ಮದ್ಯ ನೀತಿಯಡಿ ಭ್ರಷ್ಟಾಚಾರ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಜೈಲು ಪಾಲಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಲ್ಲಿಂದಲೇ ಆದೇಶ ಹೊರಡಿಸಿದ್ದಾರೆ.
ಇಡಿ ಕಸ್ಟಡಿಯಲ್ಲಿರುವ ಕೇಜ್ರಿವಾಲ್ ಜೈಲಿನಲ್ಲಿಯೇ ಮೊದಲ ಸರ್ಕಾರಿ ಆದೇಶ ಹೊರಡಿಸಿದ್ದಾರೆ. ಜಲ ಸಚಿವಾಲಯಕ್ಕೆ ಸಂಬಂಧಿಸಿದ ಆದೇಶವೊಂದನ್ನು ಅವರು ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ. ಆದೇಶದ ಸೂಚನೆಯನ್ನು ದೆಹಲಿ ಸರ್ಕಾರದ ಸಚಿವೆ ಅತಿಶಿ ಅವರಿಗೆ ಕಳುಹಿಸಲಾಗಿದೆ. ಕೇಜ್ರಿವಾಲ್ ಮಾರ್ಚ್ 28ರ ವರೆಗೂ ಇಡಿ ಬಂಧನದಲ್ಲಿಯೇ ಇರಲಿದ್ದಾರೆ.
ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿ, ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಜೈಲಿನಿಂದಲೇ ಸರ್ಕಾರ ನಡೆಸುತ್ತೇನೆ ಎಂದು ಹೇಳಿದ್ದರು.
ಮಾರ್ಚ್ 21 ರಂದು ರಾಷ್ಟ್ರ ರಾಜಧಾನಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿನ ಕೇಜ್ರಿವಾಲ್ ಅಧಿಕೃತ ನಿವಾಸದಲ್ಲಿ ಶೋಧದ ನಂತರ ಅಕ್ರಮ ಹಣ ವರ್ಗಾವಣೆ ತಡೆ ಕಾನೂನಿನಡಿಯಲ್ಲಿ ಇಡಿ ಬಂಧಿಸಿತ್ತು. ಆಪಾದಿತ ಮದ್ಯ ಹಗರಣದಲ್ಲಿ ಅವರ ಪಾತ್ರದ ಕುರಿತು ವಿಚಾರಣೆಗಾಗಿ ಅವರನ್ನು ವಶಕ್ಕೆ ಪಡೆಯಲಾಗಿದೆ.
ಆದರೆ, ಇಲ್ಲಿಯವರೆಗೆ ಯಾವುದೇ ಪ್ರಧಾನಿಯಾಗಲಿ, ಮುಖ್ಯಮಂತ್ರಿಯಾಗಲಿ ಜೈಲಿನಲ್ಲಿದ್ದುಕೊಂಡು ಸರ್ಕಾರ ನಡೆಸಿರಲಿಲ್ಲ. ಈಗ ಕೇಜ್ರಿವಾಲ್ ಅಲ್ಲಿದ್ದುಕೊಂಡೇ ಆಡಳಿತ ನಡೆಸುತ್ತಿದ್ದಾರೆ.