ಲಾಹೋರ್: ಸೋದರ ಸಂಬಂಧಿಗಳು ಯಾವಾಗಲೂ ಹತ್ತಿರ ಹತ್ತಿರವೇ ಇರುತ್ತಾರೆ. ಸಂತೋಷ, ದುಃಖದ ವಿಷಯದಲ್ಲಿ ಎಲ್ಲರೂ ಒಂದಾಗುತ್ತಿರಬೇಕು. ಆದರೆ, ಇಲ್ಲೊಂದು ಘಟನೆಯಲ್ಲಿ ಬರೋಬ್ಬರಿ 76 ವರ್ಷಗಳ ನಂತರ ಸೋದರ ಸಂಬಂಧಿ ಒಂದಾಗಿದ್ದಾರೆ.
ಭಾರತ- ಪಾಕಿಸ್ತಾನ (India- Pakisatan) ವಿಭಜನೆಯ ಸಂದರ್ಭದಲ್ಲಿ ಅಂದರೆ ಬರೋಬ್ಬರಿ 76 ವರ್ಷಗಳ ಹಿಂದೆ ಬೇರ್ಪಟ್ಟ ಇಬ್ಬರು ಸೋದರ ಸಂಬಂಧಿಗಳು ಕರ್ತಾರ್ಪುರ ಕಾರಿಡಾರ್ನಲ್ಲಿ (Kartarpur Corridor) ಮತ್ತೆ ಒಂದಾಗಿದ್ದಾರೆ. ಈ ಭಾವನಾತ್ಮಕ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
80ರ ಹರೆಯದ ಮೊಹಮ್ಮದ್ ಇಸ್ಮಾಯಿಲ್, ಅವರ ಸೋದರ ಸಂಬಂಧಿ ಸುರೀಂದರ್ ಕೌರ್, ಪಾಕಿಸ್ತಾನ ಹಾಗೂ ಭಾರತದ ತಮ್ಮ ನಗರಗಳಿಂದ ಕರ್ತಾರ್ಪುರದ ಗುರುದ್ವಾರ ದರ್ಬಾರ್ ಸಾಹಿಬ್(Gurdwara Darbar Sahib )ತಲುಪಿ ಭೇಟಿಯಾಗಿದ್ದಾರೆ.
ಕರಾತಾರ್ಪುರ ಸಾಹಿಬ್ ಆಡಳಿತ ಸೋದರಸಂಬಂಧಿಗಳ ಪುನರ್ಮಿಲನಕ್ಕೆ ಅನುಕೂಲ ಮಾಡಿಕೊಟ್ಟಿದೆ. ಎಲ್ಲರೂ ಸಿಹಿ ತಿಂಡಿ ತಿಂದು ಸಂಭ್ರಮಿಸಿದ್ದಾರೆ.
ಮೊಹಮ್ಮದ್ ಇಸ್ಮಾಯಿಲ್ ಲಾಹೋರ್ನಿಂದ ಸುಮಾರು 200 ಕಿಮೀ ದೂರದಲ್ಲಿನ ಸಾಹಿವಾಲ್ ಜಿಲ್ಲೆಗೆ ಸೇರಿದವರು. ಸುರೀಂದರ್ ಕೌರ್ ಜಲಂಧರ್ನವರು. ಕುಟುಂಬಗಳು ವಿಭಜನೆಯ ಮೊದಲು ಜಲಂಧರ್ ಜಿಲ್ಲೆಯ ಶಾಕೋಟ್ ಪಟ್ಟಣದಲ್ಲಿ ವಾಸಿಸುತ್ತಿದ್ದು ಗಲಭೆಗಳಿಂದಾಗಿ ಬೇರ್ಪಡಬೇಕಾಯಿತು ಎನ್ನಲಾಗಿದೆ.