ಐಸಿಸಿ ಏಕದಿನ ವಿಶ್ವಕಪ್ನಲ್ಲಿ ನ್ಯೂಜಿ಼ಲೆಂಡ್ ವಿರುದ್ಧದ ಪಂದ್ಯದಲ್ಲಿ ಎದುರಾದ ಮೊದಲ ಅಗ್ನಿಪರೀಕ್ಷೆಯಲ್ಲಿ ಜಯಭೇರಿ ಬಾರಿಸಿರುವ ಟೀಂ ಇಂಡಿಯಾ, ಇದೀಗ ವಿಶ್ವಕಪ್ ಗೆಲ್ಲುವ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.
ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ನಲ್ಲಿ ಸತತ ಗೆಲುವುಗಳ ಮೂಲಕ ಜಯದ ಅಲೆಯಲ್ಲಿ ತೇಲುತ್ತಿದ್ದ ಭಾರತ, ಧರ್ಮಶಾಲಾದಲ್ಲಿ ನ್ಯೂಜಿ಼ಲೆಂಡ್ ತಂಡದ ಸವಾಲು ಎದುರಿಸಿತು. ರೋಹಿತ್ ಪಡೆಯಂತೆ ಪ್ರಸಕ್ತ ಟೂರ್ನಿಯಲ್ಲಿ ನ್ಯೂಜಿ಼ಲೆಂಡ್ ಕೂಡ ಸೋಲು ಕಾಣದೆ ಅಜೇಯ ತಂಡವಾಗಿ ಮುನ್ನುಗ್ಗುತ್ತಿತ್ತು. ಹೀಗಾಗಿ ಟೂರ್ನಿಯ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಕಿವೀಸ್ ಪಡೆಯನ್ನ ಸೋಲಿಸುವುದು ಭಾರತಕ್ಕೆ ಎದುರಾದ ಮೊದಲ ಅಗ್ನಿಪರೀಕ್ಷೆಯಾಗಿತ್ತು.
ಆದರೆ ನಿರೀಕ್ಷೆಯಂತೆ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಕಿವೀಸ್ ವಿರುದ್ಧ 4 ವಿಕೆಟ್ಗಳ ಗೆಲುವು ಸಾಧಿಸಿದ ಭಾರತ, ಆ ಮೂಲಕ ಪ್ರಸಕ್ತ ವಿಶ್ವಕಪ್ನಲ್ಲಿ ಎದುರಾದ ಮೊದಲ ಅಗ್ನಿಪರೀಕ್ಷೆಯಲ್ಲಿ ಗೆದ್ದು ತನ್ನ ಪ್ರಾಬಲ್ಯ ಮೆರೆದಿದೆ. ಈ ಗೆಲುವು ಭಾರತ ತಂಡದ ಆತ್ಮವಿಶ್ವಾಸವನ್ನ ಹೆಚ್ಚಿಸಿದ್ದು, ವಿಶ್ವಕಪ್ ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ಟೀಂ ಇಂಡಿಯಾ ಆಟಗಾರರ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.
ಪ್ರಮುಖವಾಗಿ ಬೌಲಿಂಗ್ನಲ್ಲಿ ಈಗಾಗಲೇ ತನ್ನ ಸಾಮರ್ಥ್ಯ ಸಾಬೀತು ಮಾಡಿದ್ದ ಭಾರತದ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಹೆಚ್ಚಿನ ನಿರೀಕ್ಷೆ ಮೂಡಿಸಿತ್ತು. ಟೂರ್ನಿಯಲ್ಲಿ ನ್ಯೂಜಿ಼ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಆಡಿದ್ದ ಎಲ್ಲಾ ನಾಲ್ಕು ಪಂದ್ಯಗಳಲ್ಲೂ ಭಾರತ ಚೇಸಿಂಗ್ನಲ್ಲಿ ಯಶಸ್ಸು ಕಂಡಿತ್ತು. ಆದರೆ ಹೆಚ್ಚಾಗಿ 4 ಅಥವಾ 5ನೇ ಕ್ರಮಾಂಕದ ಬ್ಯಾಟ್ಸ್ಮನ್ಗಳೇ ತಂಡಕ್ಕೆ ಗೆಲುವು ತಂದುಕೊಡುತ್ತಿದ್ದ ಪರಿಣಾಮ ನಂತರದ ಕ್ರಮಾಂಕದಲ್ಲಿನ ಬ್ಯಾಟರ್ಗಳಿಗೆ ತಮ್ಮ ಸಾಮರ್ಥ್ಯ ಏನು? ಎಂಬುದನ್ನ ತೋರಿಸುವ ಅವಕಾಶ ಸಿಕ್ಕಿರಲಿಲ್ಲ.
ಹೀಗಾಗಿ ನ್ಯೂಜಿ಼ಲೆಂಡ್ ತಂಡದ ಬಲಿಷ್ಠ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆಯನ್ನ ಭಾರತದ ಆಟಗಾರರು ಯಾವ ರೀತಿ ಎದುರಿಸುತ್ತಾರೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳನ್ನ ಕೆರಳಿಸಿತ್ತು. ಆದರೆ ನಿರೀಕ್ಷೆಯಂತೆ ಬೌಲಿಂಗ್ನಲ್ಲಿ ಮಿಂಚಿದ ಭಾರತೀಯ ಬೌಲರ್ಗಳು ಕಿವೀಸ್ ಪಡೆಯನ್ನ 273 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಜೊತೆಗೆ ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಮೊಹಮ್ಮದ್ ಶಮಿ ಕೂಡ ತಮ್ಮ ಸಾಮರ್ಥ್ಯ ಏನೆಂಬುದನ್ನ ಸಾಬೀತುಪಡಿಸಿದರು.
ಇನ್ನೂ ಬ್ಯಾಟಿಂಗ್ ವಿಭಾಗದಲ್ಲಿ ಟಾಪ್-5 ಬ್ಯಾಟರ್ಗಳಾದ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ತಮ್ಮ ಮೇಲಿನ ನಿರೀಕ್ಷೆಗೆ ತಕ್ಕಂತೆ ಆಡಿದರೆ. ನಂತರ ಕಣಕ್ಕಿಳಿದ ಸೂರ್ಯಕುಮಾರ್ ಅನಿರೀಕ್ಷಿತ ರನೌಟ್ಗೆ ಬಲಿಯಾದರು. ರವೀಂದ್ರ ಜಡೇಜಾ ಜವಾಬ್ದಾರಿಯುತ ಆಟವಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೇ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯ ಆತಂಕದ ನಡುವೆಯೂ ಭಾರತದ ಆಟಗಾರರು ತಮ್ಮ ಜವಾಬ್ದಾರಿಗೆ ತಕ್ಕಂತೆ ಆಟವಾಡಿದ್ದು, ಕಿವೀಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ಲಭಿಸಲು ಕಾರಣವಾಯಿತು. ನ್ಯೂಜಿ಼ಲೆಂಡ್ ವಿರುದ್ಧ ದೊರೆತ 4 ವಿಕೆಟ್ಗಳ ಜಯ ಭಾರತ ತಂಡದ ಆತ್ಮವಿಶ್ವಾಸ ಹೆಚ್ಚಿಸಿದ್ದರು, ವಿಶ್ವಕಪ್ ಪ್ರಶಸ್ತಿ ಗೆಲ್ಲಲ್ಲು ಮುಂಬರುವ ಪಂದ್ಯಗಳಲ್ಲಿ ಮತ್ತಷ್ಟು ಕಠಿಣ ಪರೀಕ್ಷೆ ಎದುರಾಗಲಿದೆ. ಹೀಗಾಗಿ ಟೀಂ ಇಂಡಿಯಾ ಆಟಗಾರರು ಇದೇ ಆತ್ಮವಿಶ್ವಾಸದೊಂದಿಗೆ ಆಡುವ ಮೂಲಕ ಪ್ರಶಸ್ತಿ ಗೆಲ್ಲಲಿ ಎಂಬುದು ಕೋಟ್ಯಾಂತರ ಅಭಿಮಾನಿಗಳ ಆಶಯ.
CWC 2023, IND v NZ, Team India, World Cup, ODI Cricket