ಹಾವೇರಿ ಜಿಲ್ಲೆಯಲ್ಲಿ ಮರಣ ಪ್ರಮಾಣ ಆತಂಕಕಾರಿ : ಸಚಿವ ಸುಧಾಕರ್ – ಹೆಚ್ಚಿನ ವೈದ್ಯ ಸೌಲಭ್ಯ ಇಲ್ಲದಿರುವುದರಿಂದ ಜಾಗೃತೆಯಿಂದ ಕೆಲಸ ಮಾಡಬೇಕು
ಹಾವೇರಿ : ಜಿಲ್ಲೆಯಲ್ಲಿ ಉತ್ತಮ ಮಟ್ಟದ ಆರೋಗ್ಯ ವ್ಯವಸ್ಥೆ ಇಲ್ಲದ ಕಾರಣಕ್ಕೆ ಕೋವಿಡ್ ನಿಯಂತ್ರಣದಲ್ಲಿ ಜಿಲ್ಲಾಡಳಿತ ಜವಾಬ್ದಾರಿಯುತವಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಹಾವೇರಿ ಜಿಲ್ಲೆ ಮರಣ ಪ್ರಮಾಣದ ಸರಾಸರಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಆತಂಕಕಾರಿ ವಿಷಯ ಎಂದರು.
ಸದ್ಯ ಸೋಂಕಿತರ ಸಂಖ್ಯೆ ಕಡಿಮೆ ಇದ್ದರೂ ಸಾವಿನ ಪ್ರಮಾಣ ರಾಜ್ಯದ ಸರಾಸರಿಗೆ ಹೋಲಿಸಿದಾಗ ಹೆಚ್ಚಿದೆ. ಹೀಗಾಗಿ ಹರಡುವಿಕೆ ಮತ್ತು ಸಾವಿನ ಪ್ರಮಾಣ ನಿಯಂತ್ರಣಕ್ಕೆ ಒತ್ತು ನೀಡಬೇಕು. ಸೋಂಕಿತರು ಪತ್ತೆ ಆದ ತಕ್ಷಣ ಅವರನ್ನು ಕೋವಿಡ್ ಕೇರ್ ಸೆಂಟರ್ಗಳಿಗೆ ದಾಖಲು ಮಾಡಬೇಕು. ಸದ್ಯ ಜಿಲ್ಲೆಯಲ್ಲಿ ಸಕ್ರೀಯ ಪ್ರಕರಣಗಳು ೧೮೩೬ ಇದೆ. ಈ ಪೈಕಿ ಹೋಮ್ ಐಸೊಲೇಶನ್ ನಲ್ಲಿ ೬೧೩ ಮಂದಿ ಇದ್ದಾರೆ. ಇಂದು ೨೦೯ ಡಿಸ್ಚಾರ್ಜ್, ಏಳು ಸಾವಿನ ಪ್ರಕರಣ ವರದಿಯಾಗಿದೆ ಎಂದು ವಿವರಿಸಿದರು.
ಬೇಗ ಸ್ಥಳಾಂತರಿಸಿ
ಕೋವಿಡ್ ಕೇರ್ ಸೆಂಟರ್ಗಳಿಗೆ ಮನೆಯಲ್ಲೇ ಇರುವ ಸೋಂಕಿತರನ್ನು ಆದಷ್ಟು ಬೇಗ ಸ್ಥಳಾಂತರಿಸಿ ಹಾರೈಕೆ ನೀಡಬೇಕು. ಟೆಸ್ಟಿಂಗ್, ಟ್ರಾಕಿಂಗ್, ಟ್ರೀಟ್ಮೆಂಟ್ ಸೂತ್ರವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡು ಸಾವಿನ ಪ್ರಮಾಣ ತಡೆಯಲಿ ಕ್ರಮವಹಿಸಬೇಕು. ಸೋಂಕಿತರ ಸಂಪರ್ಕಿತರು ಮತ್ತು ಐಎಲ್ಐ ಹಾಗೂ ಸಾರಿ ಪ್ರಕರಣಗಳ ಟೆಸ್ಟಿಂಗ್ ಕಡ್ಡಾಯಗೊಳಿಸಬೇಕು. ಇದರಿಂದ ಆರಂಭದಲ್ಲೇ ಸೋಂಕನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸಾಧ್ಯ ಎಂದು ಕಿವಿಮಾತು ಹೇಳಿದರು.
೩೬ ಗಂಟೆಯೊಳಗೆ ಟೆಸ್ಟ್ಗಳ ಪರೀಕ್ಷಾ ವರದಿ ನೀಡಬೇಕು. ಇದರಿಂದ ಸೋಂಕಿತರಿಗೆ ಆರಂಭದಿಂದಲೇ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ೬ ತಾಲ್ಲೂಕು ಆಸ್ಪತ್ರೆಗಳಲ್ಲಿ ಎಲ್ಲಿ ಆಕ್ಸಿಜನ್ ಹಾಸಿಗೆ ಮತ್ತು ವೆಂಟಿಲೇಟರ್ ಕೊರತೆ ಇದ್ದರೆ ತಕ್ಷಣ ಪರ್ಯಾಯ ವ್ಯವಸ್ಥೆ ಮಾಡಬೇಕು. ಕೊರತೆ ಇದ್ದಲ್ಲಿ ತಕ್ಷಣ ಒದಗಿಸಲು ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಶೀಘ್ರ ನೇಮಕ
ಜಿಲ್ಲಾ ಆಸ್ಪತ್ರೆಯಲ್ಲಿ ೨೨ ವೆಂಟಿಲೇಟರ್ಗಳು ಕೆಲಸ ಮಾಡುತ್ತಿಲ್ಲ. ತಾಲ್ಲೂಕು ಆಸ್ಪತ್ರೆಯಲ್ಲಿ ಇರುವ ಐದು ವೆಂಟಿಲೇಟರ್ ಪೈಕಿ ನಾಲ್ಕು ಕೆಲಸ ಮಾಡುತ್ತಿಲ್ಲ ಎಂದು ಇದೀಗ ತಿಳಿಸಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಕೊರತೆ ಇರುವ ತಜ್ಞರು ಮತ್ತು ವೈದ್ಯರ ಹುದ್ದೆಗಳನ್ನು ಒಂದು ವಾರದಲ್ಲಿ ನೇಮಕ ಮಾಡಲಾಗುವುದು. ಜಿಲ್ಲೆಗೆ ಬೇಕಾದ ಔಷಧಗಳ ವಿವರಗಳನ್ನು ಔಷಧ ಸಾಫ್ಟ್ವೇರ್ನಲ್ಲಿ ದಾಖಲು ಮಾಡಬೇಕು. ಇಲ್ಲದಿದ್ದರೆ ನಿಮಗೆ ಸರಿಯಾದ ಸಮಯಕ್ಕೆ ಔಷಧಗಳು ಸಿಗುವುದಿಲ್ಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಆಕ್ಸಿಜನ್ ಕಾನ್ಸ್ಟ್ರೇಟರ್ಸ್ ಇನ್ನೂ ೨೫ ರಿಂದ ೩೦ ಕಳುಹಿಸಿಕೊಡಲಾಗುವುದು. ಕೊರತೆ ಇರುವ ಔಷಧಗಳನ್ನು ತಕ್ಷಣವೇ ರವಾನೆ ಮಾಡಲು ಸೂಚನೆ ಕೊಡಲಾಗಿದೆ. ಬ್ಲಾಕ್ ಫಂಗಸ್ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಇಂಜೆಕ್ಷನ್ ಕಳುಹಿಸಿಕೊಡಲಾಗುವುದು. ಇಎನ್ಟಿ ತಜ್ಞರ ಸಮಿತಿ ರಚಿಸಿ ಅವರಿಂದ ಸಮಗ್ರ ದೃಷ್ಟಿಕೋನದ ಚಿಕಿತ್ಸಾ ವಿಧಾನವನ್ನು ಮಾರ್ಗಸೂಚಿಯಲ್ಲಿ ನೀಡಿರುವಂತೆ ಚಿಕಿತ್ಸೆ ಕೊಡುವ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂದರು.
ಲಸಿಕೆ ವಿತರಣೆ ತ್ವರಿತಗೊಳಿಸಿ
ಲಸಿಕಾ ವಿತರಣೆಯಲ್ಲಿ ಇದುವರೆಗೆ ೧,೭೧,೧೪೭ ಜನರಿಗೆ ನೀಡಲಾಗಿದೆ. ಜಿಲ್ಲಾ ಉಗ್ರಾಣದಲ್ಲಿ ೩೬೩೦ ಡೋಸ್ ದಾಸ್ತಾನು ಇದೆ. ೧೧,೩೯೦ಡೋಸ್ ಜಿಲ್ಲೆಯಲ್ಲಿ ಹಂಚಿಕೆ ಆಗಿರುವ ದಾಸ್ತಾನು ಇದೆ. ಮೊದಲ ಮತ್ತು ಎರಡನೇ ಡೋಸ್ಗೆ ದೊಡ್ಡ ಅಂತರ ಇದೆ. ಅದನ್ನು ಸರಿಪಡಿಸಬೇಕು. ಜಿಲ್ಲಾಡಳಿತ ಪ್ರತಿದಿನ ಮಾಧ್ಯಮಗಳ ಮೂಲಕ ಲಸಿಕೆ ವಿತರಣೆ, ಚಿಕಿತ್ಸಾ ವಿಧಾನ, ಸಿಸಿಸಿಗಳಲ್ಲಿ ಊಟ ಮತ್ತು ಹಾರೈಕೆ ವಿಷಯಗಳ ಬಗ್ಗೆ ಮಾಹಿತಿ ಮತ್ತು ವಿಡಿಯೋಗಳನ್ನು ನೀಡುವುದರಿಂದ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.
ಹತ್ತು ಮೆಟ್ರಿಕ್ ಟನ್ ಆಕ್ಸಿಜನ್ ಸರಿಯಾಗಿ ಬಳಕೆ ಮಾಡಬೇಕು. ಆಗ ಯಾವುದೇ ಕೊರತೆ ಆಗುವುದಿಲ್ಲ. ಆಕ್ಸಿಜನ್ ಬಳಕೆ ವಿಷಯದಲ್ಲಿ ಜವಾಬ್ದಾರಿಯಿಂದ ಬಳಸಬೇಕು. ಪ್ರತಿ ರೋಗಿಗೆ ನೀಡುತ್ತಿರುವ ಆಕ್ಸಿಜನ್ ಬಗ್ಗೆ ಪ್ರತಿದಿನ ಆಡಿಟ್ ಮಾಡಬೇಕು. ವ್ಯರ್ಥ ಆಗದಂತೆ ಎಚ್ಚರವಹಿಸಬೇಕು ಎಂದರು.
ಆಸ್ಪತ್ರೆ, ಮೆಡಿಕಲ್ ಕಾಲೇಜು ಸ್ಥಳ ಪರಿಶೀಲನೆ
ಕೋವಿಡ್ ಪರಿಶೀಲನಾ ಸಭೆಗೂ ಮೊದಲು ಸುಧಾಕರ್ ಅವರು ಉಸ್ತುವಾರಿ ಸಚಿವರಾದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು, ಸಂಸದರಾದ ಶಿವಕುಮಾರ್ ಉದಾಸಿ ಹಾಗೂ ಜಿಲ್ಲೆಯ ಶಾಸಕರು ಮತ್ತು ಅಧಿಕಾರಿಗಳು ಜಿಲ್ಲಾ ಆಸ್ಪತ್ರೆಗೆ ಮತ್ತು ನೂತನ ಮೆಡಿಕಲ್ ಕಾಲೇಜು ನಿರ್ಮಾಣದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.