ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಂಖ್ಯೆ, ಸಾರಿಗೆ ಸವಾಲುಗಳು, ಕಚೇರಿ ಕಾರ್ಯಚಟುವಟಿಕೆಗಳು, ಮತ್ತು ನಗರಾಭಿವೃದ್ದಿಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರನ್ನು ವಿಭಜಿಸುವ ಬಗ್ಗೆ ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.
ವಿಭಜನೆ ಬಗ್ಗೆ ಅಂತಿಮ ವರದಿ ಇನ್ನೂ ಇಲ್ಲ
ಡಿಸಿಎಂ ಡಿಕೆ ಶಿವಕುಮಾರ್ ಅವರು, ಇದುವರೆಗೂ ಗ್ರೇಟರ್ ಬೆಂಗಳೂರು ವಿಭಜನೆಯ ಕುರಿತು ಯಾವುದೇ ಅಂತಿಮ ವರದಿ ಸಲ್ಲಿಸಲಾಗಿಲ್ಲ. ಈ ವಿಚಾರದಲ್ಲಿ ಹಲವು ಅಂಶಗಳನ್ನು ಪರಿಗಣಿಸಬೇಕಿದೆ. ಯಾವುದೇ ತುರಿತ ನಿರ್ಧಾರ ಕೈಗೊಳ್ಳುವ ಬದಲು, ಈ ಕುರಿತು ವಿವೇಕಪೂರ್ಣವಾಗಿ ಚರ್ಚಿಸಿ ಮುಂದಾಗಬೇಕಿದೆ ಎಂದು ತಿಳಿಸಿದ್ದಾರೆ.
ವಿಪಕ್ಷದ ಒಮ್ಮತವೂ ಅಗತ್ಯ
ಈ ವಿಷಯದಲ್ಲಿ ವಿಪಕ್ಷದ ನಾಯಕರೊಂದಿಗೆ ಮಾತನಾಡುವ ಅಗತ್ಯವಿದೆ. ಏಕೆಂದರೆ ನಗರ ವಿಭಜನೆಯಂತಹ ಮಹತ್ತರ ನಿರ್ಧಾರದಲ್ಲಿ ರಾಜಕೀಯ ಒಗ್ಗೂಡಿಕೆಯೂ ಅಷ್ಟೇ ಮುಖ್ಯ. ಈ ಕಾರಣದಿಂದಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಈ ಪ್ರಸ್ತಾವನೆಯನ್ನು ವಿಪಕ್ಷದ ನಾಯಕರ ಗಮನಕ್ಕೆ ತರಲು ಸೂಚಿಸಿದ್ದೇನೆ ಎಂದು ಡಿಸಿಎಂ ತಿಳಿಸಿದ್ದಾರೆ.
ಈ ವಿಚಾರದಲ್ಲಿ ನಾನು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ – ಯಾವುದೇ ತೀರ್ಮಾನ ಕೈಗೊಳ್ಳುವ ಮೊದಲು ಎಲ್ಲ ಪಕ್ಷಗಳ ನಾಯಕರು, ಜನಪ್ರತಿನಿಧಿಗಳು, ನಾಗರಿಕ ಸಮಾಜದ ಅಭಿಪ್ರಾಯವನ್ನು ಪಡೆದು ಮುಂದಿನ ಹಂತಗಳಿಗೆ ಸಾಗಬೇಕು. ಇದೇ ವಿಧಾನದಲ್ಲಿ ನಾವು ಈ ಪ್ರಸ್ತಾವನೆಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗಾಗಿ ಮಂಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.








