ಕೋಲ್ಕತ್ತಾ: ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಗರೀಬ್ ಕಲ್ಯಾಣ್ ಯೋಜನೆಯನ್ನು ನವೆಂಬರ್ ವರೆಗೂ ವಿಸ್ತರಿಸಿದ್ದು, ಐದು ತಿಂಗಳು ಉಚಿತ ಪಡಿತರ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಇದರ ಬೆನ್ನಲ್ಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದಿನ ವರ್ಷ ಜೂನ್, 2021ರವರೆಗೆ ಉಚಿತ ರೇಷನ್ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ, ನಮ್ಮ ರಾಜ್ಯದಲ್ಲಿ ನಾವು 2021ರ ಜೂನ್ ವರೆಗೂ ಬಡಜನರಿಗೆ ಉಚಿತ ರೇಷನ್ ಕೊಡುತ್ತೇವೆ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಶೇ.60ರಷ್ಟು ಜನ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಒಳಪಟ್ಟವರಿದ್ದಾರೆ. ಇಂದು ಅವರಿಗೆ ಅಕ್ಕಿ, ಬೇಳೆ ಸಿಗುತ್ತದೆ. ಆದರೆ ಅವಧಿ ಮುಗಿದ ಮೇಲೆ ಅವರಿಗೆ ಏನೂ ಸಿಗುವುದಿಲ್ಲ. ಆದರೆ ನಾನು 2021ರ ಜೂನ್ ವರೆಗೂ ಬಡಜನರಿಗೆ ಉಚಿತ ರೇಷನ್ ಕೊಡಲು ನಿರ್ಧರಿಸಿದ್ದೇನೆ ಎಂದು ಘೋಷಿಸಿದರು.
ಅಷ್ಟೇ ಅಲ್ಲದೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬರೀ ಬಡವರಿಗೆ ಅಷ್ಟೇ ಅಲ್ಲ. ದೇಶದ 130 ಕೋಟಿ ಜನರಿಗೂ ಉಚಿತ ಅಕ್ಕಿ, ಬೇಳೆ ಕೊಡುವ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.
ಇನ್ನು ರಾಜ್ಯದಲ್ಲಿ ಬೆಳಗ್ಗೆ 5.30ರಿಂದ 8.30ರೊಳಗೆ ವಾಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು. ಮದುವೆ ಸೇರಿದಂತೆ ಶುಭ ಸಮಾರಂಭಗಳಲ್ಲಿ 50ಕ್ಕಿಂತ ಹೆಚ್ಚಿನ ಜನರು ಭಾಗವಹಿಸುವಂತಿಲ್ಲ. ಅಂತ್ಯಕ್ರಿಯೆ, ತಿಥಿ ಅಂತಹ ಕಾರ್ಯಗಳಲ್ಲಿ 25ಕ್ಕಿಂತ ಹೆಚ್ಚು ಜನರು ಭಾಗಿಯಾಗಿಸುವಂತಿಲ್ಲ ಎಂದು ದೀದಿ ಹೇಳಿದ್ದಾರೆ.








