ಜೈಲಿಗೆ ಕಳುಹಿಸಬೇಕಾಗುತ್ತದೆ : ರೋಹಿಣಿ ಸಿಂಧೂರಿಗೆ ಕೋರ್ಟ್ ಎಚ್ಚರಿಕೆ
ಮೈಸೂರು : ಸರ್ವೇ ನಂ4ರ ವ್ಯಾಪ್ತಿಯಲ್ಲಿರುವ ಕುರುಬಾರಹಳ್ಳಿ, ಚೌಡಹಳ್ಳಿ, ಆಲನಹಳ್ಳಿ ಭೂ ವಿವಾದದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಂಕಷ್ಟ ಎದುರಾಗಿದೆ. ಆಗಸ್ಟ್ 13ರ ಒಳಗೆ ಕುರುಬಾರಹಳ್ಳಿ, ಚೌಡಹಳ್ಳಿ, ಆಲನಹಳ್ಳಿ ಮೂರು ಸರ್ವೇ ನಂಬರ್ ಗಳ ಭೂ ಹಿಡುವಳಿದಾರರ ಹೆಸರಿಗೆ ಖಾತೆ ಮಾಡದಿದ್ದರೆ ರೋಹಿಣಿ ಸಿಂಧೂರಿ ಮತ್ತು ತಹಶೀಲ್ದಾರ್ ರಕ್ಷಿತ್ ಅವರನ್ನು ಜೈಲಿಗೆ ಜೈಲಿಗೆ ಕಳುಹಿಸಲಾಗುತ್ತದೆ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.
ಸರ್ವೆ ನಂ4ರ ವ್ಯಾಪ್ತಿಯಲ್ಲಿರುವ ಕುರುಬಾರಹಳ್ಳಿ, ಚೌಡಹಳ್ಳಿ, ಆಲನಹಳ್ಳಿ ವಿವಾದವನ್ನು ಇತ್ಯಾರ್ಥಗೊಳಿಸಿ, ನಿವಾಸಿಗಳ ಸಮಸ್ಯೆ ಬಗೆಹರಿಸುವಂತೆ ಹೈಕೋರ್ಟ್ ಸೂಚನೆ ನೀಡಿತ್ತು.
ಹೈಕೋರ್ಟ್ ಆದೇಶ ಪಾಲನೆ ಮಾಡದ ಹಿನ್ನೆಲೆಯಲ್ಲಿ ಭೂ ಮಾಲೀಕರಿಂದ ರೋಹಿಣಿ ಸಿಂಧೂರಿ ವಿರುದ್ಧ ಕ್ರಿಮಿನಲ್ ರೂಪದ ನ್ಯಾಯಾಂಗ ನಿಂದನೆ ಅರ್ಜಿ ದಾಖಲು ಮಾಡಲಾಗಿತ್ತು. ಈ ಸಂಬಂಧ ಇಂದು ಹೈಕೋರ್ಟ್ ಗೆ ಖುದ್ದು ಹಾಜರಾಗುವಂತೆ ಸಿಂಧೂರಿಗೆ ಹೈಕೋರ್ಟ್ ನೋಟಿಸ್ ನೀಡಲಾಗಿತ್ತು.
ಅದರಂತೆ ಇಂದು ರೋಹಿಣಿ ಸಿಂಧೂರಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ನ್ಯಾಯಾಧೀಶರು ಆಗಸ್ಟ್ 13ರೊಳಗೆ ಈ ಮೂರು ಸರ್ವೇ ನಂಬರ್ ಗಳ ಭೂ ಹಿಡುವಳಿದಾರರ ಹೆಸರಿಗೆ ಖಾತೆ ಮಾಡಿಸಿ ಎಂದು ಆದೇಶಿಸಿದರು. ಒಂದು ಖಾತೆ ಮಾಡಿಸದೇ ಇದ್ದರೆ ಜೈಲಿಗೆ ಕಳುಹಿಸುತ್ತೇವೆಂದು ನ್ಯಾಯಾಧೀಶರು ಎಚ್ಚರಿಸಿದರು.