ರಾಜ್ಯದಲ್ಲಿ ಕೈ ಮೀರಿದ ಕೊರೊನಾ : ಸಿಎಂ ಬಿಎಸ್ವೈ ತುರ್ತು ಸಭೆ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಕಂಟ್ರೋಲ್ ತಪ್ಪಿದ್ದು, ನಿನ್ನೆ ಒಂದೇ ದಿನ ರಾಜ್ಯದಲ್ಲಿ 14 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆ ಕೊರೊನಾ ಕಂಟ್ರೋಲ್ ಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ತುರ್ತು ಸಭೆ ನಡೆಸುತ್ತಿದ್ದಾರೆ.
ಬೆಳಗಾವಿ ಪ್ರವಾಸದಿಂದ ವಾಪಸ್ಸಾಗಿರುವ ಸಿಎಂ ಇಂದು ಯಾವುದೇ ಪೂರ್ವನಿಗದಿ ಸಭೆ, ಸಮಾರಂಭಗಳನ್ನು ಒಪ್ಪಿಕೊಳ್ಳದೆ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದರು. ಆದರೆ ಕೊರೊನಾ ಸ್ಫೋಟಗೊಳ್ಳುತ್ತಿರುವ ಕಾರಣ ತಮ್ಮ ನಿವಾಸದಲ್ಲಿ ಕೊರೊನಾ ಸಂಬಂಧ ತುರ್ತು ಸಭೆ ನಡೆಸುತ್ತಿದ್ದಾರೆ.
ಅಂದಹಾಗೆ ರಾಜ್ಯದ 8 ನಗರಗಳಲ್ಲಿ ಕೊರೊನಾ ಕಫ್ರ್ಯೂ ಜಾರಿಗೊಳಿಸಿದ್ದರೂ ಅಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಬೆಂಗಳೂರು ನಗರದಲ್ಲಿ ದಿನವೊಂದಕ್ಕೆ 10 ಸಾವಿರಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಸೋಂಕಿತರ ಸಾವಿನ ಸಂಖ್ಯೆಯೂ ಹಚ್ಚುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಮುಂದೇನು ಮಾಡಬೇಕೆನ್ನುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.
ಸಭೆಯಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ವಲಯವಾರು ಉಸ್ತುವಾರಿಗಳು ಭಾಗಿಯಾಗಿದ್ದಾರೆ.