ಧೋನಿಗೆ ‘ಪಂತ್’ ಆಹ್ವಾನ ಕೊಟ್ಟು ಪಂಚ್ ಕೊಟ್ಟ ಯಂಗ್ ಸ್ಟಾರ್ಸ್
ಮುಂಬೈ : ಸಿಡಿಲ ಮರಿ ಪೃಥ್ವಿ ಶಾ ಆರ್ಭಟ.. ಗಬ್ಬರ್ ಶಿಖರ್ ಧವನ್ ಹಾರಾಟ.. ಚೆನ್ನೈ ಸೂಪರ್ ಕಿಂಗ್ಸ್ ಧೂಳಿಪಟ. ನಿನ್ನೆ ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದಿದ್ದು, ಸಿಎಸ್ ಕೆ ಗರ್ವಭಂಗ. ತನ್ನ ಮುಂದೆ ಕ್ರಿಕೆಟ್ ಕಾಗುಣಿತ ಕಲಿತ ಹುಡುಗರ ಮುಂದೆ ದಿ ಗ್ರೇಡ್ ಕ್ಯಾಪ್ಟನ್, ಭಾರತೀಯ ಕ್ರಿಕೆಟ್ ನ ಡಿ ಬಾಸ್ ಎಂಎಸ್ ಧೋನಿ ಮಂಡಿಯೂರಿದರು.
ಹೌದು..! ವಾಂಖೇಡೆ ಅಂಗಳದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ಗಳ ಸುಲಭ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 7 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಚೆನ್ನೈ ಪರ ಗಾಯಕ್ವಾಡ್ 5 ರನ್, ಮೊಯೀನ್ ಅಲಿ 36 ರನ್, ಸುರೇಶ್ ರೈನಾ 54, ಸ್ಯಾಮ್ ಕರ್ರನ್ 34 ರನ್, ಅಂಬಾಟಿ ರಾಯುಡು 23 ರನ್ ಗಳಿಸಿದರು. ಆದ್ರೆ ಎಂ.ಎಸ್. ಧೋನಿ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಅಂತಿಮವಾಗಿ ಚೆನ್ನೈ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 188 ರನ್ ಗಳ ಬೃಹತ್ ಮೊತ್ತ ದಾಖಲಿಸಿತು.
ಬಳಿಕ ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಸುಲಭವಾಗಿ ಜಯಗಳಿಸಿತು. ಆರಂಭಿಕ ಆಟಗಾರರು ಶತಕದ ಜೊತೆಯಾಟದ ಮೂಲಕ ಸ್ಫೋಟಕ ಆರಂಭ ನೀಡಿದರು. ಡೆಲ್ಲಿ ಆರಂಭಿಕ ಆಟಗಾರರಾಗಿ ಇಳಿದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಕಠಿಣ ಗುರಿಯನ್ನು ಸುಲಭವಾಗಿ ತಲುಪುವಂತಾಯಿತು. ಪೃಥ್ವಿ ಶಾ 72 ರನ್ ಸಿಡಿಸುವ ಮೂಲಕ ಮಿಂಚಿನ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಶಿಖರ್ ಧವನ್ 85 ರನ್ ಚಚ್ಚುವ ಮೂಲಕ ತಂಡವನ್ನು ಗೆಲುವಿನ ಬಾಗಿಲಿಗೆ ತಂದು ನಿಲ್ಲಿಸಿದರು. ಬಳಿಕ ಬಂದ ನಾಯಕ ರಿಷಭ್ ಪಂತ್ ಔಟಾಗದೆ 15 ರನ್ ಸಿಡಿಸಿದರೆ, ಮಾರ್ಕಸ್ ಸ್ಟೋಯ್ನಿಸ್ 14 ಸಿಡಿಸಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ 3 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ ವಿಜಯದ ನಗೆ ಬೀರಿತು.