ಇಕ್ಕೇರಿ ಸಂಸ್ಥಾನದ ಹುಲಿ ವೀರ ಶಿವಪ್ಪ ನಾಯಕ ಮೈಸೂರು ಸಂಸ್ಥಾನಕ್ಕೆ ಸವಾಲಾಗಿದ್ದ ಕಟ್ಟಾಳು: Saakshatv Naavu kelada charitre episode1
“ನಮಗರಿಯದ ಮಲೆನಾಡಿನ ಕೆಳದಿ ನಾಯಕರ ಸಾಹಸಗಾಥೆ ಚರಿತ್ರೆಯ ಜಾಡು ಅರಸಿ..” Saakshatv Naavu kelada charitre episode1
ಕರ್ನಾಟಕದ ಮಲೆನಾಡು ಮತ್ತು ಕರಾವಳಿಯನ್ನು ಆಳಿದ ಇಕ್ಕೇರಿ ನಾಯಕರು ದೂರದ ರಾಮನಗರ ಮತ್ತು ಬೆಂಗಳೂರು ಸೀಮೆಯಲ್ಲಿ 17ನೇ ಶತಮಾನದ ಆರಂಭದಲ್ಲಿ ವಿಜಯ ಪತಾಕೆಯನ್ನು ಹಾರಿಸಿ ದಾನ ಧರ್ಮ ಮಾಡಿದ್ದು, ಇದಕ್ಕೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹೊನ್ನಾಪುರ ಗ್ರಾಮದ ನಾಯಕ ಬೆಟ್ಟದ ಶ್ರೀ ಕಂಬದ ನರಸಿಂಹಸ್ವಾಮಿ ದೇವಾಲಯ ಇಂದಿಗೂ ಸಾಕ್ಷಿಯಾಗಿ ನಿಂತಿದೆ. ಇಕ್ಕೇರಿ ನಾಯಕರು ಹಳೆಯ ಮೈಸೂರು ಪ್ರಾಂತ್ಯದಲ್ಲಿ ದಾನ ಧರ್ಮ ಮತ್ತು ದೇವಾಲಯ ಹಾಗೂ ಮಠಗಳನ್ನು ಯಾಕೆ ನಿರ್ಮಾಣ ಮಾಡಿದರು ಎಂಬ ಪ್ರಶ್ನೆಗೆ ಉತ್ತರ ಹಾಗೂ ಇದರ ಪೂರ್ವಪರ ತಿಳಿಯಲು 1565ರ ಕಾಲಘಟ್ಟಕ್ಕೆ ಹೋಗಬೇಕಾಗುತ್ತದೆ. ಐತಿಹಾಸಿಕ ರಕ್ಕಸಗಿ ತಂಗಡಿ (ತಾಳಿಕೋಟೆ) ಯುದ್ಧದಲ್ಲಿ ಐದು ವೈರಿಗಳು ಇಸ್ಲಾಂ ಧರ್ಮದ ಹೆಸರಿನಲ್ಲಿ ಒಂದಾಗಿ ದಕ್ಷಿಣದ ಕೊನೆಯ ಹಿಂದು ಸಾಮ್ರಾಜ್ಯ ಎಂದೇ ಪ್ರಖ್ಯಾತಿ ಪಡೆದ ವಿಜಯನಗರದ ಪತನಕ್ಕೆ ನಾಂದಿ ಹಾಡುತ್ತಾರೆ. ಆದರೆ ಎಲ್ಲರಿಗೂ ಗೊತ್ತಿರುವ ಹಾಗೆ ಈ ಯುದ್ಧದ ತರುವಾಯ ಅಳಿಯ ರಾಮರಾಯರ ಕಿರಿಯ ಸಹೋದರ ತಿರುಮಲರಾಯ ವಿಜಯನಗರದ ರಾಜಧಾನಿಯನ್ನು ಮೊದಲು ಇಂದಿನ ಆಂದ್ರಪ್ರದೇಶದ ಪೆನುಕೊಂಡು ತದನಂತರ ಚಂದ್ರಗಿರಿಗೆ ಸ್ಥಳಾಂತರಿಸಿ ಆಂದ್ರಪ್ರದೇಶ ಮತ್ತು ತಮಿಳುನಾಡಿನ ಪ್ರಾಂತ್ಯದಲ್ಲಿ ತಮ್ಮ ರಾಜಭಾರವನ್ನು ಮುಂದುವರೆಸುತ್ತಾರೆ.
ಇನ್ನೂ ಇತ್ತಾ ಈ ಕಟುಬದ್ಧ ವೈರಿಗಳು ಮತ್ತೆ ಒಬ್ಬರ ಮೇಲೆ ಇನ್ನೊಬ್ಬರು ಯುದ್ಧ ಮಾಡುತ್ತ ಕೊನೆಯಲ್ಲಿ ಬಿಜಾಪುರದ ಆದಿಲ್ ಶಾಹಿ ಮತ್ತು ಗೋಲ್ಕೊಂಡದ ಕುತುಬ್ ಶಾಹಿಗಳು ಮಾತ್ರ ಉಳಿಯುತ್ತಾರೆ. ಈ ಇಬ್ಬರಿಗೂ ಇದ್ದ ಒಂದು ಪ್ರಮುಖ ಅಸೆ ಏನೆಂದರೆ ವಿಜಯನಗರದ ಕೊನೆಯ ಕೊಂಡಿಯನ್ನು ಕಿತ್ತು ಈ ಮಹಾನ್ ಸಾಮ್ರಾಜ್ಯವನ್ನು ಸಂಪೂರ್ಣವಾಗಿ ಧೂಳಿಪಟ ಮಾಡುವುದು. ಆದರೆ ಇದಕ್ಕೆ ಅಡ್ಡವಾಗಿದ್ದು ಮೊಗಲ್ ಚಕ್ರವರ್ತಿ ಶಾಹ ಜಹಾನ್ ಅವರ ಆಕ್ರಮಣಕಾರಿ ದಖನ್ ನೀತಿ.
21/02/1636ರಲ್ಲಿ ಶಾಹ ಜಹಾನ್ ದಖನ್ ಗೆ ಬಂದು ದೌಲತಭಾದ ಅನ್ನು ತನ್ನ ದಕ್ಷಿಣ ಭಾರತದ ಕೇಂದ್ರ ಬಿಂದು ಮಾಡಿಕೊಂಡು ಬಿಜಾಪುರ ಮತ್ತು ಗೋಲ್ಕೊಂಡ ಮೇಲೆ ಯುದ್ಧವನ್ನು ಸಾರುತ್ತಾನೆ. ನಾಲ್ಕು ತಿಂಗಳುಗಳ ಯುದ್ಧದ ನಂತರ ಆದಿಲ್ ಶಾಹಿ ಮತ್ತು ಕುತುಬ್ ಶಾಹಿ ಇಬ್ಬರೂ 6/5/1636ರಲ್ಲಿ ಮೊಗಲ್ ಸಾಮ್ರಾಜ್ಯದ ಸಾಮಂತರಾಗಲೂ ಸ್ವೀಕರಿಸಿ ಪ್ರತಿ ವರ್ಷ ಕಪ್ಪಕಾಣಿಕೆ ನೀಡಲು ಒಪ್ಪಿಕೊಳ್ಳುತ್ತಾರೆ. ಈ ಒಪ್ಪಂದದ ಪರಿಣಾಮವಾಗಿ ಬಿಜಾಪುರ ಮತ್ತು ಗೋಲ್ಕೊಂಡದ ಮೇಲೆ ನೇತಾಡುತ್ತಿದ್ದ ಮೊಗಲ್ ಕತ್ತಿ ಕೊಂಚ ಮಟ್ಟಿಗೆ ದೂರವಾದ ಕಾರಣ ಆದಿಲ್ ಶಾಹಿ ಮತ್ತು ಕುತುಬ್ ಶಾಹಿ ಇಬ್ಬರೂ ತಮ್ಮ ಹಳೆಯ ಕನಸನ್ನು ನನಸು ಮಾಡಲು ಬಾರಾಮಹಲ್ ನಲ್ಲಿ ಆಳ್ವಿಕೆ ಮಾಡುತ್ತಿದ್ದ ವೆಂಕಟಪತಿಯ (ಮೂರನೇ) ಮೇಲೆ ದಂಡೆದ್ದು ಹೋಗಲು ಸಜ್ಜಾಗುತ್ತಾರೆ. ಆದರೆ ಇದಕ್ಕೆ ಅಂದು ಅಡ್ಡಿಯಾಗಿದ್ದು ಇಕ್ಕೇರಿ, ಶಿರಾ, ತುಮಕೂರು, ಬೆಂಗಳೂರು, ಮೈಸೂರು ಮತ್ತು ಕೋಲಾರದ ರಾಜರು. ಇನ್ನೂ ಇಕ್ಕೇರಿಯ ಮೇಲೆ ಯುದ್ಧ ಮಾಡಲು ಒಂದು ನೆಪವನ್ನು ಹುಡುಕುವಾಗ ಆದಿಲ್ ಶಾಹಿಗೆ ವರವಾಗಿ ಸಿಕ್ಕಿದ್ದು ಇಕ್ಕೇರಿ ನಾಯಕರ ಸಾಮಂತ ಬಸವಪಟ್ಟಣದ ಕೆಂಗೆ ಹನುಮಪ್ಪ ನಾಯಕ.
ಇತ್ತ ವಿಜಯನಗರದ ಬಲಿಷ್ಠ ಸಾಮಂತರಲ್ಲಿ ಒಂದಾಗಿದ್ದ ಇಕ್ಕೇರಿ ಸಂಸ್ಥಾನ ಹಿರಿಯ ವೆಂಕಟಪ್ಪ ನಾಯಕರ ಆಳ್ವಿಕೆಯಲ್ಲಿ (1586 – 1629) ಕರಾವಳಿಯ ದಕ್ಷಿಣ ಗೋವಾ ಇಂದ ಕೇರಳದ ನೀಲೇಶ್ವರದವರೆಗೂ ಮತ್ತು ಪಶ್ಚಿಮ ಘಟ್ಟದ ಮೇಲೆ ತನ್ನ ಸಾರ್ವಪಥವನ್ನು ಪ್ರತಿಷ್ಟಾಪಿಸಿ ಕಾಳುಮೆಣಸು, ಅಕ್ಕಿ ಮತ್ತು ಇತರೆ ವ್ಯಾಪಾರವನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡಿತ್ತು. ಹಿರಿಯ ವೆಂಕಟಪ್ಪ ನಾಯಕರ ತರುವಾಯ ಪಟ್ಟ ಏರಿದ ವೀರಭದ್ರ ನಾಯಕನಿಗೆ (1629 – 1645) ಕೇವಲ 20 ವರ್ಷ ಹಾಗಾಗಿ ರಾಜ್ಯಭಾರದಲ್ಲಿ ಅವನ ಚಿಕ್ಕಪ್ಪ ಶಿವಪ್ಪ ನಾಯಕ ಮತ್ತು ಇಮ್ಮಡಿ ವೆಂಕಟಪ್ಪ ನಾಯಕರು ಸಹಕರಿಸುತ್ತಾರೆ. ವೀರಭದ್ರ ನಾಯಕ ತನ್ನ ಪತ್ನಿಯರ ಸಮೇತ ತೀರ್ಥಹಳ್ಳಿಯ ಭೀಮನಕಟ್ಟೆಗೆ ತೀರ್ಥಯಾತ್ರೆ ಕೈಗೊಂಡಾಗ ಸೆರೆಮನೆಯಲ್ಲಿ ಇದ್ದ ರಾಮರಾಜ ನಾಯಕರ ಮಗ ವೀರಪ್ಪ ನಾಯಕ ತನ್ನ ಕೆಲವು ನಿಷ್ಠಾವಂತರ ಕೃಪೆಯಿಂದ ಹೊರಬಂದು ಇಕ್ಕೇರಿ ಗಾದಿಯನ್ನು ಏರುತ್ತಾನೆ. ವೀರಭದ್ರ ನಾಯಕ ತನ್ನ ಅಪ್ತರ ಜೊತೆಗೆ ಸಮಾಲೋಚಿಸಿ ಮುಂದಿನ ನಾಲ್ಕು ವರ್ಷಗಳ ಕಾಲ ತೀರ್ಥಹಳ್ಳಿಯ ರಾಮೇಶ್ವರ ದೇವಾಲಯದ ಪಕ್ಕದಲ್ಲಿ ಅರಮನೆ ಕಟ್ಟಿ ಅಲ್ಲಿಂದ ರಾಜ್ಯಭಾರ ಮಾಡುತ್ತಾನೆ. ಆದ್ದರಿಂದ ತೀರ್ಥಹಳ್ಳಿ ನಾಲ್ಕು ವರ್ಷಗಳ ಕಾಲ ತೀರ್ಥರಾಜಪುರ ಆಗುತ್ತದೆ.
ಶಿವಪ್ಪನಾಯಕರ ದಕ್ಷತೆಯ ಪರಿಣಾಮವಾಗಿ 1633ರಲ್ಲಿ ವೀರಭದ್ರ ನಾಯಕ ಮರಳಿ ಇಕ್ಕೇರಿ ಗದ್ದಿ ಏರಿ ವೀರಪ್ಪ ನಾಯಕನಿಗೆ ಸಹಕರಿಸಿದ ಸೋದೆ ಮತ್ತು ಬೀಳಗಿ ನಾಯಕರನ್ನು ಸೋಲಿಸಿ ತನ್ನ ಅಧಿಕಾರವನ್ನು ಪ್ರಶ್ನಿಸಿ ದಂಗೆ ಎದ್ದಿದ್ದ ಕರಾವಳಿ ಸಾಮಂತರನ್ನು ಸಹಾ ಸೋಲಿಸಿ ತನ್ನ ಸಾರ್ವಭೌಮತ್ವವನ್ನು ಸಾರುತ್ತಾನೆ. ಇಕ್ಕೇರಿಯ ಪಟ್ಟಭದ್ರ ಶತ್ರುಗಳಾಗಿದ್ದ ಮೈಸೂರಿನ ಒಡೆಯರ್ ಇಕ್ಕೇರಿ ನಾಯಕರ ವೈಭವ ಸಹಿಸದೆ ವೀರಭದ್ರ ನಾಯಕರ ಸಾಮಂತರಾಗಿದ್ದ ಬಸವ ಪಟ್ಟಣದ ಕೆಂಗೆ ಹನುಮಪ್ಪ ನಾಯಕನನ್ನು ಇಕ್ಕೇರಿ ಸಂಸ್ಥಾನದ ವಿರುದ್ಧ ಎತ್ತಿ ಕಟ್ಟುತ್ತಾನೆ.
ಬಸವಪಟ್ಟಣದ ಕೆಂಗೆ ಹನುಮಪ್ಪ ನಾಯಕ ಮತ್ತು ತರೀಕೆರೆಯ ವೆಂಕಟಪ್ಪ ನಾಯಕರ ಆಮಂತ್ರಣದ ಮೇರೆಗೆ ಮಹಮ್ಮದ್ ಆದಿಲ್ ಶಾಹಿ (1636 – 1656) ತನ್ನ ಶ್ರೇಷ್ಠ ದಂಡನಾಯಕ ರಣದುಲ್ಲಾ ಖಾನ್ ನೇತೃತ್ವದಲ್ಲಿ ಮಲಿಕ್ ರೈಹಾನ್, ಅಫ್ಜಲ್ ಖಾನ್ ಮತ್ತು ಶಹಜಿ ಭೋಸ್ಲೇ ಅಂತಹಾ ಮೇಧಾವಿ ಸೈನ್ಯಾಧಿಕಾರಿಗಳ ಜೊತೆಗೆ ಬಲಿಷ್ಠ ಸೈನ್ಯವನ್ನು ಮಲೆನಾಡಿಗೆ ಕಳಿಸುತ್ತಾನೆ. ಧಾರವಾಡ ಮತ್ತು ಲಕ್ಷ್ಮೇಶ್ವರದ ಮೂಲಕ ದಿನಾಂಕ 30-12-1637ರಂದು ಕೆಂಗೆ ಹನುಮಪ್ಪ ನಾಯಕ ತೋರಿಸಿದ ಗುಪ್ತ ಮಾರ್ಗದಲ್ಲಿ ಸಂಚರಿಸಿ ಇಕ್ಕೇರಿಯ ಮೇಲೆ ಆಕ್ರಮಣ ಮಾಡುತ್ತಾನೆ. ನೋಡ ನೋಡುತ್ತಲೇ ಇಕ್ಕೇರಿ ಹೊತ್ತು ಉರಿಯುತ್ತದೆ. ದೇವಾಲಯಗಳು ಧ್ವಂಸವಾಗುತ್ತವೆ, ಅಘೋರೇಶ್ವರನ ವಿಗ್ರಹ ಛಿದ್ರವಾಗುತ್ತದೆ, ಗಣಪತಿ ದೇವಾಲಯಕ್ಕೆ ಅಡ್ಡಲಾಗಿ ಮಸ್ಜಿದ್ ನಿರ್ಮಾಣವಾಗುತ್ತದೆ. ಮನೆ ಮಠಗಳು ನೆಲಸಮವಾಗುತ್ತದೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತದೆ. ಹಿಂದೆಂದೂ ಕೇಳರಿಯದ ದುರ್ಘಟನೆ ಮಲೆನಾಡಿನಲ್ಲಿ ನಡೆದು ಹೋಗುತ್ತದೆ.
ವೀರಭದ್ರ ನಾಯಕರು ತೀರ್ಥಹಳ್ಳಿಯ ಅಭೇದ್ಯ ಭುವನಗಿರಿ (ಕವಲೇದುರ್ಗ) ಕೋಟೆ ಸೇರಿದ ಮೇಲೆ ರಣದುಲ್ಲಾ ಖಾನ್ ಸತತವಾಗಿ ಎರಡು ತಿಂಗಳ ಕಾಲ ಈ ಕೋಟೆಯನ್ನು ಸುತ್ತುವರೆದು ಯುದ್ಧವನ್ನು ಮಾಡುತ್ತಾನೆ. ಕೊನೆಯಲ್ಲಿ ರಣದುಲ್ಲಾ ಖಾನ್ ಷರತ್ತಿಗೆ ಒಪ್ಪಿ ವೀರಭದ್ರ ನಾಯಕ 18 ಲಕ್ಷ ಹೊನ್ನು ಮತ್ತು ತನ್ನ ರಾಜ್ಯದ ಉತ್ತರದ ಪ್ರದೇಶವನ್ನು ಆದಿಲ್ ಶಾಹಿಗೆ ನೀಡುತ್ತಾನೆ. ಈ ಯುದ್ಧದ ನಂತರ ಇಕ್ಕೇರಿ ಸಂಸ್ಥಾನದ ರಾಜಧಾನಿಯನ್ನು ಶಿವಪ್ಪ ನಾಯಕ ಮತ್ತು ಅವನ ಸಹೋದರ ವೆಂಕಟಪ್ಪ ನಾಯಕ ನಿರ್ಮಾಣ ಮಾಡಿದ ಬಿದನೂರಿಗೆ ವರ್ಗಾವಣೆ ಆಗುತ್ತದೆ. 1638ರಲ್ಲಿ ರಣದುಲ್ಲಾ ಖಾನ್ ಶಿರಾ ಮತ್ತು ತುಮಕೂರು ಅನ್ನು ಜಯಸಿ ಯಲಹಂಕ ನಾಡಪ್ರಭು ಕೆಂಪೇಗೌಡರನ್ನು ಸೋಲಿಸಿ ಅವರಿಗೆ ಮಾಗಡಿಯನ್ನು ಜಾಗೀರ್ ಆಗಿ ನೀಡತ್ತಾನೆ. 18 ಜನವರಿ 1639ರಂದು ರಣದುಲ್ಲಾ ಖಾನ್ ಶ್ರೀರಂಗಪಟ್ಟಣವನ್ನು ಸುತ್ತುವರಿದು ಆಕ್ರಮಣಕಾರಿ ಯುದ್ಧ ಮಾಡುತ್ತಾನೆ. ಈ ಭಯಾನಕ ಯುದ್ಧದಲ್ಲಿ ಎರಡೂ ಕಡೆಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜೀವ ಹಾನಿ ಆಗುತ್ತದೆ ಆದರೆ ಕೊನೆಯಲ್ಲಿ 31 ಜನವರಿ 1639ರಂದು ನಡೆದ ಒಪ್ಪಂದದ ಪ್ರಯುಕ್ತ ಕಾವೇರಿ ನದಿಯ ಉತ್ತರದ ಪ್ರದೇಶ ಆದಿಲ್ ಶಾಹಿಗೆ ಸೇರಿದರೆ ನದಿಯ ದಕ್ಷಿಣಭಾಗ ಅಂದಿನ ಮೈಸೂರಿನ ರಾಜ ಕಂಠೀರವ ನರಸರಾಜ ಒಡೆಯರ್ (1638 – 1659) ಅವರಿಗೆ ಉಳಿಯುತ್ತದೆ. ರಣದುಲ್ಲಾ ಖಾನ್ ಶಹಜೀ ಭೋಸ್ಲೇಗೆ ಮೈಸೂರಿನ ರಾಜನ ಮೇಲೆ ಕಣ್ಣು ಇಡಲು ಹೇಳಿ ಒಪ್ಪಂದದಂತೆ ಪ್ರತಿ ವರ್ಷ 5 ಲಕ್ಷ ಹೊನ್ನು ಕಪ್ಪವಾಗಿ ಸಂಗ್ರಹಿಸಲು ಜವಾಬ್ದಾರಿ ವಹಿಸುತ್ತಾನೆ.
ಇನ್ನೂ ಕಾವೇರಿ ನದಿಯ ಉತ್ತರಭಾಗದ ಪ್ರದೇಶದ ಕರವಸೂಲಿ ಮತ್ತು ಮೇಲುಸ್ತುವಾರಿಯನ್ನು ನೋಡಿಕೊಳ್ಳಲು ಕೆಂಗೆ ಹನುಮಪ್ಪ ನಾಯಕ ಮತ್ತು ಖಾಜಿ ಸಯ್ಯದ್ ಅವರಿಗೆ ಜವಾಬ್ದಾರಿ ವಹಿಸಿ ರಣದುಲ್ಲಾ ಖಾನ್ ಕರ್ನಾಟಕದ ಮೇಲೆ ತನ್ನ ಮೊದಲ ದಂಡು ಯಾತ್ರೆಯನ್ನು ಮುಗಿಸಿ ಬಿಜಾಪುರದ ಕಡೆ ಮುಖ ಮಾಡುತ್ತಾನೆ.
ಮೈಸೂರಿನ ಒಡೆಯರ್ ಅವರ ಪಿತೂರಿ ಮತ್ತು ಕೆಂಗೆ ಹನುಮಪ್ಪ ನಾಯಕ ದ್ರೋಹ ಇಕ್ಕೇರಿ ಸಹಿತ ಕೊನೆಯಲ್ಲಿ ಶ್ರೀರಂಗಪಟ್ಟಣವನ್ನು ಸಹಾ ಆಹುತಿ ತೆಗೆದುಕೊಳ್ಳುತ್ತದೆ. ಇನ್ನೂ ಮೈಸೂರಿನ ಪಿತೂರಿಗೆ ಮತ್ತೆ ಬಲಿಯಾದ ಕೆಂಗೆ ಹನುಮಪ್ಪ ನಾಯಕ ವಿಜಯನಗರದ ವೆಂಕಟಪತಿ (ಮೂರನೇ) ರಾಯರ ಆಶ್ರಯ ಪಡೆದು ಬಸವಪಟ್ಟಣಕ್ಕೆ ಹಿಂದಿರುಗಿ ಬಿಜಾಪುರದ ಆದಿಲ್ ಶಾಹಿ ಸುಲ್ತಾನರ ವಿರುದ್ಧ ದಂಗೆ ಏಳುತ್ತಾನೆ. ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ಆದಿಲ್ ಶಾಹಿ ಮತ್ತೆ ರಣದುಲ್ಲಾ ಖಾನ್ ಅಧೀನದಲ್ಲಿ ಮಲೆನಾಡು ಮತ್ತು ಹಳೆಯ ಮೈಸೂರಿನ ಭಾಗದ ಮೇಲೆ ಮತ್ತೊಂದು ಸುತ್ತಿನ ದಂಡಯಾತ್ರೆ ಕೈಗೊಳ್ಳಲು ಆದೇಶಿಸುತ್ತಾನೆ.
1640ರಲ್ಲಿ ರಣದುಲ್ಲಾ ಖಾನ್ ಹರಿಹರದ ತುಂಗಭದ್ರಾ ನದಿಯ ದಂಡೆಯ ಮೇಲೆ ಮೊಕ್ಕಾಂ ಮಾಡಿ ಬಸವಪಟ್ಟಣದ ವಿರುದ್ಧ ಇಕ್ಕೇರಿ ನಾಯಕರ ಸಹಕಾರ ಕೋರುತ್ತಾನೆ ಮತ್ತು ಇದರ ಬದಲಾಗಿ ಈ ಹಿಂದೆ ವಶಪಡಿಸಿಕೊಂಡಿದ್ದ ಇಕ್ಕೇರಿ ಸಂಸ್ಥಾನದ ಪ್ರದೇಶವನ್ನು ಹಿಂದಿರುಗಿಸಲು ಆಶ್ವಾಸನೆ ನೀಡುತ್ತಾನೆ. ಇನ್ನೂ ಕೆಂಗೆ ಹನುಮಪ್ಪ ನಾಯಕನ ದ್ರೋಹಕ್ಕೆ ಸಿಕ್ಕಿ ಭಸ್ಮವಾದ ಇಕ್ಕೇರಿ ರಾಜಧಾನಿಯ ಪ್ರತೀಕಾರವನ್ನು ತೀರಿಸಿಕೊಳ್ಳಲು ಹಪತಪಿಸುತ್ತಿದ್ದ ಇಕ್ಕೇರಿ ನಾಯಕರು ರಣದುಲ್ಲಾ ಖಾನಿನ ಆಮಂತ್ರಣವನ್ನು ಒಪ್ಪಿಕೊಂಡು ಒಂದು ಬಲಿಷ್ಠ ಸೈನ್ಯ ತುಕಡಿಯನ್ನು ವೀರ ಶಿವಪ್ಪ ನಾಯಕನ ನೇತೃತ್ವದಲ್ಲಿ ಕಳಿಸಿ ಕೊಡಲಾಗುತ್ತದೆ. ರಣದುಲ್ಲಾ ಖಾನ್ ಹಾಗೂ ಅವನ ಸೈನ್ಯಾಧಿಕಾರಿಗಳಾದ ಶಹಜೀ ಮತ್ತು ಅಫ್ಜಲ್ ಖಾನ್ ರನ್ನು ಸೇರಿದ ಶಿವಪ್ಪ ನಾಯಕ ಬಸವಪಟ್ಟಣದ ವಿರುದ್ದದ ಯುದ್ಧದಲ್ಲಿ ತನ್ನ ಪರಾಕ್ರಮದಿಂದ ಕೆಂಗೆ ಹನುಮಪ್ಪ ನನ್ನು ಸೋಲಿಸಿ ಅವನ ಇಡೀ ಪರಿವಾರದವರನ್ನು ಸೆರೆ ಹಿಡಿದು ಬಿಜಾಪುರಕ್ಕೆ ಕಳಿಸುತ್ತಾನೆ.
ಈ ವಿಜಯದ ನಂತರ ರಣದುಲ್ಲಾ ಖಾನ್ ತನ್ನ ಸೈನ್ಯ ಪಡೆಯನ್ನು ಇಬ್ಬಾಗಗೊಳಿಸಿ ಒಂದನ್ನು ಅಫ್ಜಲ್ ಖಾನ್ ನೇತೃತ್ವದಲ್ಲಿ ಕಳಿಸಿದರೆ ಇನ್ನೊಂದು ತನ್ನ ಅಧೀನದಲ್ಲಿ ಮುಂದುವರಿಯುತ್ತದೆ. ಅಫ್ಜಲ್ ಖಾನ್ ಬಸವಪಟ್ಟಣದಿಂದ ಚಿಕ್ಕನಾಯಕನಹಳ್ಳಿಗೆ ತೆರಳಿ ಅಲ್ಲಿಯ ಕೋಟೆಯನ್ನು ವಶಪಡಿಸಿಕೊಂಡು ನಂತರ ಬೇಲೂರು ಹಾಗೂ ತುಮಕೂರು ವಶಪಡಿಸಿಕೊಂಡು ಬೆಂಗಳೂರು ಸೇರುತ್ತಾನೆ. ಇನ್ನೂ ರಣದುಲ್ಲಾ ಖಾನ್ ಶಿವಪ್ಪನಾಯಕನ ಜೊತೆಗೆ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ್ ಮತ್ತು ತುಮಕೂರು ಮೂಲಕ ಬೆಂಗಳೂರು ಸಾಗುವಾಗ ಕುಣಿಗಲ್ ಮತ್ತು ದೊಡ್ಡಬಳ್ಳಾಪುರವನ್ನು ವಶಪಡಿಸಿಕೊಳ್ಳುತ್ತಾರೆ. ಇನ್ನೂ ಈ ದಾರಿಯಲ್ಲಿ ಸಾಗುವಾಗ ರಣದುಲ್ಲಾ ಖಾನ್, ಶಹಜೀ ಭೋಸ್ಲೇ ಮತ್ತು ಶಿವಪ್ಪ ನಾಯಕರು ಕಲ್ಯಾಣ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿ ಮೊಕ್ಕಾಂ ಹಾಕಿದಾಗ ಅಂದು ರಾತ್ರಿ ಶಿವಪ್ಪ ನಾಯಕರಿಗೆ ಕನಸಿನಲ್ಲಿ ಶ್ರೀ ನರಸಿಂಹಸ್ವಾಮಿ ಪ್ರಕಟಗೊಂಡು ಆ ಪ್ರದೇಶದಲ್ಲಿ ಒಂದು ದೇವಾಲಯವನ್ನು ಕಟ್ಟಲು ಪ್ರೇರೇಪಿಸುತ್ತದೆ.
ಶಿವಪ್ಪ ನಾಯಕರು ಒಬ್ಬ ಮಹಾನ್ ದೈವಭಕ್ತನಾಗಿದ್ದು ಹತ್ತಿರದಲ್ಲಿ ಇರುವ ಹೊನ್ನಾಪುರದ ಬೆಟ್ಟದ ಮೇಲೆ ಒಂದು ದೇವಾಲಯವನ್ನು ಸ್ಥಾಪಿಸುತ್ತಾರೆ. ಇನ್ನೂ ಬೆಂಗಳೂರು ಮೂಲಕ ಶ್ರೀರಂಗಪಟ್ಟಣಕ್ಕೆ ಬಂದು ಆಕ್ರಮಣ ಮಾಡಿದ ರಣದುಲ್ಲಾ ಖಾನಲನ್ ಗೆ ಈ ಸರಿ ಭಾರಿ ನಿರಾಶೆ ಆಗುತ್ತದೆ. ಕಂಠೀರವ ನರಸರಾಜ ಒಡೆಯರು ಅವರು ಶ್ರೀರಂಗಪಟ್ಟಣವನ್ನು ಸಮರ್ಥವಾಗಿ ಸಂರಕ್ಷಿಸುತ್ತಾರೆ. ಒಟ್ಟಿನಲ್ಲಿ ರಣದುಲ್ಲಾ ಖಾನಿನ ಎರಡನೇ ದಂಡ ಯಾತ್ರೆ ಹಲವಾರು ಸಣ್ಣಪುಟ್ಟ ಸಾಮಂತರ ನೆಲಸಮಕ್ಕೆ ಕಾರಣವಾಗಿ ಅಂತಿಮವಾಗಿ ಇಕ್ಕೇರಿ ನಾಯಕರು ಮತ್ತು ಮೈಸೂರಿನ ಒಡೆಯರ್ ಕರ್ನಾಟಕದ ಬಲಿಷ್ಠ ರಾಜರಾಗಿ ಹೊರಹೊಮ್ಮತ್ತಾರೆ.
ಇನ್ನೂ ದೊಡ್ಡಬಳ್ಳಾಪುರ, ತುಮಕೂರು, ಕುಣಿಗಲ್, ಚಿಕ್ಕನಾಯಕನಹಳ್ಳಿ, ರಾಮಗಿರಿದುರ್ಗ ಮತ್ತು ಬೆಂಗಳೂರನ್ನು ಶಹಜೀ ಭೋಸ್ಲೇಗೆ ನೀಡಿದ ಪರಿಣಾಮವಾಗಿ ಶಹಜೀ ಮುಂದಿನ 25 ವರ್ಷಗಳ ಕಾಲ ಬೆಂಗಳೂರನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ನಡೆಸುತ್ತಾನೆ. ಈ ದಂಡ ಯಾತ್ರೆಯಲ್ಲಿ ಇಕ್ಕೇರಿ ಸಂಸ್ಥಾನದ ಪರವಾಗಿ ಭಾಗವಹಿಸಿದ ಶಿವಪ್ಪ ನಾಯಕನಿಗೆ ಅವನ ಸಾಹಸವನ್ನು ಮೆಚ್ಚಿ ಯಲಹಂಕ, ಬೆಂಗಳೂರು ಮತ್ತು ಹೊನ್ನಾಪುರದಲ್ಲಿ ಅಪಾರ ಪ್ರಮಾಣದ ಭೂಮಿಯನ್ನು ರಣದುಲ್ಲಾ ಖಾನ್ ನೀಡುತ್ತಾನೆ. ಇಕ್ಕೇರಿಯ ದೊಡ್ಡಸಂಕಣ್ಣನಾಯಕರ ಪಥದಲ್ಲಿ ಸಾಗುತ್ತ ಶಿವಪ್ಪ ನಾಯಕರು ಈ ಪ್ರದೇಶದಲ್ಲಿ ಮಠ ಮತ್ತು ದೇವಾಲಯಗಳನ್ನು ಕಟ್ಟಿಸಿ ಅವುಗಳ ನಿರ್ವಹಣೆಗಾಗಿ ತನಗೆ ನೀಡಿದ ಭೂಮಿಯನ್ನು ದಾನ ನೀಡುತ್ತಾನೆ.
1640 ರಲ್ಲಿ ಪ್ರತಿಷ್ಟಾಪಿಸಿದ ಈ ಕಂಬದ ಶ್ರೀ ನರಸಿಂಹಸ್ವಾಮಿ ದೇವಾಲಯ ಕಾಲಾಂತರದಲ್ಲಿ ಸೂಕ್ತ ರಾಜಾಶ್ರಯ ಇಲ್ಲದೆ ಜನರಿಂದ ದೂರವಾಗಿ ಕಣ್ಮರೆಯಾಗುತ್ತದೆ. ಆದರೆ ಇತ್ತೀಚೆಗೆ ಹೊನ್ನಾಪುರದ ಸ್ಥಳೀಯ ತರುಣ ಲಿಖಿತ ಈ ಬೆಟ್ಟದಲ್ಲಿ ಸ್ವಚ್ಚತಾ ಕಾರ್ಯವನ್ನು ಕೈಗೊಂಡು ಈ ದೇವಾಲಯವನ್ನು ಮತ್ತೆ ಜನರಿಗೆ ಗೋಚರಿಸಲು ಮುಖ್ಯ ಕಾರಣವಾಗಿದ್ದಾನೆ. ಈ ದೇವಾಲಯವೂ ಪಶ್ಚಿಮಾಭಿಮುಖವಾಗಿ ಸ್ಥಾಪಿಸಿದ್ದು ಸಂಜೆ ಹೊತ್ತಿಗೆ ಸೂರ್ಯನ ಬೆಳಕು ನೇರವಾಗಿ ಕಂಬದ ಮೇಲೆ ಬೀಳುತ್ತದೆ.
ಈ ಬೆಟ್ಟದಲ್ಲಿ ಹಲವಾರು ವಿಗ್ರಹಗಳು ಹೂತು ಹೋಗಿದ್ದು ಇಲ್ಲಿ ಕಾರ್ಯಚರಣೆ ಮಾಡುತ್ತಿರುವ ಲಿಖಿತ ಹಾಗೂ ಅವನ ತಂಡಕ್ಕೆ ದಿನೇದಿನೇ ಹೊಸ ಹೊಸ ಕುರುಹುಗಳು ಪತ್ತೆಯಾಗುತ್ತಿವೆ. ಈ ಬೆಟ್ಟಕ್ಕೆ ಸ್ಥಳೀಯರು ನಾಯಕನ ಬೆಟ್ಟ ಎಂದು ಕರೆಯುತ್ತಿದ್ದು ಈ ಬೆಟ್ಟದಿಂದ ಸಿದ್ಧಗಂಗ ಬೆಟ್ಟ, ಸಿದ್ದರ ಬೆಟ್ಟ, ಶಿವಗಂಗೆ ಬೆಟ್ಟ, ಭೈರವ ದುರ್ಗ, ಸಾವನದುರ್ಗ ಮತ್ತು ಉತ್ತಾರಿ ದುರ್ಗಾ ಸ್ಪಷ್ಟವಾಗಿ ಕಾಣಿಸುತ್ತದೆ. ಈ ಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಕುಣಿಗಲ್ ಮಂಜು ಕ್ಷೇತ್ರ ಕಾರ್ಯಚರಣೆ ನಡೆಸುತ್ತಿದ್ದು ಈ ಕ್ಷೇತ್ರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.
ಸಾಕ್ಷಾ ಟಿವಿಯ ‘ನಾವು ಕೇಳದ ಚರಿತ್ರೆ’ ಅಂಕಣಕಾರ ಅಜಯ್ ಕುಮಾರ್ ಶರ್ಮಾ ಅವರ ಕಿರು ಪರಿಚಯ
Saakshatv Naavu kelada charitre episode1
ಲೇಖನ ಮತ್ತು ಚಿತ್ರಗಳು :-
ಅಜಯ್ ಕುಮಾರ್ ಶರ್ಮಾ
ಇತಿಹಾಸ ಅಧ್ಯಯನಕಾರರು ಮತ್ತು ಪರಿಸರ ಹೋರಾಟಗಾರ
ಶಿವಮೊಗ್ಗ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel