ಮೈಸೂರು : ಜಮೀನು ವಿಚಾರದಲ್ಲಿ ಗಲಾಟೆ, ಕೊಲೆಯಲ್ಲಿ ಅಂತ್ಯ
ಮೈಸೂರು : ಜಮೀನು ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಂಜನಗೂಡು ತಾಲೂಕು ಆಲಂಬೂರು ಗ್ರಾಮದಲ್ಲಿ ನಡೆದಿದೆ. 50 ವರ್ಷದ ಲಕ್ಷ್ಮಣ್ ಕೊಲೆಯಾದ ದುರ್ದೈವಿಯಾಗಿದ್ದು, ಈತನನ್ನು ತನ್ನ ಅಣ್ಣನ ಮಗ ಸಿದ್ದರಾಜು ಕೊಲೆ ಮಾಡಿದ್ದಾನೆ ಎಂದು ಆರೋಪ ಕೇಳಿಬಂದಿದೆ.
ಲಕ್ಷ್ಮಣ್ ಮತ್ತು ತನ್ನ ಅಣ್ಣನ ಮಧ್ಯೆ ಒಂದು ಗುಂಟೆ ಜಮೀನಿನ ಹಣಕಾಸು ವಿಚಾರವಾಗಿ ಗಲಾಟೆ ಆರಂಭವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರು ಕೈ ಕೈ ಮಿಲಾಸಿಯಿದ್ದು, ಗಲಾಟೆಯಿಂದ ರೊಚ್ಚಿಗೆದ್ದ ಸಿದ್ದರಾಜು ಲಕ್ಷ್ಮಣ್ ಅವರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಬಿಳಿಗೆರೆ ಠಾಣಾ ಪೊಲೀಸರು ಆಗಮಿಸಿದ್ದು, ಮೃತದೇಹವನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಮೃತನ ಮಗಳು ಚೈತ್ರ ಬಿಳಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.