ಪ್ರಧಾನಿ ಭದ್ರತಾ ಲೋಪ – ಸುಪ್ರೀಂ ಕೋರ್ಟ್ ನಿಂದ ಇಂದು ತೀರ್ಪು…
ಪಂಜಾಬ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಲಿದೆ. ಜನವರಿ 5 ರಂದು ಪ್ರಧಾನಿಯವರ ಬೆಂಗಾವಲು ಪಡೆ ಫಿರೋಜ್ಪುರದಲ್ಲಿ 15 ನಿಮಿಷಗಳ ಕಾಲ ನಿಂತಲ್ಲೇ ನಿಲ್ಲಬೇಕಾಯಿತು. ನಂತರ ಪ್ರಧಾನಿ ಮೋದಿ ಸಮಾವೇಶವನ್ನ ರದ್ದುಪಡಿಸಿ ದೆಹಲಿಗೆ ಮರಳಿದರು.
ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರ ನೇತೃತ್ವದಲ್ಲಿ ತನಿಖೆಗಾಗಿ ಸಮಿತಿಯನ್ನ ರಚಿಸಲಾಗಿತ್ತು. ಫ್ಲೈಓವರ್ ನ್ನ ಸಹ ಪರಿಶೀಲಿಸಿದ್ದರು. ತನಿಖೆಯ ಸಂಪೂರ್ಣ ಫಲಿತಾಂಶ ಇಂದು ಹೊರಬೀಳಲಿದೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭದ್ರತಾ ಲೋಪ
ಪ್ರಧಾನಿಯವರಿಗೆ ಭದ್ರತೆ ಲೋಪವಾದಾಗ ಪಂಜಾಬ್ನಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಚರಂಜಿತ್ ಚನ್ನಿ ಆ ಸರ್ಕಾರದ ಸಿಎಂ ಆಗಿದ್ದರು. ಫಿರೋಜ್ಪುರದಲ್ಲಿ ಪ್ರಧಾನಿ ರ್ಯಾಲಿಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ರೈತರು ಹೆದ್ದಾರಿ ತಡೆ ನಡೆಸಿದರು. ಇದರಿಂದಾಗಿ ಪ್ರಧಾನಿಯವರ ಬೆಂಗಾವಲು ಪಡೆ ಫ್ಲೈಓವರ್ ಮೇಲೆ ಸಿಲುಕಿಕೊಂಡಿತು. ಈ ಮೇಲ್ಸೇತುವೆ ಭಾರತ-ಪಾಕಿಸ್ತಾನ ಗಡಿಯ ಸಮೀಪವೂ ಇತ್ತು. ಆದರೆ, ಇದನ್ನು ಭದ್ರತಾ ಲೋಪ ಎಂದು ಪರಿಗಣಿಸಲು ಸಿಎಂ ಚನ್ನಿ ನಿರಾಕರಿಸಿದ್ದರು. ಪ್ರಧಾನಿಗೆ ಯಾವುದೇ ಗೀರು ಬಿದ್ದಿಲ್ಲ, ಹಾಗಾದರೆ ಅವರ ಜೀವಕ್ಕೆ ಅಪಾಯವಾಗುವುದಾದರೂ ಹೇಗೆ ? ಎಂದು ಚರಂಜಿತ್ ಚನ್ನಿ ಪ್ರಶ್ನಿಸಿದ್ದರು.
ಘಟನೆಗೆ ಭಗವಂತ ಮಾನ್ ವಿಷಾದ
ಭದ್ರತಾ ಲೋಪದ ನಂತರ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಪಂಜಾಬ್ಗೆ ಭೇಟಿ ನೀಡಿದ್ದರು. ಈ ವೇಳೆ ಆಮ್ ಆದ್ಮಿ ಪಕ್ಷದ ಸಿಎಂ ಭಗವಂತ್ ಮಾನ್ ಈ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. . ಭದ್ರತಾ ಲೋಪದಿಂದಾಗಿ ಕಳೆದ ಬಾರಿ ಪ್ರಧಾನಿ ವಾಪಸ್ ಮರಳಬೇಕಾಯಿತು ಎಂದು ಭಗವಂತ್ ಮಾನ್ ಹೇಳಿದ್ದಾರೆ. ಪ್ರಧಾನಿಗೆ ಸಂಪೂರ್ಣ ವ್ಯವಸ್ಥೆ ಮಾಡುವುದು ಸರ್ಕಾರದ ಕರ್ತವ್ಯ ಎಂದು ತಿಳಿಸಿದ್ದಾರೆ.