ರುಚಿಯ ಜೊತೆಗೆ ಆರೋಗ್ಯಕರ ಆಹಾರಗಳು – ರೆಸಿಪಿಗಳು
ಈ ರೀತಿ ಆರೋಗ್ಯಕರ ನಿಂಬೆ ಹಣ್ಣಿನ ಉಪ್ಪಿನಕಾಯಿ ತಯಾರಿಸಿ..!
ನಿಂಬೆಹಣ್ಣುಗಳನ್ನು ತೊಳೆದು ಒಣಗಿಸಿ ಮತ್ತು ಸಣ್ಣ ತುಂಡುಗಳಾಗಿ ಕತ್ತರಿಸಿ. ಅವುಗಳನ್ನು ಶುದ್ಧ ಬಟ್ಟಲಿನಲ್ಲಿ ಅಥವಾ ಪಾತ್ರೆಯಲ್ಲಿ ಇರಿಸಿ ಮತ್ತು ಉಪ್ಪು ಸೇರಿಸಿ ಅರಿಶಿಣ ಹಾಕಿ ಮಿಕ್ಸ್ ಮಾಡಿ ಬಿಡಿ. ಬಾಣಲೆಯಲ್ಲಿ ಒಣ ಮೆಂತ್ಯ ಮತ್ತು ಕೆಂಪು ಮೆಣಸಿನಕಾಯಿಯನ್ನು ಒಂದೊಂದಾಗಿ ಹುರಿದುಕೊಳ್ಳಿ. ನಿಮಗೆ ಎಷ್ಟು ಪ್ರಮಾಣ ಖಾರ ಬೇಕೋ ಅದನ್ನ ನೋಡಿಕೊಂಡು ಮೆಣಸಿನಕಾಯಿ ತೆಗೆದುಕೊಳ್ಳಿ.
ನಂತರ ಅದನ್ನ ಮಿಕ್ಸಿ ಜಾರ್ ಗೆ ಹಾಕಿಕೊಳ್ಳಿ ಮತ್ತು ನುಣ್ಣಗೆ ಪುಡಿಮಾಡಿ. ಈ ಪುಡಿಯನ್ನು ಹೆಚ್ಚಿ ಉಪ್ಪು ಅರಿಶಿಣ ಸೇರಿಸಿಟ್ಟಿದ್ದ ನಿಂಬೆ ಹಣ್ಣಿಗೆ ಹಾಕಿ ಮಿಕ್ಸ್ ಮಾಡಿ.. ಚಿಕ್ಕ ಬಾಣಲೆಯಲ್ಲಿ ಎಳ್ಳೆಣ್ಣೆ ಹಾಕಿ ಸಾಸಿವೆ ಮತ್ತು ಇಂಗು ಹಾಕಿ. ಸಾಸಿವೆ ಕಾಳು ಸಿಡಿದಾಗ ಉರಿಯನ್ನು ಆಫ್ ಮಾಡಿ. ನಿಂಬೆ ಮಿಶ್ರಣಕ್ಕೆ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ ಮಾಡಿ.. ಬಳಿಕ ಒಂದು ಶುದ್ಧವಾದ ಕಂಟೇನರ್ ನಲ್ಲಿ ಮಿಶ್ರಣವನ್ನ ಹಾಕಿ ಗಟ್ಟಿಯಾಗಿ ಮುಚ್ಚಿ ರೂಮ್ ಟೆಂಪರೇಚರ್ ನಲ್ಲಿ ಇಡಿ.. ಕನಿಷ್ಠ ಇದನ್ನ ತಯಾರಿಸಿದ 2 ದಿನಗಳನ್ನ ಬಿಡಿ.. ಆ ನಂತರ ಅದು ಸೇವಿಸಲು ಸರಿಯಾಗಿರುತ್ತದೆ..
ಈ ರೀತಿ ಆರೋಗ್ಯಕರ ನಿಂಬೆ ಹಣ್ಣಿನ ಉಪ್ಪಿನಕಾಯಿ ತಯಾರಿಸಿ..!
ಕಾಳು ಮೆಣಸು ಸಾರು
ಬೇಕಾಗುವ ಸಾಮಗ್ರಿಗಳು
ಧನಿಯಾ ಕಾಳು – 1ಚಮಚ
ಕಾಳು ಮೆಣಸು – 2 ಚಮಚ
ಜೀರಿಗೆ – 1/4 ಟೀ ಚಮಚ
ಓಂ ಕಾಳು – 1/4 ಚಮಚ
ಒಣ ಮೆಣಸಿನಕಾಯಿ ( ಬ್ಯಾಡಗಿ ಮೆಣಸು) – 10
ಬೆಳ್ಳುಳ್ಳಿ – 1 ಗಡ್ಡೆ
ಈರುಳ್ಳಿ – 1/4 ಭಾಗ
ಹುಣಸೆ ಹುಳಿ – ಸ್ವಲ್ಪ
ಮಾಡುವ ವಿಧಾನ
ಮೊದಲಿಗೆ ಹುಣಸೆ ಹುಳಿಯನ್ನು ಬಿಸಿನೀರಿನಲ್ಲಿ ನೆನೆಸಿಡಿ.
ನಂತರ ಎಲ್ಲಾ ಮಸಾಲಾ ಪದಾರ್ಥಗಳನ್ನು ಎಣ್ಣೆ ಹಾಕದೆ ಮಂದ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ನಂತರ ಈರುಳ್ಳಿ ಮತ್ತು ಬೆಳ್ಳುಳ್ಳಿಗಳನ್ನು ಪ್ರತ್ಯೇಕವಾಗಿ ಎಣ್ಣೆ ಹಾಕದೆ ಕೆಂಪಗೆ ಆಗುವವರೆಗೆ ಹುರಿಯಿರಿ. ಎಲ್ಲಾ ಮಸಾಲೆ ಪದಾರ್ಥಗಳು ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿ.ಅದಕ್ಕೆ 2 ಚಮಚ ಕೊಬ್ಬರಿ ತುರಿಯನ್ನು ಸೇರಿಸಿ ಪುನಃ ರುಬ್ಬಿ. ನಂತರ ನೆನೆಸಿದ ಹುಣಸೆ ಹುಳಿಯನ್ನು ಚೆನ್ನಾಗಿ ಕಿವುಚಿ ರಸ ತೆಗೆದು ರುಬ್ಬಿದ ಮಿಶ್ರಣಕ್ಕೆ ಬೆರೆಸಿ. ಬಳಿಕ ಚೆನ್ನಾಗಿ ಕುದಿಸಿ. ನಂತರ ಅದಕ್ಕೆ ತುಪ್ಪದಲ್ಲಿ, ಸಾಸಿವೆ, ಕರಿಬೇವು, ಒಣಮೆಣಸಿನ ಒಗ್ಗರಣೆ ಕೊಡಿ. ಈಗ ಆರೋಗ್ಯಕರ ಕಾಳು ಮೆಣಸು ಸಾರು ರೆಡಿಯಾಗಿದೆ. ಇದು ಜ್ವರ, ಶೀತ, ಕೆಮ್ಮು, ಮೈ ನೋವು ಇವುಗಳಿಂದ ದೂರವಿರಲು ನೆರವಾಗುತ್ತದೆ.
ಮಂಗಳೂರು ಪತ್ರೋಡೆ
ಬೇಕಾಗುವ ಪದಾರ್ಥಗಳು
12-16 ಕೆಸುವಿನ ಎಲೆ
1 ಕಪ್ ಬೆಳ್ತಿಗೆ ಅಕ್ಕಿ
2 ಟೀಸ್ಪೂನ್ ಉದ್ದಿನ ಬೇಳೆ
2 ಟೀಸ್ಪೂನ್ ಕಡ್ಲೆಬೇಳೆ
3/4 ಕಪ್ ತೆಂಗಿನಕಾಯಿ ತುರಿ
1 ಟೀಸ್ಪೂನ್ ಜೀರಿಗೆ
1 ಟೀಸ್ಪೂನ್ ಕೊತ್ತಂಬರಿ ಬೀಜ
2-3 ಮೆಂತೆ ಕಾಳು
2 ಟೀಸ್ಪೂನ್ ಅರಿಶಿನ ಪುಡಿ
1-2 ಟೀಸ್ಪೂನ್ ಬೆಲ್ಲದ ಹುಡಿ
3-4 ಒಣ ಕೆಂಪು ಮೆಣಸು
3 ಟೀಸ್ಪೂನ್ ಹುಣಸೆಹಣ್ಣಿನ ರಸ
ರುಚಿಗೆ ತಕ್ಕಷ್ಟು ಉಪ್ಪು
ಅಗತ್ಯವಿರುವಷ್ಟು ಎಣ್ಣೆ
1 ಚಮಚ ಎಳ್ಳು
1 ಚಮಚ ಸಾಸಿವೆ
4- 5 ಕರಿಬೇವಿನ ಎಲೆ
ಮಾಡುವ ವಿಧಾನ:
3-4 ಗಂಟೆಗಳ ಕಾಲ ಅಕ್ಕಿ ಮತ್ತು ಬೇಳೆಗಳನ್ನು ನೀರಿನಲ್ಲಿ ತೊಳೆದು ನೆನೆಸಿಡಿ. ಕೆಸುವಿನ ಎಲೆಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಒರೆಸಿ. ಚಾಕುವಿನಿಂದ, ಕಾಂಡ ಮತ್ತು ಎಲೆಗಳ ಗೆರೆಗಳನ್ನು ತೆಗೆದುಹಾಕಿ. ಈಗ ತೆಂಗಿನಕಾಯಿ ತುರಿ, ಕೊತ್ತಂಬರಿ , ಮೆಂತೆ, ಜೀರಿಗೆ, ಅರಿಶಿನ ಪುಡಿ ಮತ್ತು ಬೆಲ್ಲ ಪುಡಿಯನ್ನು ರುಬ್ಬಿ. ನಂತರ ಒಣ ಕೆಂಪು ಮೆಣಸಿನಕಾಯಿ ಅಕ್ಕಿ, ಬೇಳೆ, ಹುಣಸೆ ರಸ ಮತ್ತು ಉಪ್ಪು ಸೇರಿಸಿ. ಅಗತ್ಯವಿರುವಷ್ಟು ನೀರು ಸೇರಿಸಿ ರುಬ್ಬಿಕೊಳ್ಳಿ. ಇದನ್ನು ದಪ್ಪ ಹಿಟ್ಟಿನ ಹದಕ್ಕೆ ರುಬ್ಬಿ. ರುಬ್ಬುವಾಗ ಹೆಚ್ಚು ನೀರು ಸೇರಿಸಬೇಡಿ.
ಈಗ ಅತಿದೊಡ್ಡ ಕೆಸು ಎಲೆಯನ್ನು ತಲೆಕೆಳಗಾಗಿ ಅಥವಾ ಉಲ್ಟಾ ಇರಿಸಿಕೊಳ್ಳಿ ಮತ್ತು ಎಲೆಯ ಮೇಲೆ ತೆಳುವಾಗಿ ರುಬ್ಬಿ ಇಟ್ಟುಕೊಂಡ ಮಸಾಲೆಯನ್ನು ಹಚ್ಚಿ. ಈಗ ಅದರ ಮೇಲೆ ಮತ್ತೊಂದು ಸ್ವಲ್ಪ ಸಣ್ಣ ಎಲೆಯನ್ನು ಉಲ್ಟಾ ಇರಿಸಿ. ಮತ್ತೆ ಅದರ ಮೇಲೆ ಮಸಾಲೆಯನ್ನು ಹಚ್ಚಿ. 3-4 ಎಲೆಗಳನ್ನು ಇದೇ ರೀತಿಯಲ್ಲಿ ಒಂದರ ಮೇಲೆ ಒಂದು ಇಟ್ಟು ಹಿಟ್ಟನ್ನು ಹಚ್ಚಿ . ಎಲೆಯ ಬದಿಗಳನ್ನು ಮಧ್ಯಕ್ಕೆ ಮಡಚಿ. ನಂತರ ಎಲೆಗಳನ್ನು ರೋಲ್ ಮಾಡಿ. ಇದನ್ನು ಹಬೆಯಲ್ಲಿ 20-30 ನಿಮಿಷ ಬೇಯಿಸಿ. ಬೆಂದ ಮೇಲೆ ತಣ್ಣಗಾದ ಬಳಿಕ ಪತ್ರೋಡೆ ಅನ್ನು ಸಮವಾಗಿ ತುಂಡು ಮಾಡಿ. ನಂತರ ಅವುಗಳನ್ನು ಎಣ್ಣೆ ಹಾಕಿ ತವಾದಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ. ಸಾಸಿವೆ, ಎಳ್ಳು ಮತ್ತು ಕರಿಬೇವಿನ ಸೊಪ್ಪು ಸೇರಿಸಿ ಒಗ್ಗರಣೆ ಕೊಡಿ. ಒಗ್ಗರಣೆ ಕೊಡುವ ಮೊದಲು ಸ್ವಲ್ಪ ತುರಿದ ತೆಂಗಿನಕಾಯಿ ಸೇರಿಸಿ.
ಆರೋಗ್ಯಕರ ಕಾರ್ನ್ ಸೂಪ್
ಬೇಕಾಗುವ ಸಾಮಗ್ರಿಗಳು
ರೆಗ್ಯುಲರ್ ಕಾರ್ನ್ 1
ಮಿಕ್ಸಡ್ ತರಕಾರಿಗಳು 1 ಬೌಲ್
ಶುಂಠಿ ಬೆಳ್ಳುಳ್ಳಿ ಹಸಿಮೆಣಸಿನಕಾಯಿ ಪೇಸ್ಟ್ 1 ಟೀಸ್ಪೂನ್
ಬೆಣ್ಣೆ
ಉಪ್ಪು ರುಚಿಗೆ ತಕ್ಕಷ್ಟು
ಸಕ್ಕರೆ ಅಗತ್ಯವಿರುವಷ್ಟು
ಮೆಣಸಿನ ಹುಡಿ ಅಗತ್ಯವಿರುವಷ್ಟು
ನಿಂಬೆ ಅಗತ್ಯವಿರುವಷ್ಟು
ಮಾಡುವ ವಿಧಾನ
ಜೋಳವನ್ನು ಬೇಯಿಸಿ. ನಂತರ ಅರ್ಧದಷ್ಟು ಜೋಳವನ್ನು ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ಬಳಿಕ ತರಕಾರಿಗಳನ್ನು ಬೇಯಿಸಿ. ನಂತರ ಒಂದು ಕಡಾಯಿಯನ್ನು ಬಿಸಿ ಮಾಡಿ. ಅದಕ್ಕೆ ಬೆಣ್ಣೆಯನ್ನು ಸೇರಿಸಿ. ಬಳಿಕ ಶುಂಠಿ ಬೆಳ್ಳುಳ್ಳಿ ಹಸಿಮೆಣಸಿನಕಾಯಿ ಪೇಸ್ಟ್ ಸೇರಿಸಿ ಫ್ರೈ ಮಾಡಿ. ಅದಕ್ಕೆ ಬೇಯಿಸಿದ ತರಕಾರಿಗಳನ್ನು ಸೇರಿಸಿ. ಆ ಬಳಿಕ ಬೇಯಿಸಿದ ಜೋಳ ಮತ್ತು ರುಬ್ಬಿದ ಜೋಳವನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಸಕ್ಕರೆ ಮೆಣಸು ಸೇರಿಸಿ ಕುದಿಸಿ. ಕೊನೆಗೆ ನಿಂಬೆರಸವನ್ನು ಹಿಂಡಿ.
ಆರೋಗ್ಯಕರವಾದ ಕಾರ್ನ್ ಸೂಪ್ ಸವಿಯಲು ಸಿದ್ಧ.