ನಾನು ಅಧಿಕಾರದ ಮದದಿಂದ ಏನನ್ನೂ ಮಾತನಾಡಿಲ್ಲ : ಸುಧಾಕರ್
ಹುಬ್ಬಳ್ಳಿ : ನಾನು ಅಧಿಕಾರದ ಮದದಿಂದ ಏನನ್ನೂ ಮಾತನಾಡಿಲ್ಲ. ಜವಾಬ್ದಾರಿಯಿಂದ ಕೆಲವು ಪ್ರಶ್ನೆಗಳನ್ನು ಕೇಳಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟಾಂಗ್ ನೀಡಿದ್ದಾರೆ.
ಸುಧಾಕರ್ ಅಧಿಕಾರದ ಮದದಿಂದ ಮಾತನಾಡುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಟಾಂಗ್ ನೀಡಿದ ಸುಧಾಕರ್, ನಾನು ಅಧಿಕಾರದ ಮದದಿಂದ ಏನನ್ನೂ ಮಾತನಾಡಿಲ್ಲ. ಜವಾಬ್ದಾರಿಯಿಂದ ಕೆಲವು ಪ್ರಶ್ನೆಗಳನ್ನು ಕೇಳಿದ್ದೇನೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿಶೇಷ ಗೌರವವಿದೆ. ಕೋಲಾರ ಡಿಸಿಸಿ ಬ್ಯಾಂಕ್ ನಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಆರೇಳು ವರ್ಷಗಳಿಂದ ಅವರು ಸಿಎಂ ಆಗಿದ್ದಾಗಿನಿಂದಲೂ ಈ ಸಮಸ್ಯೆ ಇದೆ. ಕೆ.ಎಚ್.ಮುನಿಯಪ್ಪನವರು ಆಗಲೇ ಈ ಕುರಿತು ದೂರು ನೀಡಿದ್ದರು. ತನಿಖೆಗೆ ಆದೇಶ ನೀಡಿ ಎಂದು ಅವರು ಕೋರಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ತನಿಖೆ ಮಾಡಿಸಲು ಒಪ್ಪಲೇ ಇಲ್ಲ. ಇಂದು ಕೂಡ ಅವರ ಪಕ್ಷದ ನಾಯಕರು, ಹಿಂಬಾಲಕರು ಮಾಡುವ ತಪ್ಪನ್ನು ಅವರು ಸಮರ್ಥನೆ ಮಾಡಿಕೊಳ್ಳುತ್ತಾರೆಯೇ? ಭ್ರಷ್ಟಾಚಾರದ ಪರವಾಗಿ ಅವರು ಇದ್ದಾರಾ? ಎಂದು ಪ್ರಶ್ನೆ ಮಾಡಿದರು.
ಸಹಕಾರ ಕ್ಷೇತ್ರದ ಜನರಿಗೆ, ರೈತರಿಗೆ ಸರಿಯಾದ ಆಡಳಿತ ನೀಡಬೇಕೆಂಬ ಬದ್ಧತೆ ಇದ್ದರೆ, ಅವರೇ ತನಿಖೆಗೆ ಆದೇಶ ಮಾಡಿ ಎಂದು ಒತ್ತಾಯ ಮಾಡಬೇಕಿತ್ತು. ಆದರೆ ವಿರೋಧ ಪಕ್ಷದ ನಾಯಕರ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಇದನ್ನು ಅಧಿಕಾರದ ಮದ ಎನ್ನುವುದಾದರೆ ಜನರ ತೀರ್ಮಾನಕ್ಕೆ ಬಿಡುತ್ತೇನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದರು.
ಹಾನಗಲ್ ನಲ್ಲಿ ಬಿಜೆಪಿಗೆ ಜನಸ್ಪಂದನೆ
ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಅವರಿಗೆ ಉತ್ತಮ ಜನಸ್ಪಂದನೆ ದೊರೆಯುತ್ತಿದೆ. 100 ಕೋಟಿ ಲಸಿಕೆ ನೀಡಿ ಕೋವಿಡ್ ಸಾಂಕ್ರಾಮಿಕ ತಡೆಗಟ್ಟಲು ಶ್ರಮಿಸಿದ ಬಿಜೆಪಿ ಸರ್ಕಾರ ಪಟ್ಟ ಶ್ರಮವನ್ನು ಜನರು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಡಳಿತ ವೈಖರಿಯನ್ನು ಜನತೆ ಮೆಚ್ಚಿ ಬಿಜೆಪಿಯನ್ನು ಬೆಂಬಲಿಸುವುದು ಖಚಿತವಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿರುವುದು ಕಾಂಗ್ರೆಸ್ ನ ನೀಚ ನಡೆಯನ್ನು ಕೂಡ ಜನರು ಇಲ್ಲಿ ಗಮನಿಸಿದ್ದಾರೆ. ಆದ್ದರಿಂದ ಸಿ.ಎಂ.ಉದಾಸಿಯವರ ಕಾರ್ಯವನ್ನು ಮುಂದುವರಿಸಲು ಬಿಜೆಪಿಗೆ ಮತ ನೀಡಲಿದ್ದಾರೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.