ನಿನ್ನ ತಮ್ಮನ ಜೊತೆ ಮದುವೆಯಾಗಲ್ಲ ಎಂದ ಸಹೋದರಿಯರ ಮೇಲೆ ಮಚ್ಚಿನಿಂದ ಹಲ್ಲೆಗೈದ ಕಿಡಿಗೇಡಿ..!
ಹಾಸನ : ಸಂಬಂಧಿಕನೊಬ್ಬ ತಂದೆಯಿಲ್ಲದ ಸಹೋದರಿಯರ ಬಳಿ ತನ್ನ ತಮ್ಮನನ್ನ ಮದುವೆಯಾಗುವಂತೆ ಪೀಡಿಸಿದ್ದು, ಅದನ್ನ ನಿರಾಕರಿಸಿದ ಸಹೋದರಿಯರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹಾಸನದ ಕುಂಚೇವು ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
22 ವರ್ಷದ ಅಕ್ಕ ಯೋಗಿತಾ ಹಾಗೂ 17 ವರ್ಷದ ಅಪ್ರಾಪ್ತ ತಂಗಿ ಮೇಲೆ ಅವರ ಅತ್ತೆ ಮಗ ನಾಗರಾಜ್ ಆಲಿಯಾಸ್ ನಾಗ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಸಿದ್ದಾನೆ. ಈ ಇಬ್ಬರಿಗ ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಕಳೆದ 2 ತಿಂಗಳ ಹಿಂದಷ್ಟೇ ಈ ಇಬ್ಬರು ಸಹೋದರಿಯರ ತಂದೆ ಮೃತಪಟ್ಟಿದ್ದರು. ಈ ನಡುವೆ ಸಹೋದರಿಯರ ಸಂಬಂಧಿಯಾದ ನಾಗರಾಜ್, ಯುವತಿಯರ ತಾಯಿ ಹೇಮಲತ ಅವರ ಬಳಿ ಬಂದು ತನ್ನ ತಮ್ಮ ದಿನೇಶ್ ಗೆ ಯೋಗಿತಾಳನ್ನು ಮದುವೆ ಮಾಡಿ ಕೊಡುವಂತೆ ಕೇಳಿದ್ದಾನೆ. ಆದ್ರೆ ಇದಕ್ಕೆ ಯೋಗಿತಾ ನಿರಾಕರಿಸಿದ್ದಾಳೆ. ನಾನು ತಂಗಿಯನ್ನು ಚೆನ್ನಾಗಿ ಓದಿಸಬೇಕು, ಓದಿರುವ ನಾನು ನಿನ್ನ ಓದಿಲ್ಲದ ನಿನ್ನ ತಮ್ಮನನ್ನು ಮದುವೆಯಾಗುವುದಿಲ್ಲ ಎಂದು ಮದುವೆಗೆ ನಿರಾಕರಿಸಿದ್ದಾಳೆ.
ಬಳಿಕ ತಂಗಿಯನ್ನ ಮದುವೆ ಮಾಡಿಕೊಡುವಂತೆ ಒತ್ತಾಯ ಮಾಡಿದ್ದಾನೆ. ಆದ್ರೆ ಇದಕ್ಕೂ ನಿರಾಕರಿಸಿದ ಬಳಿಕ ರೊಚ್ಚಿಗೆದ್ದ ನಾಗರಾಜ್ ಮಚ್ಚಿನಿಂದ ಸಹೋದರಿಯರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹೊಳೆನರಸೀಪುರ ಪೊಲೀಸರು ನಾಗರಾಜ್ ಸೇರಿ ಮೂವರನ್ನು ಬಂಧಿಸಿದ್ದಾರೆ. ಹಲ್ಲೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಅಜ್ಜಿ ಪುಟ್ಟಮ್ಮ, ಸೋದರತ್ತೆ ಅಕ್ಕಮ್ಮನನ್ನು ಬಂಧಿಸಿದ್ದಾರೆ.