ಬೆಂಗಳೂರಿನಲ್ಲಿ ಮತ್ತೊಂದು ದುರಂತ – ಸಿಲಿಂಡರ್ ಸ್ಪೋಟ : ಮೂವರು ಸಾವು
ಇತ್ತೀಚೆಗಷ್ಟೇ ಬೆಂಗಳೂರಿನ ಅಪಾರ್ಟ್ ಮೆಂಟ್ ಒಂದ್ರಲ್ಲಿ ಸಿಲಿಂಡರ್ ಸ್ಫೋಟಗೊಂಡು ತಾಯಿಮಗಳು ಇಬ್ಬರು ಸಜೀವ ದಹನವಾಗಿದ್ದ ಘಟನೆ ನಡೆದಿತ್ತು. ಈ ಘಟನೆ ನಡೆದು ಸರಿಯಾಗಿ 48 ಗಂಟೆ ಕಳೆಯುವ ಮುನ್ನವೇ ಮತ್ತೊಂದು ಅಂತಹದ್ದೇ ದುರ್ಘಟನೆ ಸಂಭವಿಸಿದೆ. ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಮೂವರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯ ರಾಯನ್ ಸರ್ಕಲ್ ಬಳಿಯ ನ್ಯೂ ತಗರುಪೇಟೆಯಲ್ಲಿ ನಡೆದಿದೆ. ಸ್ಫೋಟದಿಂದ ಹಲವರಿಗೆ ಗಾಯಗಳಾಗಿದ್ದು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸ್ಫೋಟದ ತೀವ್ರತೆಗೆ ಹತ್ತಾರು ಬೈಕ್ ಗಳು ಸುಟ್ಟು ಕರಕಲಾಗಿವೆ. ಸಿಲಿಂಡರ್ ಸ್ಫೋಟದ ತೀವ್ರತೆಗೆ ಮೂವರ ದೇಹಗಳು ಛಿದ್ರಗೊಂಡು ಗೋದಾಮಿನಿಂದ ಸುಮಾರು 3 ಮೀಟರ್ ಅಷ್ಟು ಎತ್ತರಕ್ಕೆ ದೇಹದ ಭಾಗಗಳು ಹಾರಿ ರಸ್ತೆಗೆ ಬಿದ್ದಿದ್ದಾಗಿ ಪ್ರತ್ಯಕ್ಷದರ್ಶಿಗಳು ಹೇಳಿಕೊಂಡಿದ್ದಾರೆ.
ಮೃತರು ಉತ್ತರ ಪ್ರದೇಶ ಮೂಲದವರು ಎಂದು ಹೇಳಲಾಗಿದ್ದು, ಮೂರು ವರ್ಷಗಳ ಹಿಂದೆ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಸ್ಫೋಟಕ್ಕೆ ಗ್ಯಾಸ್ ಸಿಲಿಂಡರ್ ಕಾರಣ ಎಂದು ಆರಂಭದಲ್ಲಿ ಹೇಳಲಾಗಿದ್ದರೂ ಪಕ್ಕದ ಅಂಗಡಿಯಲ್ಲಿ ಪಟಾಕಿ ಗೋದಾಮು ಇದ್ದು, ಅಲ್ಲಿ ಸ್ಫೋಟವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಅಲ್ಲೇ ಪಕ್ಕದ ಪಂಚರ್ ಅಂಗಡಿಯ ಸಿಲಿಂಡರ್ ಸ್ಫೋಟಗೊಂಡು ಈ ಅನಾಹುತ ಸಂಭವಿಸಿದೆ ಎಂದು ಕೂಡ ಅಂದಾಜಿಸಲಾಗ್ತಿದೆ. ಸ್ಥಳದಲ್ಲಿ ಬೀಡು ಬಿಟ್ಟಿರುವ ಪೊಲೀಸರು ತನಿಖಾ ಕಾರ್ಯಾಚರಣೆ ನಡೆಸ್ತಾಯಿದ್ದಾರೆ.