ದಾವಣಗೆರೆ : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಬಿ. ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಇದ್ರೆ ಯಾವುದೇ ತನಿಖೆ ಮಾಡಿಸಲಿ ಎಂದು ಸವಾಲ್ ಎಸೆದಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಮಾಸ್ಕ್, ಸ್ಯಾನಿಟೈಸರ್ ಖರೀದಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಕುಣಿಯಲು ಬಾರದವರಿಗೆ ನೆಲ ಡೊಂಕು ಎಂಬಂತೆ ವಿಪಕ್ಷಗಳು ವರ್ತಿಸುತ್ತಿವೆ ಎಂದು ವ್ಯಂಗ್ಯವಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ವಿಪಕ್ಷದವರು ಏನು ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸಿರುವ ರಾಮುಲು, ಕೇವಲ ಆರೋಪದಿಂದ ಪ್ರಯೋಜನವಿಲ್ಲ, ಕೋವಿಡ್ ಸಂದರ್ಭದ ನಯಾ ಪೈಸೆಯ ಖರ್ಚು ವೆಚ್ಚದ ಲೆಕ್ಕಾಚಾರ ನೀಡುತ್ತೇವೆ. ಯಾವುದೇ ತನಿಖೆಗೂ ಸಿದ್ಧ. ಸುಳ್ಳು ಆರೋಪ ಮಾಡುವುದು ಬೇಡ ಎಂದು ಗುಡುಗಿದರು.
ಇದೇ ವೇಳೆ ಸರ್ಕಾರದ ಕಾರ್ಯವನ್ನು ಸಮರ್ಥಿಸಿಕೊಂಡ ರಾಮುಲು, ಸಿದ್ದರಾಮಯ್ಯ ಅವರು ಆರೋಪ ಮಾಡುವುದು ಬೇಡ ಅದನ್ನು ಸಾಬೀತುಪಡಿಸಲಿ ಎಂದು ಸವಾಲ್ ಹಾಕಿದ ಅವರು, ಸಿದ್ದರಾಮಯ್ಯ ಕೇಳುವ ಪ್ರತಿಯೊಂದು ಆರೋಪಕ್ಕೆ ಉತ್ತರವಿದೆ. ದೇಶದಲ್ಲಿ ಕರ್ನಾಟಕದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಜಗತ್ತಿನಲ್ಲಿ ಭಾರತ ಕೊರೊನಾ ವಿಚಾರ ಉತ್ತಮ ಕೆಲಸ ಮಾಡಿದೆ ಎಂದರು.
ಇದೇ ವೇಳೆ ಶ್ವೇತ ಪತ್ರ ಹೊರಡಿಸಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸದ್ಯ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಇದ್ರೆ ಯಾವುದೇ ತನಿಖೆ ಮಾಡಿಸಲಿ, ಖರ್ಚು ಮಾಡಿದ ಪ್ರತಿ ಪೈಸೆಗೂ ಲೆಕ್ಕ ಕೊಡುತ್ತೇವೆ. ಶ್ವೇತ ಪತ್ರ ಹೊರಡಿಸಲು ಸಿದ್ಧ. ಸಿದ್ದರಾಮಯ್ಯ ಮಾಡಿದ ಆರೋಪ ಸಾಬೀತುಪಡಿಸಲಿ. ಬೇಕಾದರೇ ನಾವು ಶ್ವೇತ ಪತ್ರ ಹೊರಡಿಸುತ್ತೇವೆ. ಆರೋಪ ಬಿಟ್ಟು ಕೊರೊನಾ ಸಂಕಷ್ಟ ಕಾಲದಲ್ಲಿ ಕಾಂಗ್ರೆಸ್ ರಾಜ್ಯ ಸರ್ಕಾರ ಜೊತೆ ಕೈಜೋಡಿಸಲಿ. ಕಾಂಗ್ರೆಸ್ ನವರ ಕೊರೊನಾ ವೇಳೆ ವಾರಿಯರ್ಸ್ ಆಗಿ ಕೆಲಸ ಮಾಡಿಲ್ಲ, ಸಂಘ ಸಂಸ್ಥೆಯವರು ಕೆಸಲ ಮಾಡುತ್ತಿವೆ. ಆದರೆ, ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡುತ್ತಿಲ್ಲ ಎಂದು ರಾಮುಲು ಆರೋಪ ಮಾಡಿದರು.