ಮಹಾರಾಷ್ಟ್ರ, ಗುಜರಾತ್, ಉತ್ತರಾಖಂಡ, ಹಿಮಾಚಲ ಪ್ರದೇಶ, ತೆಲಂಗಾಣ, ಒಡಿಶಾ ಸೇರಿದಂತೆ 9ಕ್ಕೂ ಅಧಿಕ ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗಿದೆ. ಉತ್ತರಾಖಂಡ ಹಾಗೂ ಹಿಮಾಚಲದಲ್ಲಿ ಭೂ ಕುಸಿತ ಹಾಗೂ ದಿಢೀರ್ ಪ್ರವಾಹ ಉಂಟಾಗಿದೆ.
ವ್ಯಾಪಕ ಮಳೆಯಿಂದಾಗಿ ಹತ್ನಿಕುಂಡ ಬ್ಯಾರೇಜ್ ನಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಬಿಡುಗಡೆ ಮಾಡಲಾಗಿದ್ದು, ಯಮುನಾ ನದಿ ಮತ್ತೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ದೆಹಲಿಗೆ ಮತ್ತೊಮ್ಮೆ ಪ್ರವಾಹ ಭೀತಿ ಆರಂಭವಾಗಿದೆ.
ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಪುರೋಲಾ ಗ್ರಾಮದಲ್ಲಿ ಮೇಘಸ್ಫೋಟದಿಂದಾಗಿ ದಿಢೀರ್ ಪ್ರವಾಹ ಉಂಟಾಗಿದೆ. ಯಾವುದೇ ಸಾವ-ನೋವು ಸಂಭವಿಸಿಲ್ಲವಾದರೂ ಅಪಾರ ಪ್ರಮಾಣದ ಹಾನಿಯಾಗಿದೆ. ಹಲವು ಮನೆಗಳು ಮತ್ತು ರಸ್ತೆಗಳು ಹಾನನಿಯಾಗಿವೆ. ಉತ್ತರಕಾಶಿಯ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಹಲವಾರು ವಾಹನಗಳು ಪ್ರಹಾವದ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಜಮ್ಮುವಿನ ಬನಿಹಾಲ್ ನಿಂದ ಕಾಶ್ಮೀರಕ್ಕೆ ಹೊರಟಿದ್ದ ಸುಮಾರು 3 ಸಾವಿರ ಅಮರನಾಥ ಯಾತ್ರಿಕರ ತಂಡವನ್ನು ರೂಮ್ ಬನ್ ನಲ್ಲಿಯೇ ನಿಲ್ಲಿಸಲಾಗಿದೆ. ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್ ಆದ ಹಿನ್ನೆಲೆಯಲ್ಲಿ ಯಾತ್ರೆಗೆ ತಾತ್ಕಾಲಿಕ ತಡೆ ನೀಡಲಾಗಿದೆ.