಲ.