ಮೂರು ವಿಭಾಗಗಳಲ್ಲೂ ಚಿನ್ನದ ಪದಕ – ಕರ್ನಾಟಕಕ್ಕೆ ಹೆಮ್ಮೆಯ ಗೆಲುವು
ಗುಂಟೂರು: ಆಂಧ್ರಪ್ರದೇಶದ ಗುಂಟೂರಿನ ಆಂಧ್ರ ಪ್ರದೇಶ್ STEM ಸ್ಕೂಲ್ನಲ್ಲಿ ಸೆಪ್ಟೆಂಬರ್ 11 ಮತ್ತು 12ರಂದು ನಡೆದ 2026–27ನೇ ಸಾಲಿನ 7ನೇ ರಾಷ್ಟ್ರೀಯ ತ್ರೋಬಾಲ್ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ತಂಡವು ಮೂರು ವಿಭಾಗಗಳಲ್ಲಿ ಭಾಗವಹಿಸಿ, ಮೂರು ವಿಭಾಗಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದೆ.
14, 17 ಹಾಗೂ 19ರ ವಯೋಮಿತಿ ವಿಭಾಗಗಳಲ್ಲಿ ಕರ್ನಾಟಕದ ಆಟಗಾರ್ತಿಯರು ತಮ್ಮ ಕ್ರೀಡಾ ಸಾಮರ್ಥ್ಯವನ್ನು ಮೆರೆದಿದ್ದಾರೆ. 14ರ ವಯೋಮಿತಿ ವಿಭಾಗದಲ್ಲಿ ಕರ್ನಾಟಕ ತಂಡವು ಮಹಾರಾಷ್ಟ್ರ ತಂಡವನ್ನು ಮಣಿಸಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಅದೇ ರೀತಿ 17ರ ವಯೋಮಿತಿ ವಿಭಾಗದಲ್ಲಿ ಆತಿಥೇಯ ಆಂಧ್ರಪ್ರದೇಶ ತಂಡದ ವಿರುದ್ಧ ಗೆಲುವು ಸಾಧಿಸಿ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದೆ.
ಇನ್ನು 19ರ ವಯೋಮಿತಿ ವಿಭಾಗದಲ್ಲಿ ಕರ್ನಾಟಕ ತಂಡವು ತಮಿಳುನಾಡು ತಂಡವನ್ನು ಎದುರಿಸಿ ಜಯ ಸಾಧಿಸುವ ಮೂಲಕ ಚಿನ್ನದ ಪದಕ ಪಡೆದುಕೊಂಡಿದೆ. ಈ ಮೂಲಕ ಮೂರು ವಯೋಮಿತಿ ವಿಭಾಗಗಳಲ್ಲೂ ಕರ್ನಾಟಕದ ತಂಡಗಳು ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರಾಬಲ್ಯವನ್ನು ಪ್ರದರ್ಶಿಸಿವೆ.
ತಂಡದ ಯಶಸ್ಸಿನ ಹಿಂದೆ ತರಬೇತುದಾರರಾದ ಮುನಿರಾಜ್, ಸಂತೋಷ್, ಮುನಿಕೃಷ್ಣ ಮತ್ತು ಮಂಜುನಾಥ್ ಅವರ ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಿದೆ. ನಜ್ಮಾ ಹಾಗೂ ಶೃತಿ ತಂಡದೊಂದಿಗೆ ಮ್ಯಾನೇಜರ್ಗಳಾಗಿ ಕಾರ್ಯನಿರ್ವಹಿಸಿ ಕ್ರೀಡಾಪಟುಗಳಿಗೆ ಅಗತ್ಯ ಸಹಕಾರ ನೀಡಿದ್ದಾರೆ.
ಅದೇ ರೀತಿ ಮೂರು ವಿಭಾಗಗಳ ತಂಡಗಳಿಗೆ 14ರ ವಯೋಮಿತಿಯಲ್ಲಿ ಕುಷಿ ಗೌಡ, 17ರ ವಯೋಮಿತಿಯಲ್ಲಿ ಸೈದಾ ಜಾರ ಅಹಮದ್ ಹಾಗೂ 19ರ ವಯೋಮಿತಿಯಲ್ಲಿ ಪರ್ಲ್ ಅಂಡ್ರೀಯ ನಾಯಕಿಯರಾಗಿ ತಂಡವನ್ನು ಮುನ್ನಡೆಸಿದ್ದಾರೆ.
ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಕರ್ನಾಟಕದ ಮೂರು ತಂಡಗಳೂ ಚಿನ್ನದ ಪದಕ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿರುವುದು ರಾಜ್ಯದ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಯುವ ಕ್ರೀಡಾಪಟುಗಳ ಈ ಸಾಧನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರತಿಭೆಗಳು ಕ್ರೀಡಾ ಕ್ಷೇತ್ರದತ್ತ ಬರಲು ಪ್ರೇರಣೆಯಾಗಲಿದೆ








