ಅಕ್ಟೋಬರ್ನಲ್ಲಿ 3ನೇ ಅಲೆ ಅಪ್ಪಳಿಸುವ ಸಾಧ್ಯತೆ : ಡಾ.ಮಂಜುನಾಥ್
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಇಳಿಮುಖವಾಗುತ್ತಿದ್ದಂತೆ ಮೂರನೇ ಅಲೆ ಬಗ್ಗೆ ಚರ್ಚೆಗಳು ಶುರುವಾಗಿದೆ.
ಈ ಮಧ್ಯೆ ಅಕ್ಟೋಬರ್ನಲ್ಲಿ 3ನೇ ಅಲೆ ಅಪ್ಪಳಿಸುವ ಸಾಧ್ಯತೆ ಇದ್ದು, ಮಕ್ಕಳಿಗಿಂತ ವ್ಯಾಕ್ಸಿನ್ ಹಾಕಿಸಿಕೊಳ್ಳದವರೇ ಟಾರ್ಗೆಟ್ ಆಗುತ್ತಾರೆ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಡಾ. ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
ಮೂರನೇ ಅಲೆ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಮಂಜುನಾಥ್, ಮೂರನೇ ಅಲೆ ಯಾವ ರೀತಿ ಬರುತ್ತದೆ ಎಂಬುವುದನ್ನು ನಾವು ಈಗಲೇ ನಿಖರವಾಗಿ ಹೇಳುವುದಕ್ಕೆ ಆಗುವುದಿಲ್ಲ.
ಎರಡನೇ ಅಲೆ ಕಡಿಮೆಯಾಗುತ್ತಾ, ಮೂರನೇ ಅಲೆಗೆ ಸೇರಿಕೊಳ್ಳುತ್ತದೆ. ಮೂರನೇ ಅಲೆ ಬಹುಶಃ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಬರುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದ್ದಾರೆ.
ಇನ್ನು ಜನರು ಸಹಕರಿಸದೇ ಇದ್ದರೆ, ಮೂರನೇ ಅಲೆಯನ್ನು ಬೇಗನೇ ಆಹ್ವಾನ ಮಾಡಿಕೊಂಡಂತೆ ಆಗುತ್ತದೆ.
ಜನರಿಗೆ ಉಚಿತವಾಗಿ ಕೊರೊನಾ ಟೆಸ್ಟ್, ಚಿಕಿತ್ಸೆ, ಲಸಿಕೆ ಹೀಗೆ ಸರ್ಕಾರ ಎಲ್ಲ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಹೀಗಾಗಿ ಕೊರೊನಾ ಮೂರನೇ ಅಲೆಯನ್ನು ನಿಯಂತ್ರಿಸಬೇಕಾದರೆ ಸರ್ಕಾರದ ಜೊತೆಗೆ ಸಾರ್ವಜನಿಕರು ಸಹಕರಿಸಬೇಕಾಗುತ್ತದೆ ಎಂದು ಮನವಿ ಮಾಡಿಕೊಂಡರು.