Morbi Bridge Accident: ದುರ್ಘಟನೆ ನೆನೆದು ಭಾವುಕರಾದ ಪ್ರಧಾನಿ ಮೋದಿ…
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ ಅಂದರೇ ಏಕತಾ ದಿವಸ್ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ನ ಕೆವಾಡಿಯಾವನ್ನು ತಲುಪಿದ್ದಾರೆ. ಸೋಮವಾರ ‘ಉಕ್ಕಿನ ಮನುಷ್ಯ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಅವರು ಮೋರ್ಬಿ ಸೇತುವೆ ಅಪಘಾತವನ್ನ ನೆನೆದು ಭಾವುಕರಾಗಿದ್ದಾರೆ. ನಂತರ ತಮ್ಮ ಭಾಷಣದಲ್ಲಿ ಮಾತನಾಡಿದ ಮೋದಿ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ನಡೆಯುತ್ತಿರುವ ರಕ್ಷಣಾ ಕಾರ್ಯ ಮತ್ತು ಸರ್ಕಾರದ ಪ್ರಯತ್ನಗಳ ಬಗ್ಗೆ ತಿಳಿಸಿದ್ದಾರೆ.
“ನಾನು ಏಕತಾ ನಗರದಲ್ಲಿ ಇದ್ದೇನೆ, ಆದರೇ ನನ್ನ ಹೃದಯ ಮೋರ್ಬಿ ಸಂತ್ರಸ್ತರೊಂದಿಗೆ ಇದೆ. ನನ್ನ ಜೀವನದಲ್ಲಿ ನಾನು ಅಂತಹ ನೋವನ್ನು ಅಪರೂಪವಾಗಿ ಅನುಭವಿಸಿದ್ದೇನೆ. ಒಂದೆಡೆ ಕರುಣೆ ತುಂಬಿದ ಸಂಕಟದ ಹೃದಯ ಇನ್ನೊಂದೆಡೆ ಕರ್ತವ್ಯದ ಹಾದಿ. ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ” ಎಂದು ಮೋದಿ ಹೇಳಿದ್ದಾರೆ.
ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಮೋರ್ಬಿಯಲ್ಲಿ ‘ಝುಲ್ಟೋ ಪುಲ್’ ಎಂದು ಕರೆಯಲ್ಪಡುವ ತೂಗು ಸೇತುವೆ ಕುಸಿದಿದೆ. ಅಪಘಾತದ ಸಮಯದಲ್ಲಿ ಸೇತುವೆಯ ಮೇಲೆ ಸುಮಾರು 500 ಜನರು ನಿಂತಿದ್ದರು ಎಂದು ವರದಿಯಾಗಿವೆ. ಇದುವರೆಗೆ 177 ಜನರನ್ನು ರಕ್ಷಿಸಲಾಗಿದೆ. ಸೇತುವೆ ಅಪಘಾತದಲ್ಲಿ 132 ಮಂದಿ ಸಾವನ್ನಪ್ಪಿದ್ದಾರೆ ಎಂದು ಗುಜರಾತ್ ಗೃಹ ಸಚಿವ ಹರ್ಷ ಸಾಂಘ್ವಿ ಮಾಹಿತಿ ನೀಡಿದ್ದಾರೆ.
ಗುಜರಾತ್ ಸರ್ಕಾರ ನಿನ್ನೆ ಸಂಜೆಯಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಕೇಂದ್ರ ಸರ್ಕಾರದಿಂದ ಗುಜರಾತ್ ಸರ್ಕಾರಕ್ಕೆ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ. ಎನ್ಡಿಆರ್ಎಫ್ ಮತ್ತು ಸೇನೆಯನ್ನು ನಿಯೋಜಿಸಲಾಗಿದೆ. ನೌಕಾಪಡೆ, ಎನ್ಡಿಆರ್ಎಫ್, ವಾಯುಪಡೆ ಮತ್ತು ಸೇನೆಯು ವೇಗವಾಗಿ ತಲುಪಿದೆ, 200 ಕ್ಕೂ ಹೆಚ್ಚು ಜನರು ಇಡೀ ರಾತ್ರಿ ಶೋಧನೆ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಕೆಲಸ ಮಾಡಿದ್ದಾರೆ’ ಎಂದು ಸಾಂಘ್ವಿ ಹೇಳಿದ್ದರು.
Morbi Bridge Accident: An emotional PM Modi…