ವರುಣಾರ್ಭಟಕ್ಕೆ ಕರುನಾಡು ನಲುಗುತ್ತಿದೆ; ಸರ್ಕಾರಕ್ಕೆ ಅಧಿವೇಶನದ ಚಿಂತೆ, ಮಾಧ್ಯಮಗಳಿಗಿನ್ನೂ ಡ್ರಗ್ಸ್ ನಶೆ ಇಳಿದಿಲ್ಲ:
2018ರಲ್ಲಿ ಕೇರಳ ಕೊಡಗಿನಲ್ಲಿ ಭೀಕರ ಅತಿವೃಷ್ಟಿ ಸಂಭವಿಸಿ ಜಲಪ್ರಳಯವಾಗಿದ್ದು ಆಗಸ್ಟ್ ಮೊದಲ ಎರಡನೇ ವಾರದಲ್ಲಿ. 2019ರಲ್ಲಿ ರಾಜ್ಯದ 10 ಜಿಲ್ಲೆಗಳು ಪ್ರವಾಹಕ್ಕೆ ತತ್ತರಿಸಿದ್ದು ಆಗಸ್ಟ್ ಮೂರನೆಯ ಮತ್ತು ಕೊನೆಯ ವಾರದಲ್ಲಿ. ಈ 2020ಯಲ್ಲಿ ಸೆಪ್ಟೆಂಬರ್ ತಿಂಗಳ ಮೂರನೆ ವಾರದಲ್ಲಿ ಮತ್ತೆ ಉಡುಪಿಯಲ್ಲಿ ಹಾಗೂ ಮಲೆನಾಡಲ್ಲಿ ಜಲಪ್ರವಾಹದ ಭೀತಿ ಎದುರಾಗಿದೆ.
ಉಡುಪಿಯಲ್ಲಿ ನಿನ್ನೆಯಿಂದ ಬಿಟ್ಟೂ ಬಿಡದೇ ಮಳೆಯಾಗುತ್ತಿದೆ. ಎಸ್ ಕೆ ಬಾರ್ಡರ್ ಮಾಳ ಘಾಟ್ ಬಂದ್ ಆಗಿದೆ. ಬ್ರಹ್ಮಾವರದಲ್ಲಿ ಸೀತೆ ಭೋರ್ಗರೆದು ಹರಿದು ರಸ್ತೆ ತೋಟ ಗದ್ದೆ ಬಯಲು ದಿಣ್ಣೆಗಳನ್ನು ಒಂದು ಮಾಡುತ್ತಿದ್ದಾಳೆ. ಇತ್ತ ಇಂದ್ರಾಣಿ ಹೊಳೆ ಅಪಾಯದ ಮಟ್ಟ ಮೀರಿ ಉಕ್ಕುತ್ತಾ ಹಲವು ಕಡೆ ಜನವಸತಿ ಪ್ರದೇಶಗಳನ್ನು ದ್ವೀಪವಾಗಿಸುತ್ತಿದೆ. ಸ್ವರ್ಣಾ ನದಿಯೂ ತನ್ನ ಇಕ್ಕೆಲಗಳನ್ನು ಆಪೋಷನ ತೆಗೆದಕೊಂಡು ಹರಿಯುತ್ತಿದೆ. ಮಣಿಪಾಲ ಉಡುಪಿ ಮಧ್ಯದ ಸಂಪರ್ಕ ಕಡಿತಗೊಂಡಿದೆ. ಕ್ರೇನ್ ಮೂಲಕ ರಕ್ಷಣಾ ಕಾರ್ಯಾಚರಣೆ, ರಸ್ತೆಯಲ್ಲಿ ಬೋಟ್ ಗಳು ಓಡಾಡುವುದು ಇವೆಲ್ಲಾ ಉಡುಪಿಯಲ್ಲೂ ಆಗುತ್ತವೆ ಎಂಬುದನ್ನು ನಂಬಲಾಗುತ್ತಿಲ್ಲ. 40 ವರ್ಷಗಳ ನಂತರ ಉಡುಪಿ ಜಿಲ್ಲೆಯಾದ್ಯಂತ ಈ ಪ್ರಮಾಣದ ಮೇಘಸ್ಫೋಟ ಉಂಟಾಗಿದೆ. ಉಡುಪಿ ಜಿಲ್ಲೆ ನಿಜಕ್ಕೂ ಅಪಾಯದಲ್ಲಿದೆ.
ಮಲೆನಾಡಿನಲ್ಲೂ ಭದ್ರಾ ಅಬ್ಬರಿಸುತ್ತಿದ್ದಾಳೆ. ಭದ್ರಾ ಮುನಿದರೆ ಅದರ ಅವಾಂತರದ ಕಲ್ಪನೆ ಕಿಂಚಿತ್ತಾದರೂ ನಮಗಿರಬೇಕು. ಹೆಬ್ಬಾಳೆ ಸೇತುವೆ ಮುಳುಗಿದೆ. ಚಾರ್ಮಾಡಿ ಕೊಟ್ಟಿಗೆಹಾರಗಳಲ್ಲಿ ಎಡಬಿಡದೇ ಮಳೆಯಾಗುತ್ತಿದೆ. ಕೊಪ್ಪ ಶೃಂಗೇರಿ ಕಳಸ ಹೊರನಾಡುಗಳೂ ಧಾರಾಕಾರ ಕುಂಭದ್ರೋಣ ಮಳೆಗೆ ಸಾಕ್ಷಿಯಾಗುತ್ತಿವೆ.
ದಕ್ಷಿಣ ಕನ್ನಡದ ಮುಲ್ಕಿಯ ಗ್ರಾಮಾಂತರ ಪ್ರದೇಶದ ಕೃಷಿಭೂಮಿ ಮುಳುಗಡೆಯಾಗಿದೆ. ಕಿನ್ನಿಗೋಳಿ ಸೇತುವೆ ಮುಳುಗಿದೆ. ಶಾಂಭವಿ ನದಿಯೂ ಕೆರಳಿ ಹರಿಯುತ್ತಿದೆ. ಬಂಟ್ವಾಳದ ಮಂಗಳ ಪದವುನಲ್ಲಿ ಮನೆಗಳ ಮೇಲೆ ಗುಡ್ಡ ಕುಸಿದಿದೆ.
ಸರ್ಕಾರ ಅಧಿವೇಶನದ ಸಿದ್ಧತೆಯಲ್ಲಿದೆ. ವಿರೋಧ ಪಕ್ಷ ಈಗಷ್ಟೆ ನಿದ್ದೆಯಿಂದೆದ್ದು ಅಧಿವೇಶನದಲ್ಲಿ ಗಲಭೆ ಎಬ್ಬಿಸಲು ಭ್ರಷ್ಟಾಚಾರದ ದಾಖಲೆಗಳನ್ನು ಮಂಜುಗಣ್ಣಲ್ಲಿ ಓದುತ್ತಾ ಕೂತಿದೆ. ಮಾಧ್ಯಮಗಳು ಬಿಡಿ, ಅವಿನ್ನೂ ರಾಗಿಣಿ, ಸಂಜನಾರ ನೆರಳಿನ ಜೂಲು ಬಿಟ್ಟು ಅತ್ತಿತ್ತ ಹಂದಾಡುತ್ತಿಲ್ಲ. ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂದೆ ಕಥೆಯ ಪೋರ್ಸ್ಟ್ ಮಾರ್ಟಂ ಮಾಡಿ ಮುಗಿದಿದ್ರೆ ಸ್ವಲ್ಪ ಉಡುಪಿ ಕಡೆ ನೋಡಿ ಗೆಳೆಯರೇ!
ಅತ್ತ ಮಹಾರಾಷ್ಟ್ರದಲ್ಲೂ ಭಾರೀ ಮಳೆಯಾಗ್ತಿದೆ. ಇದರ ನೇರ ಪರಿಣಾಮ ನಮ್ಮ ಉತ್ತರ ಕರ್ನಾಟಕದ ಬೆಳಗಾವಿ, ಭಾಗಲಕೋಟೆ ಮುಂತಾದ ಜಿಲ್ಲೆಗಳ ಮೇಲಾಗುತ್ತದೆ. ರಾಜ್ಯದಲ್ಲಿ ಇನ್ನೂ ಎರಡು ಮೂರು ದಿನ ಹೀಗೆ ಮಳೆಯಾದರೇ ಪರಿಸ್ಥಿತಿ ಸಂಪೂರ್ಣ ಹದಗೆಡುತ್ತದೆ. ನಿಮಗೆ ಗೊತ್ತಲ್ಲ ಕರ್ನಾಟಕದಲ್ಲಿ ನೆರೆ ಬಂದು ನಷ್ಟವಾದರೇ ಕೇಂದ್ರದ ಪ್ರಭುಗಳೇನೂ ಕಮಕ್ ಕಿಮಕ್ಕೆನ್ನುವುದಿಲ್ಲ. 2018ರ ನೆರೆ ಪರಿಹಾರವೇ ಇನ್ನೂ ಬಂದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರ ಗ್ರಹಗತಿಗೆ ಒಕ್ಕರಿಸಿಕೊಂಡಿರುವ ಶನಿ ಪರಮಾತ್ಮ ಇನ್ನೂ ಹೆಗಲು ಬಿಟ್ಟು ಇಳಿದ ಹಾಗೇ ಕಾಣ್ತಿಲ್ಲ. ಭಕ್ತ ಮಹಾಗಣಗಳ ಅಹೋರಾತ್ರಿ ಭಜನೆ ಪಾರಾಯಣ ಈ ಜನ್ಮದಲ್ಲಿ ಮುಗಿಯುವ ಹಾಗೆಯೂ ತೋರುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯವನ್ನು ಆ ಜಗನ್ಮಾತೆಯೇ ಕಾಪಾಡಬೇಕು.
ಅಂದಹಾಗೆ ಉಡುಪಿಯಲ್ಲಾಗಲೀ ದಕ್ಷಿಣ ಕನ್ನಡದಲ್ಲಾಗಲೀ ಒಟ್ಟಾರೆ ಕರಾವಳಿ ಪ್ರದೇಶದಲ್ಲಿ, ಜೊತೆಗೆ ಮಲೆನಾಡಿನ ಘಟ್ಟದಲ್ಲಿ ಇತ್ತೀಚೆಗಿನ ವರ್ಷದಲ್ಲಿ ಯಾಕೆ ಈ ಪರಿ ಮಳೆಯಾಗುತ್ತಿದೆ? ಯಾಕೆ ಗುಡ್ಡ ಕುಸಿಯುತ್ತಿದೆ? ಯಾಕೆ ಪ್ರವಾಹ ಏರ್ಪಡುತ್ತಿದೆ? ಅನ್ನೋದನ್ನು ಯಾರಾದರೂ ಬುದ್ದಿವಂತರು ಆಲೋಚಿಸಿದರೇ ಸ್ವಲ್ಪ ಬನ್ನಿ ಚರ್ಚೆ ಮಾಡೋಣ. ಪಶ್ಚಿಮ ಘಟ್ಟ ಇವರಪ್ಪನ ಮನೆ ಆಸ್ತಿ ಅನ್ನುವ ಹಾಗೆ ಈ ದರಿದ್ರ ಸರ್ಕಾರಗಳು ವರ್ತಿಸಿದವಲ್ಲ, ಬುತ್ತಿ ಇನ್ನೂ ಮುಗಿದಿಲ್ಲ. ನೀವು ತಿಂದು ಮುಗಿಸಿ ನಾವು ಅನುಭವಿಸಲು ಸಿದ್ಧ.
–ವಿಭಾ (ವಿಶ್ವಾಸ್ ಭಾರದ್ವಾಜ್)
***