ಪ್ರಫುಲ್ಲ ಮುಂಜಾವಿನ ವೇಳೆಯಲ್ಲಿ ನಿಲ್ದಾಣ ಬಿಟ್ಟ ರೈಲು; ಒಂದು ಮನಮೋಹಕ ಭಾವಚಿತ್ರದ ರಸಗ್ರಹಣ
ಈ ಮೇಲಿನ ಚಿತ್ರ ನೋಡಿದರೆ ನಿಮಗೆ ತಕ್ಷಣಕ್ಕೆ ಇದೊಂದು ಪೋರ್ಟ್ ರೈಟ್ ಇರಬಹುದೇನೋ ಎನ್ನಿಸುತ್ತದೆ. ಉಹೂಂ ಇದು ಪೋರ್ಟ್ ರೈಟ್ ಅಥವಾ ಚಿತ್ರಪಟವಲ್ಲ. ಇದು ರೈಲ್ವೇ ನಿಲ್ದಾಣವೊಂದರ ಫೋಟೋ. ಹಾಗಂತ ಇದು ಯಾವುದೋ ಕೊರಿಯನ್ ಕಲಾತ್ಮಕ ಸಿನಿಮಾವೊಂದರ ಕ್ಲೈಮ್ಯಾಕ್ಸ್ ಸೀನ್ ನ ಚಿತ್ರವೇನೋ ಅಥವಾ ಅಲ್ ಜಜೀರಾ ವಾಹಿನಿಯ ಡಾಕ್ಯುಮೆಂಟರಿ ದೃಶ್ಯದ ಫ್ಲಾಶ್ ಕಟ್ ಎಂದುಕೊಳ್ಳುತ್ತೀರಾ! ಇಲ್ಲ ಅದೂ ಸಹ ಅಲ್ಲ. ಇದು ನಮ್ಮದೇ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಬಕ ರೈಲ್ವೇ ನಿಲ್ದಾಣದಲ್ಲಿ ಕ್ಲಿಕ್ಕಿಸಿದ ಫೋಟೋ ಎಂದರೆ ನಂಬುತ್ತೀರಾ? ಯೆಸ್! ನಿಮಗೆ ಆಶ್ಚರ್ಯವಾದರೂ ಇದೇ ಸತ್ಯ.
ಕ್ಯಾಮರಾ ಅನ್ನುವ ಮಾಯಾಪೆಟ್ಟಿಗೆಯ ಗರ್ಭದೊಳಗೊಂದು ಅಪ್ರತಿಮವಾದ ಅನುಪಮ ಸೌಂದರ್ಯದ ಭಾವಚಿತ್ರವನ್ನು ತುಂಬಿಸಿ ಪ್ರಸವಿಸುವುದು ಅಷ್ಟು ಸುಲಭ ಸಾಧ್ಯವಲ್ಲ. ಅದು ಭಾವಚಿತ್ರ ಸೆರೆಹಿಡಿಯುವವನ ಅನನ್ಯ ದೃಷ್ಟಿಕೋನ ಮತ್ತು ವಿಶಿಷ್ಟ ಭಾವತಂತುಗಳನ್ನು ಪ್ರತಿನಿಧಿಸುವ ಕಠಿಣ ತಪಸ್ಸು. ಒಂದು ಅದ್ಭುತವೆನಿಸುವ ಫ್ರೇಮ್ ಒಳಗೆ ಹಲವು ಬಗೆಯ ಸೌಂದರ್ಯವನ್ನು ಅಳವಡಿಸುವುದು ಕವಿ ಮನಸಿನ, ಕಲಾತ್ಮಕ ಒಳನೋಟವಿರುವ ಭಾವುಕ ಜೀವಿಯಿಂದ ಮಾತ್ರವೇ ಸಾಧ್ಯ.
ಈ ಒಂದು ಅವರ್ಣನೀಯ ಚಿತ್ರಪಟದಲ್ಲಿ ಅದೆಷ್ಟು ಸ್ನಿಗ್ಧ, ಪ್ರಶಾಂತ ಮತ್ತು ಮನಮೋಹಕ ಸೌಂದರ್ಯ ಅಡಗಿದೆ! ಸುಂದರ ಪ್ರಫುಲ್ಲತೆ
ಯ ಮುಂಜಾವು, ಅಸ್ತಂಗಿಸುತ್ತಿರುವ ತುಂಬು ಚಂದಿರ, ನಿಲ್ದಾಣ ಬಿಟ್ಟು ಹೊರಡಲಿರುವ ರೈಲು, ಭಾಸ್ಕರನ ಮೆರವಣಿಗೆಗೆ ತಯಾರಾಗಿ ಕೆಂಪೇರಿದ ಗಗನ, ವಿಭಾವರಿಯೊಡನೆ ಮುಸುಕಿನ ಕಾಳಗದಲ್ಲಿ ದಿಗ್ವಿಜಯಗೈದ ಮಬ್ಬಡರಿದ ಹಸಿರ ಪ್ರಕೃತಿ, ಹಾವಿನಂತೆ ಹರಿದ ರೈಲು ಕಂಬಿಗಳು, ಸ್ತಬ್ಧವಾದ ನಿರ್ಮಲ, ನಿರ್ಲಿಪ್ತ ಹಾಗೂ ಅಷ್ಟೇ ಉತ್ಕಟ ಲಾವಣ್ಯವನ್ನು ಪಸರಿಸುವ ಮನೋಜ್ಞ ನೇಸರ ಇದೆಲ್ಲವನ್ನು ಒಂದೇ ಫ್ರೇಮಿನಲ್ಲಿ ಕೂರಿಸುವುದು ಅದೆಂಥಾ ಸೃಜನಾತ್ಮಕ ಕಾರ್ಯವಲ್ಲವೇ!
ಪುತ್ತೂರಿನ ಕಬಕ ರೈಲ್ವೇ ನಿಲ್ದಾಣದ ರೈಲ್ವೇ ಅಧಿಕಾರಿ ಶ್ರೀಪಾದ ಚಡಗ ಕ್ಲಿಕ್ಕಿಸಿದ ಈ ಚಿತ್ರ ರೈಲು ಮತ್ತು ರೈಲು ನಿಲ್ದಾಣಗಳೊಟ್ಟಿಗೆ ಬೆಸೆದುಕೊಂಡ ನಮ್ಮೆಲ್ಲರ ಅದೆಷ್ಟೋ ಸ್ಮರಣೀಯ ಸಂಗತಿಗಳನ್ನು ಮತ್ತೆ ಮೆಲುಕು ಹಾಕುವಂತಿದೆ. ಈ ಅಪರೂಪದ ಅಪೂರ್ವ ಅನಿರ್ವಚನೀಯ ಆನಂದ ನೀಡುವ ಚಿತ್ರಪಟ ಸೃಷ್ಟಿಸಿದ ಆ ಅಧಿಕಾರಿಗೊಂದು ಸಾವಿರದ ಶರಣು.