ಶಾಲಾ-ಕಾಲೇಜು ಬಂದ್ ಬಗ್ಗೆ ಶಿಕ್ಷಣ ಸಚಿವ ಸ್ಪಷ್ಟನೆ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶಾಲಾ-ಕಾಲೇಜುಗಳಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದೆ.
ಹೀಗಾಗಿ ರಾಜ್ಯದಲ್ಲಿ ಶಾಲಾ-ಕಾಲೇಜಿಗೆ ರಜೆ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿ, ಅಧಿಕಾರಿಗಳು, ಬಿಇಓ ಜೊತೆ ಸಭೆ ಆಗಿದೆ. ಕೊರೊನಾ ಕಂಟ್ರೋಲ್ ಬಗ್ಗೆ ಚರ್ಚೆ ನಡೆದಿದೆ.
ಪ್ರತಿ ಶಾಲಾ ಮಕ್ಕಳ ಬಗ್ಗೆ ಪ್ರತಿ ದಿನ ಡಿಸಿಗೆ ಮಾಹಿತಿ ನೀಡಬೇಕು. ಡಿಸಿಗಳಿಗೆ ಪೂರ್ಣ ಅಧಿಕಾರ ಕೊಟ್ಟಿದ್ದೇವೆ.
ಶಾಲೆಗಳಲ್ಲಿ ಕೊರೊನಾ ಜಾಸ್ತಿಯಾದ್ರೆ ಡಿಸಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ಡಿಸಿ, ತಹಶೀಲ್ದಾರರೇ ಶಾಲೆಗಳಿಗೆ ಭೇಟಿ ನೀಡಬೇಕು ಎಂದು ತಿಳಿಸಿದರು.
ಇನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ಶಾಲೆಗಳು ಬಂದ್ ಆಗಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಬೆಂಗಳೂರು, ಮೈಸೂರು, ಮಂಡ್ಯ ಬೆಳಗಾವಿ ಬಿಟ್ರೆ ಯಾವುದೇ ಬೇರೆ ಜಿಲ್ಲೆಗಳಲ್ಲಿ ಅಪಾಯ ಇಲ್ಲ.
ಹಾಸ್ಟೆಲ್, ರೆಸಿಡೆನ್ಸಿ ಶಾಲೆಗಳು ತುಂಬಾ ಗಂಭೀರ ಇದೆ. ಇದರ ಬಗ್ಗೆ ತಜ್ಞರ ಜೊತೆ ಚರ್ಚೆ ಮಾಡ್ತೇವೆ. ಬೆಂಗಳೂರಿನಲ್ಲಿ ಜನವರಿ ಅಂತ್ಯದವರೆಗೆ 1 ರಿಂದ 9 ತರಗತಿಗಳು ಬಂದ್ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಮಾತನಾಡಿದ ಅವರು, ರ್ಯಾಲಿಗಳಿಂದ ಭಯ ಆಗ್ತಿದೆ.
ಬೆಂಗಳೂರಿನಲ್ಲಿ ಕೊರೊನಾ ಜಾಸ್ತಿ ಆಗ್ತಿದೆ. ಕಾಂಗ್ರೆಸ್ ರ್ಯಾಲಿಯಿಂದ ಮಕ್ಕಳಿಗೆ ತೊಂದ್ರೆ ಆಗುತ್ತೆ.
ಪಾದಯಾತ್ರೆ ಈ ಸಮಯದಲ್ಲಿ ಮಾಡಬಾರದಿತ್ತು. ಅಲ್ಲದೆ ಪಾದಯಾತ್ರೆಯಲ್ಲಿ ಮಕ್ಕಳನ್ನ ಕರೆದುಕೊಂಡು ಬಂದಿದ್ದಾರೆ ಅದು ದುರ್ದೈವದ ಸಂಗತಿಯಾಗಿದೆ ಎಂದು ಬೇಸರ ಹೊರಹಾಕಿದರು.