ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಮತ್ತಷ್ಟು ನಟ-ನಟಿಯರು, ರಾಜಕಾರಣಿಗಳು ಸಿಕ್ಕಿ ಹಾಕಿಕೊಳ್ಳುವುದು ಪಕ್ಕಾ ಆಗಿದೆ.
ನಟ ಹಾಗೂ ನಿರೂಪಕ ಅಕುಲ್ ಬಾಲಾಜಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದು, ಸ್ಯಾಂಡಲ್ವುಡ್ನಲ್ಲಿ ಮತ್ತೆ ತಲ್ಲಣ ಸೃಷ್ಟಿಯಾಗಿದೆ. ಜೊತೆಗೆ ಮತ್ತೊಬ್ಬ ನಟ ಸಂತೋಷ್ಕುಮಾರ್ ಹಾಗೂ ಕಾಂಗ್ರೆಸ್ ಮಾಜಿ ಕಾರ್ಪೋರೇಟರ್ ಆರ್.ವಿ ಯುವರಾಜ್ಗೂ ಸಿಸಿಬಿ ನೋಟಿಸ್ ಜಾರಿಯಾಗಿದೆ.
ಕನ್ನಡದಲ್ಲಿ ಹಲವು ರಿಯಾಲಿಟಿ ಶೋಗಳ ಮೂಲಕ ಮನೆಮಾತಾಗಿರುವ ಅಕುಲ್ ಬಾಲಾಜಿಗೆ ಸಿಸಿಬಿ ನೋಟಿಸ್ ನೀಡಲಾಗಿದ್ದು, ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಸಿಸಿಬಿ ನೋಟಿಸ್ ತಲುಪಿದ್ದು, ನಾನು ಹೈದರಾಬಾದ್ನಲ್ಲಿದ್ದೇನೆ. ನಾಳೆ ವಿಚಾರಣೆಗೆ ಹಾಜರಾಗ್ತೇನೆ ಎಂದು ಅಕುಲ್ ಬಾಲಾಜಿ ಹೇಳಿಕೊಂಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಲಗುಮೇನಹಳ್ಳಿ ಗ್ರಾಮದಲ್ಲಿ ಅಕುಲ್ ಒಡೆತನದ ಸನ್ಶೈನ್ ರೆಸಾರ್ಟ್ ಇದೆ. ಲಾಕ್ಡೌನ್ ವೇಳೆ ಮದುವೆ ಕಾರ್ಯಕ್ರಮಕ್ಕೆ ಆಯೋಜನೆಗೆ ಅವಕಾಶ ನೀಡಿದ ಆರೋಪದ ಮೇರೆಗೆ ರೆಸಾರ್ಟ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಜೊತೆಗೆ ಡ್ರಗ್ಸ್ ಪ್ರಕರಣದ ಕಿಂಗ್ಪಿನ್ಗಳಲ್ಲಿ ಒಬ್ಬನಾದ ವಿರೇನ್ ಖನ್ನಾಗೆ ಈ ರೆಸಾರ್ಟ್ನಲ್ಲಿ ಪಾರ್ಟಿ ಮಾಡಲು 3 ಬಾರಿ ಬಾಡಿಗೆಗೆ ನೀಡಲಾಗಿತ್ತು ಎನ್ನಲಾಗಿದೆ.
ಕಾರ್ಪೋರೇಟರ್ ಆರ್.ವಿ ಯುವರಾಜ್ಗೂ ಶಾಕ್
ಡ್ರಗ್ಸ್ ಪ್ರಕರಣದಲ್ಲಿ ರಾಜಕಾರಣಿಗಳು ಹಾಗೂ ಅವರ ಮಕ್ಕಳು ಇದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಇದೀಗ ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ ದೇವರಾಜ್ ಪುತ್ರ ಹಾಗೂ ಸುಧಾಮನಗರ ಮಾಜಿ ಕಾರ್ಪೋರೇಟರ್ ಆರ್.ವಿ ಯುವರಾಜ್ಗೂ ಸಿಸಿಬಿ ಪೊಲೀಸರು ಡ್ರಗ್ಸ್ ಕೇಸ್ಗೆ ಸಂಬಂಧಿಸಿದಂತೆ ನೋಟಿಸ್ ಮೂಲಕ ಶಾಕ್ ನೀಡಿದ್ದಾರೆ.
ಈ ಹಿಂದೆ ವಿದ್ವತ್ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ವಿ ಯುವರಾಜ್ರನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಕರೆಸಿ ಹೇಳಿಕೆ ಪಡೆದು ಕಳಿಸಿದ್ದರು.
ನಟ ಸಂತೋಷ್ ಕುಮಾರ್ ಗೂ ನೋಟಿಸ್
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ಬಿಗ್ಬಾಸ್ ಖ್ಯಾತಿಯ ಸಂತೋಷ್ ಕುಮಾರ್ಗೂ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಸದ್ಯ ಮೈಸೂರಿನಲ್ಲಿನಲ್ಲಿರುವ ಸಂತೋಷ್ ಕುಮಾರ್ ನೋಟಿಸ್ ತಲುಪಿದ್ದು, ನಾಳೆ ಸಿಸಿಬಿ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.
ಡ್ರಗ್ಸ್ ಕೇಸಲ್ಲಿ ಅರೆಸ್ಟ್ ಆಗಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿ ಬರ್ತ್ಡೇ ಪಾರ್ಟಿಗೆ ಹೋಗಿದ್ದೆ. ಹೀಗಾಗಿ ನನಗೆ ನೋಟಿಸ್ ನೀಡಿರಬಹುದು ಎಂದು ಸಂತೋಷ್ ಕುಮಾರ್ ಹೇಳಿದ್ದಾರೆ.
`ನೂರು ಜನ್ಮಕೂ’, `ಇಷ್ಟ’ ಸೇರಿದಂತೆ 3 ಚಿತ್ರಗಳಲ್ಲಿ ಸಂತೋಷ್ ಕುಮಾರ್ ನಟಿಸಿದ್ದಾರೆ.