ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ವೈದ್ಯರು ಇಂದಿನ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವ ಶ್ರೀ ರಾಮುಲು ಪ್ರತಿಕ್ರಿಯಿಸಿ, ವೈದ್ಯರು ಮುಷ್ಕರ ಕೈ ಬಿಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ರಾಮುಲು, ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ಎಲ್ಲಾ ವೈದ್ಯರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಈ ಸಮಯದಲ್ಲಿ ಮುಷ್ಕರಕ್ಕೆ ಹೋದರೆ ಜನರಿಗೆ ಸಮಸ್ಯೆ ಆಗುತ್ತದೆ. ಹಾಗಾಗಿ ವೈದ್ಯರು ಮುಷ್ಕರ ಕೈ ಬಿಡಬೇಕು ಎಂದು ವಿನಂತಿಸಿಕೊಂಡರು.
ವೈದ್ಯರ ಬೇಡಿಕೆಗಳ ಬಗ್ಗೆ ವೈದ್ಯರ ಸಂಘದ ಅಧ್ಯಕ್ಷರ ಜೊತೆ ಮಾತಾಡಿದ್ದೇನೆ. ಸಂಬಳ ಹೆಚ್ಚು ಮಾಡಬೇಕೆಂಬ ಪ್ರಮುಖ ಬೇಡಿಕೆ ಇದೆ. ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ಇದನ್ನು ತಂದಿದ್ದೇನೆ. ಇಂದು ಮಧ್ಯಾಹ್ನ 3 ಗಂಟೆಗೆ ಸಂಘದ ಪ್ರಮುಖರ ಜೊತೆ ಸಭೆ ಮಾಡುತ್ತೇನೆ. ವೈದ್ಯರ ಎಲ್ಲಾ ಬೇಡಿಕೆ ಸರ್ಕಾರ ಈಡೇರಿಸುತ್ತದೆ ಎಂದು ಭರವಸೆ ನೀಡಿದರು.