ದೇವರು ವರ ಕೊಟ್ಟರು ಪೂಜಾರಿ ಕೊಡಲಿಲ್ಲ : ಕೋವಿಡ್ ಪರಿಹಾರದ ಚೆಕ್ ಬೌನ್ಸ್
ಸುರಪುರ : ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ ಕೋವಿಡ್ ಪರಿಹಾರ ಪಡೆದಿದ್ದವರ ಸ್ಥಿತಿ. ಕೋವಿಡ್ ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕಾರ್ಡುದಾರರ ಕುಟುಂಬಗಳಿಗೆ ಸರ್ಕಾರದ ಘೋಷಣೆಯಂತೆ ನೀಡಲಾಗಿದ್ದ 1 ಲಕ್ಷ ಪರಿಹಾರ ಹಣದ ಚೆಕ್ಗಳು ‘ಇತರೆ ಕಾರಣ’ಗಳಿಂದಾಗಿ ಬ್ಯಾಂಕಿನಿಂದ ಅರ್ಜಿದಾರರಿಗೆ ವಾಪಸಾಗುತ್ತಿವೆ. ಚೆಕ್ ನಗದೀಕರಣಕ್ಕಾಗಿ ಹತ್ತಾರು ಬಾರಿ ಬ್ಯಾಂಕುಗಳಿಗೆ ಅಲೆದಾಡಿದರೂ ಪ್ರಯೋಜನವಾಗದೆ ಅವರು ಗೊಂದಲಕ್ಕೆ ಒಳಗಾಗಿದ್ದಾರೆ.
ಸುರಪುರ ತಾಲೂಕಿನ ಜಾಲಿಬೆಂಚಿಯ ಬಸಣ್ಣಗೌಡ ಎನ್ನುವವರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರು ಪರಿಹಾರಕ್ಕಾಗಿ ಅವರ ಪುತ್ರಿ ಅನಿತಾ ಎಲ್ಲ ದಾಖಲೆಗಳ ಅರ್ಜಿ ಸಲ್ಲಿಸಿದ್ದರು. ಅದರಂತೆ, ಅನಿತಾ ಸೇರಿ ಉಳಿದ ಅರ್ಹ ಅರ್ಜಿದಾರರಿಗೆ ಡಿ.17ರಂದು ಸುರಪುರ ಶಾಸಕ ನರಸಿಂಹ ನಾಯಕ್ (ರಾಜೂಗೌಡ) ಸಮ್ಮುಖದಲ್ಲಿ ಚೆಕ್ ವಿತರಿಸಲಾಗಿತ್ತು.
ಅನಿತಾ ಅವರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯ 1 ಲಕ್ಷ ಚೆಕ್ (ಸಂಖ್ಯೆ: 406164, ದಿನಾಂಕ 08-12-2021) ನೀಡಲಾಗಿತ್ತು. ಸರ್ಕಾರದ ಈ ಚೆಕ್ಕನ್ನು ಸುರಪುರದ ಕರ್ನಾಟಕ ಗ್ರಾಮೀಣ ಬ್ಯಾಂಕಿನ (ಪಿಕೆಜಿಬಿ) ತಮ್ಮ ಖಾತೆಗೆ (11051100026688) ಜಮೆ ಮಾಡಿದ್ದ ಅನಿತಾ ನಗದೀಕರಣಕ್ಕೆ ಕಾಯುತ್ತಿದ್ದರು. ಆದರೆ, ಇದು ನಗದೀಕರಣವಾಗುತ್ತಿಲ್ಲ ಎಂದು ಬ್ಯಾಂಕಿನ ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಬ್ಯಾಂಕ್ ಅಧಿಕಾರಿಗಳ ಸೂಚನೆಯಂತೆ ಯಾದಗಿರಿಯ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಗೆ ಸಂಬಂಧಿಯೊಬ್ಬರು ತೆರಳಿ ವಿಚಾರಿಸಿದ್ದಾರಾದರೂ ಬ್ಯಾಂಕ್ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ತಿಂಗಳ ಹಿಂದೆಯೇ ನೀಡಿದ್ದ ಚೆಕ್ ಹಣಕ್ಕಾಗಿ ಹತ್ತಾರು ಬಾರಿ ಬ್ಯಾಂಕುಗಳಿಗೆ ತಿರುಗಾಡಿದರೂ ಸ್ಪಂದನೆ ಸಿಕ್ಕಿಲ್ಲ. ಕೊನೆಗೆ, ಕರ್ನಾಟಕ ಗ್ರಾಮೀಣ ಬ್ಯಾಂಕಿನಿಂದ ಚೆಕ್ ಸಮೇತ ಕಾರಣದ ಮಾಹಿತಿಯುಳ್ಳ ಚೀಟಿ ಬಂದಿದೆ. ‘ಅದರ್ ರೀಜನ್ಸ್’(ಇತರೆ ಕಾರಣಗಳು) ಎಂದು ನಮೂದಿಸಲ್ಪಟ್ಟಪತ್ರದ ಜೊತೆ ಚೆಕ್ ವಾಪಸ್ ಕಳುಹಿಸಲಾಗಿದೆ.
ಇದೇ ರೀತಿ, ಮಹಾದೇವಿ ಎನ್ನುವ ಫಲಾನುಭವಿ ಅರ್ಜಿದಾರರಿಗೆ ವಿತರಿಸಲಾದ ಚೆಕ್ವೊಂದು (ಸಂಖ್ಯೆ: 406168) ಸಹ ‘ಇತರೆ ಕಾರಣ’ಗಳಿಂದಾಗಿ ವಾಪಸ್ ಮನೆ ಸೇರಿದೆ. ಬ್ಯಾಂಕಿಗೆ ಹೋಗಿ ಕೇಳಿದರೆ ನೀವು ಯಾದಗಿರಿಗೆ ಹೋಗಿ ಕೇಳಿ ಎಂದು ಹೇಳುತ್ತಿದ್ದಾರೆಂದು ಮಹಾದೇವಿ ಅವರ ಸಂಬಂಧಿ ಹನುಮಂತ
ಇದು ಕೇವಲ ಸುರಪುರ ಅಷ್ಟೇ ಅಲ್ಲ, ಜಿಲ್ಲೆಯ ವಿವಿಧೆಡೆ ನೀಡಿದ್ದ ಪರಿಹಾರದ ಚೆಕ್ಗಳಿಗೂ ಇಂಥ ಅನುಭವವಾಗಿದೆ ಎಂದು ತಿಳಿಸಿದ ಫಲಾನುಭವಿಯೊಬ್ಬರು, ಹಣವಿಲ್ಲದಿದ್ದರೆ ನಾವು ಹೇಗೆ ಕೊಡೋದು ಅಂತ ಬ್ಯಾಂಕಿನವರು ದಬಾಯಿಸುತ್ತಾರೆ ಎಂದಿದ್ದಾರೆ.
ಬ್ಯಾಂಕ್ ಗೆ ಸುತ್ತಿ ಸುತ್ತಿ ನಮಗೆ ಸಾಕಾಗಿದೆ ಎಂದು ಫಲಾನುಭವಿಗಳು ಅಳಲು ತೊಡುಕೊಳ್ಳುತ್ತಿದ್ದಾರೆ