ಅರುಣಾಚಲ ಪ್ರದೇಶದಲ್ಲಿ ಕಾಣೆಯಾದ ಯುವಕರನ್ನು ಭಾರತಕ್ಕೆ ಹಸ್ತಾಂತರಿಸಲಾಗುವುದು – ಚೀನಾ
ಬೀಜಿಂಗ್, ಸೆಪ್ಟೆಂಬರ್08: ಅರುಣಾಚಲ ಪ್ರದೇಶದಲ್ಲಿ ನಾಪತ್ತೆಯಾದ ಐವರು ಯುವಕರನ್ನು ಪತ್ತೆ ಮಾಡಲಾಗಿದೆ ಎಂದು ಚೀನಾ ದೃಢಪಡಿಸಿದೆ ಮತ್ತು ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಮುಂದಿನ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಮತ್ತು ಅರುಣಾಚಲ ಪ್ರದೇಶದ ಸಂಸದ ಕಿರೆನ್ ರಿಜಿಜು ಹೇಳಿದ್ದಾರೆ.
ಕಿರೆನ್ ರಿಜಿಜು ಅವರು ಈ ಕುರಿತು ಟ್ವೀಟ್ ಮಾಡಿದ್ದು, ಭಾರತೀಯ ಸೇನೆಯು ಕಳುಹಿಸಿದ ಹಾಟ್ಲೈನ್ ಸಂದೇಶಕ್ಕೆ ಚೀನಾದ ಪಿಎಲ್ಎ ಪ್ರತಿಕ್ರಿಯಿಸಿದೆ. ಅರುಣಾಚಲ ಪ್ರದೇಶದಿಂದ ಕಾಣೆಯಾದ ಯುವಕರನ್ನು ಪತ್ತೆ ಮಾಡಲಾಗಿದೆ ಎಂದು ಚೀನಾ ದೃಢಪಡಿಸಿದ್ದಾರೆ. ವ್ಯಕ್ತಿಗಳನ್ನು ನಮ್ಮ ಪ್ರಾಧಿಕಾರಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ.
ಈ ಮೊದಲು ಅರುಣಾಚಲದ ಐವರು ಯುವಕರನ್ನು ನಮ್ಮ ಸೇನೆ ಅಪಹರಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದ ಚೀನಾ ಅರುಣಾಚಲ ಪ್ರದೇಶವೆಂದು ಕರೆಯಲಾಗುವ ಭೂಭಾಗವನ್ನು ನಾವು ಗುರುತಿಸಿಲ್ಲ. ಈ ಪ್ರಾಂತ್ಯ ಚೀನಾದ ದಕ್ಷಿಣ ಟಿಬೆಟ್ ಗೆ ಸೇರಿದ ಪ್ರದೇಶ ಎಂದು ಉದ್ಧಟತನ ತೋರಿತ್ತು.
ಚೀನಾ-ಭಾರತ ಗಡಿಯಲ್ಲಿರುವ ಸುಬನ್ಸಿರಿ ಜಿಲ್ಲೆಯ ಕಾಡಿನಲ್ಲಿ ಬೇಟೆಯಾಡಲು ಹೋಗಿದ್ದ ಐದು ಜನರನ್ನು ಚೀನಾದ ಮಿಲಿಟರಿ ಅಪಹರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದರು.