ರೈಲಿನಿಂದ ಇಳಿಯುವ ಸಂದರ್ಭದಲ್ಲಿ ಅಚಾನಕ್ಕಾಗಿ ತಾಯಿಯ ಕೈಯಿಂದ ಜಾರಿ ನಾಲ್ಕು ತಿಂಗಳ ಹಸುಗೂರು ರೈಲ್ವೇ ಹಳಿಗಳ ಪಕ್ಕದಲ್ಲಿದ್ದ ಮೋರಿಗೆ ಬಿದ್ದು ಕೊಚ್ಚಿ ಹೋಗಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಠಾಕುರ್ಲಿ ಮತ್ತು ಕಲ್ಯಾಣ್ ರೈಲು ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದೆ. ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರವನ್ನು ಕೂಡ ಸ್ಥಗಿತಗೊಳಿಸಲಾಗಿದೆ. ಅದರಂತೆ ನಿನ್ನೆ ಮುಂಬಯಿನಿಂದ ಹೊರಟಿದ್ದ ರೈಲು ವಿಪರೀತ ಮಳೆಯಿಂದಾಗಿ ಠಾಕುರ್ಲಿ ಮತ್ತು ಕಲ್ಯಾಣ್ ರೈಲು ನಿರ್ದಾಣಗಳ ಮಧ್ಯೆ ನಿಂತಿತ್ತು. ಮುಂದೆ ಸಂಚರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರೈಲಿನಿಂದ ಇಳಿಯುತ್ತಿದ್ದರು. ಈ ಸಂದರ್ಭದಲ್ಲಿ ಮಹಿಳೆಯ ಕೈಯಿಂದ ಮಗು ಜಾರಿ ಪಕ್ಕದಲ್ಲಿಯೇ ಇದ್ದ ಚರಂಡಿ ನಾಲೆಗೆ ಬಿದ್ದಿದೆ. ಮಳೆ ನೀರಿನಿಂದ ರಭಸವಾಗಿ ಹರಿಯುತ್ತಿರುವ ನಾಲೆಯಲ್ಲಿ ಮಗು ತಾಯಿಯ ಕಣ್ಣೆದುರೇ ಕೊಚ್ಚಿ ಹೋಗಿದೆ. ಮಗುವನ್ನು ಕಳೆದುಕೊಂಡ ತಾಯಿಯ ರೋಧನೆ ಮುಗಿಲು ಮುಟ್ಟಿತ್ತು. ರೈಲಿನ ಮುಂದೆಯೇ ತಾಯಿ ಸಹಾಯಕ್ಕಾಗಿ ಗೋಳಾಡುತ್ತಿದ್ದರು.
ಈ ದೃಶ್ಯದಲ್ಲಿ ಒಬ್ಬರಿಗೆ ನಡೆದು ಹೋಗುವಷ್ಟು ಮಾತ್ರ ಜಾಗವಿದೆ. ಇಂತಹ ಕಡಿದಾದ ಸ್ಥಳದಲ್ಲಿ ಮಹಿಳೆ ಹೋಗುತ್ತಿದ್ದಾಗ ಕಾಲು ಜಾರಿದೆ. ಹೀಗಾಗಿ ಮಗು ನಾಲೆಗೆ ಬಿದ್ದಿದೆ. ಹಸುಗೂಸು ನೀರಿನಲ್ಲಿ ಕೊಚ್ಚಿ ಹೋಗಿರುವುದನ್ನು ಸಹ ಪ್ರಯಾಣಿಕರು ನೋಡಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಘಟನೆಗೆ ಸಿಎಂ ಏಕನಾಥ್ ಶಿಂಧೆ ತೀವ್ರ ಸಂತಾಪ ಸೂಚಿಸಿದ್ದಾರೆ