ಕೋವಿಡ್ ಸಂಕಷ್ಟ – ಬಡವರಿಗಾಗಿ ಉಚಿತ ಕೋವಿಡ್ ಆಕ್ಸಿಜನ್ ಕೇರ್ ಸೆಂಟರ್ ಸ್ಥಾಪಿಸಲು ಮುಂದಾದ ಕವಿರಾಜ್ ಮತ್ತು ತಂಡ..!
ದೇಶದಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಗೆ ಜನರು ಅದ್ರಲ್ಲು ಬಡವರು ತತ್ತರಿಸಿಹೋಗಿದ್ದಾರೆ. ಒಂದೆಡೆ ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ..
ಈ ನಡುವೆ ಸ್ಯಾಂಡಲ್ ವುಡ್ , ಬಾಲಿವುಡ್ , ಟಾಲಿವುಡ್ , ಕಾಲಿವುಡ್ ನ ಅನೇಕ ಸಿನಿಮಾ ತಾರೆಯರು ಬಡವರಿಗೆ , ಕೋವಿಡ್ ಸೋಂಕಿತರಿಗೆ ತಮಗೆ ತೋಚಿದ ಸಹಾಯಗಳನ್ನ ಮಾಡುತ್ತಿದ್ದಾರೆ. ಇದೀಗ ಕನ್ನಡ ಚಿತ್ರರಂಗದ ಚಿತ್ರಸಾಹಿತಿ ಕವಿರಾಜ್ ಅವರು ತಮ್ಮ ಸಹಚರರ ಜೊತೆ ಸೇರಿ ಬಡವರಿಗೆ ಉಚಿತ ಕೋವಿಡ್ ಆಕ್ಸಿಜನ್ ಕೇರ್ ಸೆಂಟರ್ ಆರಂಭಿಸಲು ಮುಂದಾಗಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನ ಹಾಕಿದ್ದ ಕವಿರಾಜ್ ಅವರು ‘ಪರಿಸ್ಥಿತಿ ಬಹಳ ಕೈ ಮೀರಿದೆ. ಮುಂದೆ ಇನ್ನೂ ಕಠಿಣ ಆಗುವ ಸೂಚನೆಯಿದೆ. ಇಂತಾ ಹೊತ್ತಲ್ಲಿ ವ್ಯವಸ್ಥೆಯನ್ನು ದೂರುತ್ತ ಕೂರುವುದಕ್ಕಿಂತಾ, ಒಂದು ಕಲ್ಯಾಣ ಮಂಟಪ/ ಶೆಡ್ / ಖಾಲಿ ಬಿಲ್ಡಿಂಗ್/ ಶಾಲಾ ಕಾಲೇಜ್ ಬಿಲ್ಡಿಂಗ್ ತರಹದ ಯಾವುದಾದರೂ ಒಂದು ಜಾಗದಲ್ಲಿ ನಾವೇ ಅಂದರೆ ಒಂದಷ್ಟು ಸಮಾನ ಮನಸ್ಕ ಜನರೇ ಸೇರಿ ಒಂದಷ್ಟು ಆಕ್ಸಿಜನ್ ಸಮೇತ ಬೆಡ್ ಗಳನ್ನು ಬಡವರಿಗೆ ಏಕೆ ಒದಗಿಸಬಾರದು ಎಂಬ ಚಿಂತನೆ ಬಂದಿದೆ. ಸಮಾನ ಮನಸ್ಕರು, ಕೈ ಜೋಡಿಸುವ ಆಸಕ್ತಿ ಇರುವವರು ಸಾಧ್ಯಾಸಾಧ್ಯತೆ , ಸವಾಲು, ಪರಿಕರಗಳ ಲಭ್ಯತೆ ( ಕಟ್ಟಡ, ಆಕ್ಸಿಜನ್ etc.. ) ಬಗ್ಗೆ ಸಲಹೆ ಸೂಚನೆ ನೀಡಿ’ ಎಂದು ಮನವಿ ಮಾಡಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೇ 07ರಂದು ಫೇಸ್ಬುಕ್ ಪೋಸ್ಟ್ ಮಾಡಿರುವ ಕವಿರಾಜ್, ‘ನಾವೆಲ್ಲಾ ಸೇರಿ ಬಡವರಿಗೆ ‘ಉಚಿತ ಕೋವಿಡ್ ಆಕ್ಸಿಜನ್ ಕೇರ್ ಸೆಂಟರ್’ ಮಾಡುವ ಚಿಂತನೆಗೆ ಹಲವರು ಕೈ ಜೋಡಿಸುತ್ತಿದ್ದು ಆಶಾದಾಯಕ ಪ್ರಗತಿಯಾಗಿದೆ. ಆಕ್ಸಿಜನ್ ಪೂರೈಕೆಯ ವ್ಯವಸ್ಥೆ ಮೊದಲ ಹಂತಕ್ಕೆ ಆಗಿದೆ. ಕೋಣನಕುಂಟೆ ಬಳಿ ಒಳ್ಳೆಯ ಸ್ಥಳ ದೊರಕಿದೆ, ಬಿಬಿಎಂಪಿ ಆರೋಗ್ಯ ಅನುಮತಿ ಮತ್ತು ಸಹಕಾರದ ಭರವಸೆ ಸಿಕ್ಕಿದೆ’ ಎಂದಿದ್ದಾರೆ.
ಆದರೆ ‘ಯಾರಾದರೊಬ್ಬರು ಸಹೃದಯಿ ವೈದ್ಯರು ನಮ್ಮ ಜೊತೆ ಕೈ ಜೋಡಿಸಬೇಕು .ದಿನಕ್ಕೆ ಒಂದು ಭೇಟಿ ಕೊಟ್ಟು ಪರಿಶೀಲಿಸುವಂತಾದರು ಸಾಕು. ಅವರಿಗೆ ಗೌರವಧನವನ್ನು ನೀಡಬಹುದು. ಅಂತವರು ಯಾರಾದರು ನಿಮ್ಮ ಬಳಗದಲ್ಲಿದ್ದರೆ ತಿಳಿಸಿ. ನಮ್ಮ ಜೊತೆ ಯಾವುದೇ ರೀತಿಯಲ್ಲಿ ಕೈ ಜೋಡಿಸಲು ಆಸಕ್ತಿ ಇರುವವರೆಲ್ಲರಿಗೂ ಸ್ವಾಗತ’ ಎಂದಿದ್ದಾರೆ.