ಕಲಬುರ್ಗಿ: ಆ ಊರಿನ ಗ್ರಾಮಸ್ಥರು ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿದ್ದರು. ಸಂಕ್ರಾಂತಿ ಮಾರನೆ ದಿನ ಕರಿ ಹಿನ್ನೆಲೆಯಲ್ಲಿ ಮೀನು-ಮಾಂಸದ ಅಡುಗೆ ಘಮ ಊರ ತುಂಬೆಲ್ಲಾ ಹರಡಿತ್ತು. ಆದ್ರೆ, ಕರಿ ದಿನ ಆಗಬಾರದ ಅನಾಹುತ ಆಗೇ ಹೋಗಿದೆ. ನಡು ರಸ್ತೇಲಿ ಅಣ್ಣ-ತಮ್ಮ ನೋಡ ನೋಡುತ್ತಿದ್ದಂತೆ ಬೀದಿ ಹೆಣವಾಗಿದ್ದಾರೆ. ಅದೂ ಕೂಡ ಸಿನಿಮಾ ಸ್ಟೈಲಲ್ಲಿ.
ಈ ಭೀಕರ ಜೋಡಿ ಕೊಲೆ ನಡೆದಿರುವುದು ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ತಡಕಲ್ ಗ್ರಾಮದಲ್ಲಿ. ಗ್ರಾಮದ ನಿಲೇಶ್(39) ಮತ್ತು ರಾಜು(31) ಕೊಲೆಯಾದ ಅಣ್ಣ-ತಮ್ಮ.
ಕೂಲಿನಾಲಿ ಮಾಡಿಕೊಂಡು ಹೇಗೋ ಜೀವನ ಸಾಗಿಸುತ್ತಿದ್ದರು. ಅಣ್ಣ ನಿಲೇಶ್ಗೆ ಮದುವೆಯಾಗಿ ಮೂರು ಮಕ್ಕಳಿವೆ. ಮದುವೆ ನಂತರ ಪತ್ನಿ-ಮಕ್ಕಳ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದ. ತಮ್ಮ ರಾಜುಗೆ ಮದುವೆಯಾಗಿಲ್ಲ. ತಾಯಿ ಜತೆ ಗ್ರಾಮದ ಹೊರವಲಯದ ಮನೆಯಲ್ಲಿ ವಾಸವಿದ್ದ.
ಶುಕ್ರವಾರ ಸಂಕ್ರಾಂತಿ ಹಬ್ಬದ ಕರಿ ದಿನ. ಹೀಗಾಗಿ ರಾಜು ಬೆಳಿಗ್ಗೆಯೇ ಮೀನು ತಂದು ಸಾರು ಮಾಡಲು ಅಮ್ಮನಿಗೆ ಕೊಟ್ಟಿದ್ದ. ಮೀನ್ಸಾರು ಊಟಕ್ಕೆ ಅಣ್ಣ ನಿಲೇಶ್ನನ್ನು ಕರ್ಕೊಂಡು ಬರ್ತೀನಿ ಅಂತ ತಮ್ಮ ರಾಜು ಮನೆಯಿಂದ ಊರೊಳಗೆ ಹೋಗಿದ್ದ. ಅಮ್ಮನೂ ಇನ್ನೇನು ಮಕ್ಕಳು ಬಂದೇ ಬಿಟ್ರು ಅಂತ ಮೀನು ಸಾರು ಮಾಡಿ ಮಕ್ಕಳಿಗಾಗಿ ಕಾಯ್ತಾ ಇದ್ರು.
ಆದ್ರೆ, ಅಣ್ಣ ನಿಲೇಶ್ನ ಮನೆಗೆ ಹೋದ ತಮ್ಮ ರಾಜು, ಅಣ್ಣನೊಂದಿಗೆ ಊರ ಹೊರಗಿನ ಮನೆ ಕಡೆ ಹೆಜ್ಜೆ ಹಾಕಿದ್ರು ಅಷ್ಟೇ. ಅಷ್ಟರಲ್ಲೇ ಎಲ್ಲಿದ್ದನೋ ಚಂದ್ರಪ್ಪ ಎಂಬಾತ ಇಬ್ಬರ ಜತೆ ಜಗಳ ತೆಗೆದು ತಲ್ವಾರ್ನಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ಸಂಕ್ರಾಂತಿ ಸಂಭ್ರಮದಲ್ಲಿದ್ದ ಕಲಬುರ್ಗಿಯ ತಡಕಲ್ ಗ್ರಾಮದಲ್ಲಿ ನಡೆದ ಜೋಡಿ ಕೊಲೆ ಬೆಚ್ಚಿ ಬೀಳಿಸುವಂತೆ ಮಾಡಿದೆ.
ಅಕ್ರಮ ಸಂಬಂಧ ಕೊಲೆಗೆ ಶಂಕೆ..!
ಕೊಲೆಯಾದ ನಿಲೇಶ್ ಹಾಗೂ ಕೊಲೆ ಮಾಡಿದ ಚಂದ್ರಪ್ಪ ಒಂದೇ ಊರಿನವರು. ಚಂದ್ರಪ್ಪನ ಸಹೋದರಿ ಜತೆ ನಿಲೇಶ್ ಅಕ್ರಮ ಸಂಬಂಧ ಹೊಂದಿದ್ದನಂತೆ. ಆಕೆಯನ್ನು ನಡುನೀರಲ್ಲಿ ಕೈಬಿಟ್ಟು ಬೇರೊಬ್ಬರನ್ನು ಮದುವೆಯಾಗಿದ್ದ. ಈ ಘಟನೆ ಬಳಿಕ ಚಂದ್ರಪ್ಪನ ಸಹೋದರಿಗೂ ಮದುವೆಯಾಗಿ ಕೆಲ ವರ್ಷಗಳು ಆಗಿದ್ದವು.
ಆದರೆ, ತನ್ನ ತಂಗಿ ಬಾಳು ಹಾಳು ಮಾಡಿದ ಎಂಬ ಸಿಟ್ಟು ಚಂದ್ರಪ್ಪನ್ನು ಕಾಡುತ್ತಲೇ ಇತ್ತು. ಈ ವಿಚಾರವಾಗಿ ಆಗಾಗ ನಿಲೇಶ್ ಹಾಗೂ ಚಂದ್ರಪ್ಪ ಜಗಳವಾಡುತ್ತಿದ್ದರು. ಇಬ್ಬರ ಜಗಳ ಈಗ ಜೋಡಿ ಕೊಲೆಯಲ್ಲಿ ಅಂತ್ಯವಾಗಿದೆ.
ಮಹಗಾಂವ್ ಪೆÇಲೀಸ್ ಠಾಣೆಯಲ್ಲಿ ಜೋಡಿ ಕೊಲೆ ಪ್ರಕರಣ ದಾಖಲಾಗಿದೆ. ಘಟನೆ ನಂತರ ಆರೋಪಿ ಚಂದ್ರಪ್ಪ ತಲೆ ಮರೆಸಿಕೊಂಡಿದ್ದಾನೆ. ಆದರೆ ತಂದೆಯನ್ನು ಕಳೆದುಕೊಂಡ ಮೂರು ಮಕ್ಕಳು ಅನಾಥವಾಗಿವೆ. ಈ ಘಟನೆ ತಡಕಲ್ ಗ್ರಾಮಸ್ಥರಿಗೆ ಸಂಕ್ರಾಂತಿ ಹಬ್ಬದ ಸಂಭ್ರಮ ಬದಲು ಕರಾಳ ದಿನವಾಗಿ ಪರಿಣಮಿಸಿದೆ.