ನವದೆಹಲಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (PM Kisan Scheme) ರೈತರಿಗೆ ಸರ್ಕಾರ ನೀಡುವ ಮೊತ್ತವನ್ನು ಏರಿಸಲಾಗುತ್ತಿದೆ ಎಂಬ ಮಾಹಿತಿ ಹೊರ ಬಿದ್ದಿತ್ತು. ಆದರೆ, ಇದು ಸುಳ್ಳು ಎಂದು ಸರ್ಕಾರ ಹೇಳಿದೆ.
6 ಸಾವಿರ ರೂ. ದಿಂದ 8 ಸಾವಿರ ರೂ.ಗೆ ಏರಿಕೆಯಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಆ ನಿರೀಕ್ಷೆ ಹುಸಿಯಾಗಿದೆ. ಇಂತಹ ಯಾವುದೇ ಪ್ರಸ್ತಾವ ಸರ್ಕಾರದ ಪರಿಶೀಲನೆಯಲ್ಲಿ ಇಲ್ಲ ಎಂದು ಕೇಂದ್ರ ಕೃಷಿ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.
2019ರ ಮಧ್ಯಂತರ ಬಜೆಟ್ನಲ್ಲಿ ಪಿಎಂ ಕಿಸಾನ್ ಯೋಜನೆಗೆ ಚಾಲನೆ ಕೊಡಲಾಗಿತ್ತು. ಜಮೀನು ಹೊಂದಿರುವ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6 ಸಾವಿರ ರೂ. ನೀಡಲಾಗುತ್ತಿದೆ. ಹೆಚ್ಚುವರಿಗೆ ಕಂತು ಸೇರುವ ಸಾಧ್ಯತೆ ಇತ್ತು ಎನ್ನಲಾಗಿತ್ತು. ಆದರೆ, ಸದ್ಯ ಈ ವಿಚಾರ ಸರ್ಕಾರದ ಮುಂದಿಲ್ಲ ಎನ್ನಲಾಗಿದೆ.
2019ರಿಂದ ಇಲ್ಲಿಯವರೆಗೆ ಸರ್ಕಾರ ತಲಾ 2,000 ರೂಗಳ 15 ಕಂತುಗಳ ಹಣವನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದೆ. 16ನೇ ಕಂತಿನ ಹಣ 2024ರ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಬಹುದು.