ಬಿಜೆಪಿ ಅಧಿಕಾರಕ್ಕೆ ಬಂದ ನಂತ್ರ ಅಗತ್ಯ ವಸ್ತುಗಳ ಬೆಲೆ ಶೇ 40 ರಷ್ಟು ಏರಿಕೆ
ಬೆಂಗಳೂರು : ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಶೇಕಡಾ 40 ರಷ್ಟು ಹೆಚ್ಚಾಗಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ದೇಶದಲ್ಲಿ ಈ ಹಿಂದೆ 4000 ರೂಪಾಯಿಗೆ ನಡೆಸಬಹುದಾಗಿದ್ದ ಜೀವನ ನಿರ್ವಹಣೆ ವೆಚ್ಚ ಈಗ 10000 ರೂಪಾಯಿಗೆ ತಲುಪಿದೆ. ಈ ವಿಚಾರವನ್ನು ಪ್ರಸ್ತಾಪಿಸಿದರೂ ಕೇಂದ್ರ ಇಂಧನ ಸಚಿವ ಧಮೇರ್ಂದ್ರ ಪ್ರಧಾನ್, ಇಂಧನ ಬೆಲೆ ಇಳಿಕೆ ಮಾಡಲು ಸಾಧ್ಯವಿಲ್ಲ.
ದೇಶ ಮುನ್ನಡೆಸುವುದು ಕಷ್ಟ ಎನ್ನುತ್ತಿದ್ದಾರೆ. ಇದರಿಂದ ಜನ ಹೇಗೆ ಪ್ರತಿಕ್ರಿಯೆ ನೀಡಬೇಕು ತಿಳಿಯದೇ ಸುಮ್ಮನೆ ಕುಳಿತು ಬಿಟ್ಟಿದ್ದಾರೆ. ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ.
ಏನು ಮಾಡಬೇಕೆಂಬ ಅರಿವಿಲ್ಲದೆ ಜನ ಗೊಂದಲಕ್ಕೆ ಸಿಲುಕಿದ್ದಾರೆ. ದೇಶದ ಎರಡು ಲಕ್ಷ ಕೋಟಿಯಷ್ಟು ಆದಾಯ ಕಡಿಮೆ ಆಗಿದೆ. ದೇಶದ ಶೇ.90ರಷ್ಟು ಜನರ ಆರ್ಥಿಕ ಸ್ಥಿತಿ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ ಆಗಿದೆ ಎಂದರು.
ಇದೇ ವೇಳೆ ದೇಶದಲ್ಲಿ ಮೋದಿ ಬಂದಾಗಿನಿಂದ ಶ್ರೀಮಂತರ ಸಂಪತ್ತು ಹೆಚ್ಚಾಗುತ್ತಿದೆ ಎಂದು ದಿನೇಶ್, ಅದಾನಿ ಅವರ ಸಂಪತ್ತು ಕಳೆದ ಒಂದು ವರ್ಷದಲ್ಲಿ 3 ಲಕ್ಷ ಕೋಟಿ ರೂಪಾಯಿ ಹೆಚ್ಚಾಗಿದೆ.
ಹಳೆಯ ಸಂಪಾದನೆಗೆ ಇದು ಸೇರ್ಪಡೆಯಾಗಿದೆ. ಒಟ್ಟಾರೆ 43 ಬಿಲಿಯನ್ ಡಾಲರ್ನಷ್ಟು ಆದಾಯ ಹೆಚ್ಚಳವಾಗಿದೆ. ಶ್ರೀಮಂತರ ಸಂಪತ್ತು ಹೆಚ್ಚಾಗುತ್ತಿದೆ, ಬಡವರು ಇನ್ನಷ್ಟು ಬಡತನಕ್ಕೆ ಸಿಲುಕುತ್ತಿದ್ದಾರೆ.
ಇವರ ಆದಾಯ ಶೇ.35ರಷ್ಟು ಹೆಚ್ಚಳ ಆಗುತ್ತಿದೆ. ಕಾರ್ಮಿಕರು, ಕೃಷಿಕರು, ವ್ಯಾಪಾರಿಗಳು ಸೇವಾವಲಯದಲ್ಲಿ ಇರುವವರು ಸೇರಿದಂತೆ ಎಲ್ಲರ ಆದಾಯ ಕಡಿಮೆಯಾಗುತ್ತಿದೆ. ಇವರಿಗೆ ಸರ್ಕಾರ ಕಲ್ಪಿಸುತ್ತಿರುವ ಪರಿಹಾರ ಏನು ಎಂದು ಪ್ರಶ್ನೆ ಮಾಡಿದರು.