ಬೆಂಗಳೂರು: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅದ್ದೂರಿ ಚಾಲನೆಯ ಬೆನ್ನಲ್ಲೇ ವೇದಿಕೆಯಲ್ಲಿ ವ್ಯಕ್ತವಾದ ರಾಜಕೀಯ ಹೇಳಿಕೆಗಳು ಈಗ ತೀವ್ರ ಸ್ವರೂಪದ ಚರ್ಚೆಗೆ ಗ್ರಾಸವಾಗಿದೆ. ಚಿತ್ರೋತ್ಸವದ ರಾಯಭಾರಿಯಾಗಿರುವ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರೆ, ಹಿರಿಯ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಅವರು ಪ್ರಕಾಶ್ ರಾಜ್ ಹೇಳಿಕೆಯನ್ನು ಕಟುವಾಗಿ ಟೀಕಿಸಿ ತಿರುಗೇಟು ನೀಡಿದ್ದಾರೆ. ಈ ಇಬ್ಬರು ದಿಗ್ಗಜರ ನಡುವಿನ ವಾಕ್ಸಮರ ಚಲನಚಿತ್ರೋತ್ಸವದ ಅಂಗಳದಲ್ಲಿ ಹೊಸ ಸಂಚಲನ ಮೂಡಿಸಿದೆ.
ವಿವಾದದ ಮೂಲ ಪ್ರಕಾಶ್ ರಾಜ್ ಹೇಳಿಕೆ
ಚಿತ್ರೋತ್ಸವದ ಉದ್ಘಾಟನಾ ವೇದಿಕೆಯಲ್ಲಿ ಮಾತನಾಡಿದ್ದ ಪ್ರಕಾಶ್ ರಾಜ್, ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ತಡೆ ಒಡ್ಡಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಸಾಂಸ್ಕೃತಿಕ ವೇದಿಕೆಗಳಲ್ಲಿ ಇಂತಹ ರಾಜಕೀಯ ಹಸ್ತಕ್ಷೇಪ ದುರಂತ ಎಂದು ಬಣ್ಣಿಸಿದ್ದ ಅವರು, ವಿಜಯನಗರದ ಅಂಕಸಮುದ್ರ ಪಕ್ಷಿಧಾಮದ ನಿದರ್ಶನ ನೀಡಿ ಕವನ ವಾಚಿಸಿದ್ದರು. ಪಕ್ಷಿಗಳು ಹೇಗೆ ಗಡಿಗಳ ಹಂಗಿಲ್ಲದೆ ಹಾರಾಡುತ್ತವೆಯೋ, ಹಾಗೆಯೇ ಕಲೆಗೂ ಗಡಿಗಳಿರಬಾರದು. ಪ್ಯಾಲೆಸ್ತೀನ್ ಸಿನಿಮಾಗಳ ಮೇಲಿನ ನಿರ್ಬಂಧವನ್ನು ರಾಜ್ಯ ಸರ್ಕಾರ ಖಂಡಿಸಬೇಕು ಮತ್ತು ಇಂತಹ ನಡೆಗಳನ್ನು ಪ್ರತಿರೋಧಿಸಬೇಕು ಎಂದು ಸಿಎಂ ಸಿದ್ಧರಾಮಯ್ಯ ಅವರ ಸಮ್ಮುಖದಲ್ಲೇ ಮನವಿ ಮಾಡಿದ್ದರು.
ನಾಗೇಂದ್ರ ಪ್ರಸಾದ್ ಖಾರವಾದ ಪ್ರತಿಕ್ರಿಯೆ
ಪ್ರಕಾಶ್ ರಾಜ್ ಅವರ ಈ ಹೇಳಿಕೆಗೆ ಆರ್ ಕನ್ನಡ ವಾಹಿನಿಯ ಸಂದರ್ಶನದಲ್ಲಿ ಪ್ರತಿಕ್ರಿಯಿಸಿರುವ ಗೀತಸಾಹಿತಿ ವಿ. ನಾಗೇಂದ್ರ ಪ್ರಸಾದ್, ಪ್ರಕಾಶ್ ರಾಜ್ ಮಾತುಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಬೇಡಿ ಎಂದು ನೇರವಾಗಿಯೇ ಹೇಳಿದ್ದಾರೆ. ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುವಾಗ ಭಾರತದ ಮೋದಿ ಸರ್ಕಾರವು ಪ್ಯಾಲೆಸ್ತೀನ್ ಗೆ ಔಷಧಿ ಹಾಗೂ ನೀರನ್ನು ಕಳುಹಿಸಿ ಮಾನವೀಯತೆ ಮೆರೆದಿತ್ತು. ಎರಡೂ ದೇಶಗಳಿಗೆ ಶಾಂತಿಯ ಸಂದೇಶ ನೀಡಿತ್ತು. ಹೀಗಿರುವಾಗ ಸಿನಿಮಾ ವಿಚಾರದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ ಎಂದು ನಾಗೇಂದ್ರ ಪ್ರಸಾದ್ ಪ್ರತಿಪಾದಿಸಿದ್ದಾರೆ.
ಬೀದಿ ನಾಯಿಗಳಿಗೂ ಕೇಂದ್ರವೇ ಹೊಣೆಯೇ
ತಮ್ಮ ಮಾತಿನ ಭರದಲ್ಲಿ ಪ್ರಕಾಶ್ ರಾಜ್ ವಿರುದ್ಧ ಹರಿಹಾಯ್ದ ನಾಗೇಂದ್ರ ಪ್ರಸಾದ್, ಪ್ರಕಾಶ್ ರಾಜ್ ಅವರಿಗೆ ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನೇ ದೂರುವ ಚಟವಿದೆ ಎಂದು ಲೇವಡಿ ಮಾಡಿದ್ದಾರೆ. ನಮ್ಮ ಬೀದಿಗಳಲ್ಲಿ ನಾಯಿಗಳ ಸಂಖ್ಯೆ ಜಾಸ್ತಿಯಾದರೆ ಅದಕ್ಕೂ ಕೇಂದ್ರ ಸರ್ಕಾರವೇ ಕಾರಣ ಎಂದು ಹೇಳಲು ಸಾಧ್ಯವೇ ಎಂದು ಪ್ರಶ್ನಿಸುವ ಮೂಲಕ ಪ್ರಕಾಶ್ ರಾಜ್ ಅವರ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಇದು ಸಿನಿಮಾಗಳ ಹಬ್ಬ, ಇಲ್ಲಿ ಕೇವಲ ಸಿನಿಮಾಗಳ ಬಗ್ಗೆ ಚರ್ಚೆಯಾಗಲಿ, ಅನಗತ್ಯ ರಾಜಕೀಯ ಬೇಡ ಎಂದು ಅವರು ತಾಕೀತು ಮಾಡಿದ್ದಾರೆ.
ವಿವಾದದ ನಡುವೆಯೂ ರಂಗೇರಿದ ಚಿತ್ರೋತ್ಸವ
ಒಂದೆಡೆ ಆರೋಪ ಪ್ರತ್ಯಾರೋಪಗಳ ಕಾವು ಏರಿದ್ದರೆ, ಮತ್ತೊಂದೆಡೆ ಸಿನಿಪ್ರಿಯರು ಚಿತ್ರೋತ್ಸವವನ್ನು ಸಂಭ್ರಮಿಸುತ್ತಿದ್ದಾರೆ. ಜನವರಿ 29 ರಿಂದ ಫೆಬ್ರವರಿ 6ರ ವರೆಗೆ ನಡೆಯಲಿರುವ ಈ ಉತ್ಸವದಲ್ಲಿ 70 ದೇಶಗಳ ಒಟ್ಟು 240 ಅತ್ಯುತ್ತಮ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ.
ಈ ಬಾರಿ ಸ್ತ್ರೀ ಎಂದರೆ ಅಷ್ಟೇ ಸಾಕೇ ಎಂಬ ವಿಶೇಷ ಥೀಮ್ ಅಡಿಯಲ್ಲಿ ಚಿತ್ರೋತ್ಸವ ನಡೆಯುತ್ತಿದೆ. ಕಳೆದ ಬಾರಿಗಳಂತೆ ಒರಾಯನ್ ಮಾಲ್ ಬದಲಿಗೆ, ಈ ಬಾರಿ ಲುಲು ಮಾಲ್ ನ ಸಿನಿಪೊಲಿಸ್ ಮಲ್ಟಿಪ್ಲೆಕ್ಸ್, ಬನಶಂಕರಿಯ ಸುಚಿತ್ರಾ ಫಿಲ್ಮ್ ಸೊಸೈಟಿ ಹಾಗೂ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ.
ಜಾಗತಿಕ ಮಟ್ಟದ ಸಿನಿಮಾಗಳ ದರ್ಶನ
ಆಸ್ಕರ್ ಪ್ರಶಸ್ತಿಗೆ ಶಾರ್ಟ್ ಲಿಸ್ಟ್ ಆಗಿರುವ ಚಿತ್ರಗಳು ಸೇರಿದಂತೆ ಬರ್ಲಿನ್, ವೆನಿಸ್, ಲೊಕಾರ್ನೂ, ಬೂಸಾನ್, ಟೊರಂಟೋ ಹಾಗೂ ಕಾನ್ಸ್ ನಂತಹ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಪಡೆದ ಸಿನಿಮಾಗಳು ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳುತ್ತಿರುವುದು ವಿಶೇಷವಾಗಿದೆ. ವಿವಾದಗಳಾಚೆಗೆ ಈ ಸಿನಿಮೋತ್ಸವವು ಕಲಾಭಿಮಾನಿಗಳಿಗೆ ರಸದೌತಣ ನೀಡುತ್ತಿದೆ








